ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲಘಟ್ಟಕ್ಕೆ ಸೇರಿದ ದೇಗುಲ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಗಾನಯೋಗಿ ಸಂಘದ ವತಿಯಿಂದ 11ನೇ ಶತಮಾನದ ಪ್ರಾಚೀನ ಶಿವಾಲಯದ ಸ್ವಚ್ಛತಾ ಸೇವೆ ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮದಲ್ಲಿರುವ ಕಲ್ಯಾಣಿ ಚಾಲುಕ್ಯರ ಕಾಲಘಟ್ಟಕ್ಕೆ ಸೇರಿದ (ಕ್ರಿ.ಶ. 11ನೇ ಶತಮಾನ) ನಕ್ಷತ್ರಾಕಾರದ ವಾಸ್ತುಶೈಲಿಯ ಪ್ರಾಚೀನ ಶಿವ ದೇವಾಲಯ ನಮ್ಮ ಇತಿಹಾಸ ಹಾಗೂ ಶೈವ ಪರಂಪರೆಯ ಅಮೂಲ್ಯ ಸಾಕ್ಷಿಯಾಗಿದೆ. ಕಲ್ಯಾಣಿ ಚಾಲುಕ್ಯರು (ಪಶ್ಚಿಮ ಚಾಲುಕ್ಯರು) ಕಾಲದಲ್ಲಿ, ಸುಮಾರು ಕ್ರಿ.ಶ. 1050–1100ರ ಅವಧಿಯಲ್ಲಿ ನಿರ್ಮಾಣಗೊಂಡಿದೆ ಎನ್ನಲಾದ ಈ ದೇವಾಲಯವು ಚಾಲುಕ್ಯರ ವಾಸ್ತುಶೈಲಿಯ ಉತ್ತಮ ಉದಾಹರಣೆಯಾಗಿದೆ.
ಈ ಏಕೂಟ ಶಿವಾಲಯವು ಎತ್ತರವಾದ ಅಧಿಷ್ಠಾನದ ಮೇಲೆ ನಿರ್ಮಿತವಾಗಿದ್ದು, ಎರಡು ಮುಖದ ಮಂಟಪ, ನವರಂಗ, ಅಂತರಾಳ ಮತ್ತು ಲಿಂಗ ಪ್ರತಿಷ್ಠಿತ ಗರ್ಭಗೃಹವನ್ನು ಒಳಗೊಂಡಿದೆ. ದೇವಾಲಯದ ಗೋಡೆಗಳ ಮೇಲೆ ಸೂಕ್ಷ್ಮ ಶಿಲ್ಪಕಲಾ ಕೆಲಸ, ಅಲಂಕಾರಿಕ ಕಂಬಗಳು ಹಾಗೂ ಲತಾಪಾತ್ರ ವಿನ್ಯಾಸಗಳು ಕಂಡುಬರುತ್ತವೆ. ದೇವಾಲಯದ ಹೊರಾಂಗಣ ಶೈಲಿ ಐಹೊಳೆಯ ದುರ್ಗಾ ದೇವಾಲಯದ ಶೈಲಿಗೆ ಹೋಲಿಕೆಯನ್ನು ಹೊಂದಿದ್ದು, ಕಾಲಕ್ರಮೇಣ ಕೆಲವು ಭಾಗಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆ (ASI) ಯಿಂದ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಕಾರ್ಯವೂ ನಡೆದಿದೆ.
ಆದರೆ ಇತ್ತೀಚಿನ ವರ್ಷಗಳಲ್ಲಿ ಈ ದೇವಸ್ಥಾನವನ್ನು ನೋಡಿಕೊಳ್ಳುವವರು ಇಲ್ಲದ ಕಾರಣ ದೇವಾಲಯದ ಆವರಣ ವಿಪರೀತ ಧೂಳು, ತಂಬಾಕು, ಸಿಗರೇಟ್, ಮಧ್ಯದ ಬಾಟಲುಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿಕೊಂಡಿತ್ತು. ಈ ದುಸ್ಥಿತಿಯನ್ನು ಗಮನಿಸಿದ ಗಾನಯೋಗಿ ಸಂಘ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಸೇವಾ ಕಾರ್ಯವನ್ನು ಹಮ್ಮಿಕೊಂಡಿತು. ಈ ಸೇವಾ ಕಾರ್ಯದಲ್ಲಿ ಸ್ಥಳೀಯ ಯುವಕರು ಸಹ ಸ್ವಯಂ ಪ್ರೇರಿತವಾಗಿ ಕೈಜೋಡಿಸಿದ್ದು ವಿಶೇಷವಾಗಿತ್ತು. ದೇವಾಲಯದ ಒಳ ಹಾಗೂ ಹೊರ ಆವರಣವನ್ನು ಸಂಪೂರ್ಣವಾಗಿ ಶುದ್ಧ ನೀರಿನಿಂದ ತೊಳೆದು, ಅಲ್ಲೇ ಪ್ರತಿಷ್ಠಿತ ಶಿವಲಿಂಗಕ್ಕೆ ಪೂಜೆ ಸಲ್ಲಿಸಲಾಯಿತು.
ಮುಂದಿನ ದಿನಗಳಲ್ಲಿ ಈ ಪವಿತ್ರ ಹಾಗೂ ಐತಿಹಾಸಿಕ ಸ್ಥಳದಲ್ಲಿ ಯಾವುದೇ ರೀತಿಯ ಅಪಚಾರ, ಗಲೀಜು ಅಥವಾ ದುರುಪಯೋಗ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸಂಬಂಧಪಟ್ಟ ಪೊಲೀಸ್ ಸ್ಟೇಷನ್ ಮತ್ತು ಗ್ರಾಮ ಪಂಚಾಯಿತಿಗೆ ಸಂಘದ ವತಿಯಿಂದ ಮನವಿ ಪತ್ರವನ್ನು ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಆರ್.ಕೆ. ಮಾತನಾಡಿ, “ಇಂತಹ ಪ್ರಾಚೀನ ಹಾಗೂ ಪವಿತ್ರ ಶಿವಾಲಯ ನಮ್ಮ ಭಾಗದಲ್ಲಿರುವುದು ನಮ್ಮ ಪುಣ್ಯ. ಇಂತಹ ದೇವಸ್ಥಾನಗಳನ್ನು ಕೇವಲ ಸರ್ಕಾರದ ಮೇಲೆ ಬಿಟ್ಟುಬಿಡದೇ, ನಾವು ಎಲ್ಲರೂ ಕಾಳಜಿಯಿಂದ ನೋಡಿಕೊಂಡು ಹೋಗಬೇಕು. ದೇವಾಲಯದ ಆವರಣದಲ್ಲಿ ಧೂಮಪಾನ, ಮಧ್ಯಪಾನ ಹಾಗೂ ಯಾವುದೇ ರೀತಿಯ ಕೆಟ್ಟ ಚಟಗಳು ಮತ್ತು ಅಸಭ್ಯ ಕೃತ್ಯಗಳಿಗೆ ಅವಕಾಶ ನೀಡಬಾರದು” ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷರಾದ ಪ್ರಕಾಶ್ ಆರ್.ಕೆ. ಅವರೊಂದಿಗೆ ವಿಕಾಸ್, ರವಿ, ಸಚಿನ್, ರಾಜಕುಮಾರ್, ವೀರೇಶ್, ವಿಠ್ಠಲ್, ಸಂತೋಷ್, ಮಹೇಶ್, ಕಿರಣ್ ವಾಸು, ಶ್ರೀನಾಥ್, ಪ್ರದೀಪ್, ಮಂಜುನಾಥ್, ಸಂದೀಪ್, ಡಿಜೆ ಸಾಗರ್ ಹಾಗೂ ಸ್ಥಳೀಯ ಯುವಕರು ಉಪಸ್ಥಿತರಿದ್ದರು. ಸ್ಥಳೀಯರು ಈ ದೇವಾಲಯವನ್ನು ಅತ್ಯಂತ ಪವಿತ್ರ ಶಿವಾಲಯವೆಂದು ಭಾವಿಸುತ್ತಿದ್ದು, ಮಹಾಶಿವರಾತ್ರಿ ಹಾಗೂ ಕಾರ್ತಿಕ ಮಾಸದಲ್ಲಿ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಸಮೀಪದಲ್ಲಿರುವ ರೇವಣಸಿದ್ದೇಶ್ವರ ದೇವಾಲಯದ ಕಾರಣ ಈ ಪ್ರದೇಶವು ಒಂದು ಕಾಲದಲ್ಲಿ ಶೈವ ಪರಂಪರೆಯ ಪ್ರಮುಖ ಕೇಂದ್ರವಾಗಿತ್ತು ಎನ್ನಲಾಗುತ್ತದೆ.

