ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿ ಜಲಾಶಯದ ಭದ್ರತೆಗೆ ನಿಯೋಜಿಸಿದ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ (ಕೆಎಸ್ ಐಎಸ್ ಎಫ್) ಕಾರ್ಯವೈಖರಿ ಹಾಗೂ ಭದ್ರತೆಯ ಬಗ್ಗೆ ಧಾರವಾಡ ಮೂರನೇ ಪಡೆಯ ಕಮಾಂಡೆಂಟ್ ಗುರುನಾಥ ಮಂಗಳವಾರ ಪರಿಶೀಲನೆ ನಡೆಸಿದರು.
ಆಲಮಟ್ಟಿ ಜಲಾಶಯ, ಪ್ರವೇಶ ದ್ವಾರ, ನಾನಾ ಕಡೆ ನಿಗದಿಗೊಳಿಸಿರುವ ಪೊಲೀಸ್ ಚೆಕ್ ಪೋಸ್ಟ್, ಚೆಕ್ ಪಾಯಿಂಟ್ ಗಳನ್ನು ಪರಿಶೀಲಿಸಿದರು.
ಆಲಮಟ್ಟಿ ಪೆಟ್ರೋಲ್ ಪಂಪ್ ಬಳಿಯಿಂದ ಪ್ರವೇಶಿಸುವ ಪ್ರತಿ ವಾಹನಗಳ ಸಂಖ್ಯೆಯಲ್ಲಿ ಡೈರಿಯಲ್ಲಿ ನಮೂದಿಸಬೇಕು, ವಾಹನಗಳ ಡಿಕ್ಕಿ ತೆಗೆದು ಪರಿಶೀಲಿಸಬೇಕು, ಬಂದ ಸಾರ್ವಜನಿಕರೊಂದಿಗೆ ಸೌಮ್ಯದಿಂದ ವರ್ತಿಸಬೇಕು ಎಂದು ಸೂಚಿಸಿದರು.
ನಂತರ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಅವರೊಂದಿಗೆ ಚರ್ಚಿಸಿದ ಗುರುನಾಥ, ಭದ್ರತೆ ಕಟ್ಟುನಿಟ್ಟುಗೊಳಿಸಲು ಕೈಗೊಳ್ಳಬಹುದಾದ ನಾನಾ ಕ್ರಮಗಳನ್ನು ಚರ್ಚಿಸಿದರು. ಸದ್ಯ ಆಲಮಟ್ಟಿ ಜಲಾಶಯದ ಹಿಂಭಾಗದಲ್ಲಿ ಬೋಟ್ ಇದೆ. ಜಲಾಶಯದ ಮುಂಭಾಗದಲ್ಲಿಯೂ ಒಂದು ಬೋಟ್ ವ್ಯವಸ್ಥೆ ಮಾಡಲು ತಿಳಿಸಿದರು.
ಬೋಟ್ ನೀಡಿದರೆ ಜಲಾಶಯದ ನಿಷೇಧಿತ ಸ್ಥಳಗಳಲ್ಲಿ ಮೀನುಗಾರಿಕೆ ಸೇರಿದಂತೆ ನಾನಾ ಕ್ರಮಗಳನ್ನು ತಡೆಗಟ್ಟಲು ಸಹಾಯವಾಗಲಿದೆ ಎಂದರು. ಇನ್ನೊಂದು ಬೋಟ್ ಒದಗಿಸುವ ಕ್ರಮ ಕೈಗೊಳ್ಳುವ ಭರವಸೆಯನ್ನು ಡಿ.ಬಸವರಾಜ ನೀಡಿದರು.
ಈಗಿರುವ ವ್ಯವಸ್ಥೆಯಲ್ಲಿಯೇ ನಿಷೇಧಿತ ಸ್ಥಳಗಳಲ್ಲಿ ಮೀನುಗಾರಿಕೆ ನಡೆಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಿದರು.
ಈ ಸಂದರ್ಭದಲ್ಲಿ ಅಸಿಸ್ಟಂಟ್ ಕಮಾಂಡೆಂಟ್ ಈರಪ್ಪ ವಾಲಿ, ಆಲಮಟ್ಟಿ ಜಲಾಶಯದ ಭದ್ರತಾ ಉಸ್ತುವಾರಿ ಶಿವಲಿಂಗ ಕುರೆನ್ನವರ, ಇನ್ಸ್ ಪೆಕ್ಟರ್ ಅಹ್ಮದ್ ಸಂಗಾಪುರ, ಪಿಎಸ್ ಐ ಪ್ರಶಾಂತ ಸಜ್ಜನ, ಸುಧಾರಾಣಿ ಬಿರಾದಾರ ಮತ್ತೀತರರು ಇದ್ದರು.

