ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಗ್ರಾಮೀಣ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಸಿಗುತ್ತಿರುವುದು ಸಂತಸದ ವಿಷಯ ಎಂದು ಅಂತಾರಾಷ್ಟ್ರೀಯ ಪ್ಯಾರಾ ಅಥ್ಲೀಟ್ ರಕ್ಷಿತಾ ರಾಜು ಹೇಳಿದರು.
ತಿಕೋಟಾದಲ್ಲಿರುವ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಎ. ಬಿ. ಜತ್ತಿ ಪಿಯು ಕಾಲೇಜು(ಪ್ರೌಢಶಾಲೆ ವಿಭಾಗ) ನಲ್ಲಿ ಖ್ಯಾತ ವೈದ್ಯ ದಿ. ಡಾ. ಸಿ. ಆರ್. ಬಿದರಿ ಅವರ ಸ್ಮರಣಾರ್ಥ ಎರಡು ದಿನಗಳ ಕಾಲ ಆಯೋಜಿಸಿದ್ದ ಬಿ.ಎಲ್.ಡಿ.ಇ ಸಂಸ್ಥೆಯ 11ನೇ ಅಂತರಶಾಲೆ ಮತ್ತು ಕಾಲೇಜುಗಳ ಅಥ್ಲೇಟಿಕ್ ಕ್ರೀಡಾ ಕೂಟದ ಸಮಾರೋಪ ಸಮಾರಂಭದಲ್ಲಿ ನಾನಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಡಾ. ಸಿ. ಆರ್. ಬಿದರಿ ಕುಟುಂಬದವರು ಇಂಥ ಅಥ್ಲೇಟಿಕ್ ಕ್ರೀಡಾಕೂಟ ಆಯೋಜಿಸುತ್ತಿರುವುದು ಗ್ರಾಮೀಣ ಕ್ರೀಡಾಪಟುಗಳ ಪಾಲಿಗೆ ವರದಾನವಾಗಿದೆ. ಯುವತಿಯರು ಕೂಡಾ ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಉನ್ನತ ಸಾಧನೆ ಮಾಡಬಹುದು. ಆಶಾ ಎಂ. ಪಾಟೀಲ ಅವರು ತಮ್ಮ ತಂದೆಯ ಸ್ಮರಣಾರ್ಥ ಇಂಥ ಕ್ರೀಡಾಕೂಟ ಆಯೋಜಿಸಿರುವುದು ಸಂತಸದ ವಿಷಯ. ಕ್ರೀಡೆಗಳಲ್ಲಿ ಸೋಲು ಗೆಲವು ಸಾಮಾನ್ಯ. ಶ್ರಮ ವಹಿಸಿ ಏಕಾಗ್ರತೆಯಿಂದ ಸಾಧನೆ ಮಾಡಬಹುದು. ಬಿ.ಎಲ್.ಡಿ.ಇ ಸಂಸ್ಥೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡುತ್ತಿದೆ. ಯುವಕರು ಸಾಮಾಜಿಕ ಜಾಲತಾಣಗಳ ದಾಸರಾಗುವುದನ್ನು ಬಿಟ್ಟು ಜೀವನದ ಮುಖ್ಯ ಗುರಿಗಳ ಕಡೆ ಗಮನ ಹರಿಸಬೇಕು. ಜಿಲ್ಲೆಯ ಯುವಕ ಯುವತಿಯರು ಮುಂಬರುವ ದಿನಗಳಲ್ಲಿ ಏಷಿಯನ್ ಗೇಮ್ಸ್ ಮತ್ತು ಓಲಂಪಿಕ್ಸಗಳಲ್ಲಿ ಗೆದ್ದು ನಾಡಿಗೆ ಕೀರ್ತಿ ತರಬೇಕು ಎಂದು ಹೇಳಿದರು.
ಬಂಜಾರ ಕಸೂತಿ ಸಂಸ್ಥೆಯ ಸಂಸ್ಥಾಪಕಿ ಆಶಾ ಎಂ. ಪಾಟೀಲ ಮಾತನಾಡಿ, ಕ್ರೀಡೆಗಳಲ್ಲಿ ಕೇವಲ ಒಂದು ದಿನ ಪಾಲ್ಗೊಂಡರೆ ಸಾಲದು. ನಿರಂತರವಾಗಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಇದಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಬಿ.ಎಲ್.ಡಿ.ಇ ಸಂಸ್ಥೆಯ ಜಮಖಂಡಿ ಆವರಣದ ಆಡಳಿತ ಅಧಿಕಾರಿ ಎಸ್. ಎಚ್. ಲಗಳಿ ಮಾತನಾಡಿ, ಇಂದಿನ ದಿನಗಳಲ್ಲಿ ಕ್ರೀಡಾ ಚಟುವಟಿಕೆಗಳು ಅಗತ್ಯವಾಗಿದ್ದು, ಎಲ್ಲರು ಇಂಥ ಕ್ರೀಡಾಕೂಟಗಳನ್ನು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯೇಂದ್ರ ಬಿದರಿ, ಬಿ.ಎಲ್.ಡಿ.ಇ ಡೀಮ್ಸ್ ವಿವಿ ರಜೀಸ್ಟಾರ್ ಡಾ. ಆರ್. ವಿ. ಕುಲಕರ್ಣಿ, ಬಿ.ಎಲ್.ಡಿ.ಇ ಸಂಸ್ಥೆಯ ಆಡಳಿತಾಧಿಕಾರಿಗಳಾದ ವಿ. ಎಸ್. ಬಗಲಿ, ಐ. ಎಸ್. ಕಾಳಪ್ಪನವರ, ದೈಹೀಕ ಶಿಕ್ಷಣ ನಿರ್ದೇಶಕರಾದ ಎಸ್. ಎಸ್. ಕೋರಿ, ಜಗದೀಶ ಪಾಟೀಲ, ಕೈಲಾಸ ಹಿರೇಮಠ, ಮಹಾದೇವಿ ವಾಲಿ, ಕ್ರೀಡಾಕೂಟ ಸಂಘಟಕ ಶಿವರಾಜ ಕಲ್ಯಾಣ ಮುಂತಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಬಸಲಿಂಗಮ್ಮ ಹಯ್ಯಾಳ ನಿರೂಪಿಸಿದರು. ಪ್ರಾಚಾರ್ಯ ಶಿಲ್ಪಾ ಪಾಟೀಲ ವಂದಿಸಿದರು.

