ಬಾದಾಮಿಯಲ್ಲಿ ನಡೆದ ಶಿಕ್ಷಕ ಕೃಷ್ಣಪ್ಪ ಪೂಜಾರಿ ಅವರ ಸೇವಾ ನಿವೃತ್ತಿ ಪ್ರಯುಕ್ತ ನಡೆದ ಅಭಿನಂದನಾ ಸಮಾರಂಭ
ಉದಯರಶ್ಮಿ ದಿನಪತ್ರಿಕೆ
ಬದಾಮಿ: ಜೀವಪರ ನಿಲುವಿನ ಸಹೃದಯಿ ಶಿಕ್ಷಕ ಕೃಷ್ಣಾ ಪೂಜಾರ ಅವರದು ಬಹುಮುಖ ವ್ಯಕ್ತಿತ್ವ. ತಮ್ಮ ಅನೇಕ ಶಿಷ್ಯರ ಪ್ರತಿಭೆಯನ್ನು ಗುರುತಿಸಿ ಅವರ ಭವಿಷ್ಯ ರೂಪಿಸಲು ಸರ್ವ ಪ್ರಯತ್ನಗಳನ್ನು ಮಾಡಿದ್ದಾರೆ. ಸರ್ವರನ್ನು “ಇವನಾರವ ಎನ್ನದೆ, ಇವ ನಮ್ಮವ” ಎಂಬ ಬಸವಾದಿ ಶರಣರ ನಡೆ ಅವರದಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ’ಉದಯರಶ್ಮಿ’ ದಿನಪತ್ರಿಕೆಯ ಸಂಪಾದಕ ಇಂದುಶೇಖರ ಮಣೂರ ಹೇಳಿದರು.
ಪಟ್ಟಣದ ಗಣೇಶ ದೇವಸ್ಥಾನದ ಸಭಾಭವನದಲ್ಲಿ ಶಿಕ್ಷಕ ಕೃಷ್ಣಪ್ಪ ಪೂಜಾರಿ ಅವರ ಸೇವಾ ನಿವೃತ್ತಿ ಪ್ರಯುಕ್ತ ನಿಮಿತ್ತ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳು ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ತಾಲೂಕಿನ ನೀರಲಕೇರಿ ಜಿಎಂಪಿಎಸ್ ಮುಖ್ಯ ಶಿಕ್ಷಕ ಎನ್.ಕೆ.ಚವ್ಹಾಣ, ಶಿಕ್ಷಕ ಬಿ.ಎಚ್.ನದಾಫ ಮಾತನಾಡಿ, ಶಿಕ್ಷಕ ಕೃಷ್ಣಪ್ಪ ಅವರು ಶಾಲೆಯಲ್ಲಿ ನಮ್ಮನ್ನೆಲ್ಲ ವೃತ್ತಿ ಬಾಂಧವರಂತೆ ಕಾಣದೆ ಮನೆ ಮಕ್ಕಳಂತೆ ಕಂಡು ನಮಗೆಲ್ಲ ಮಾರ್ಗದರ್ಶನ ಮಾಡುತ್ತಿದ್ದರು. ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಲು ಅವರ ಪಾತ್ರ ಮುಖ್ಯವಾಗಿತ್ತು. ಮಕ್ಕಳ ಒಲವು ಸಂಪಾದಿಸಿದ ಆದರ್ಶ ಶಿಕ್ಷಕ ಅವರಾಗಿದ್ದರು ಎಂದು ಗುಣಗಾನ ಮಾಡಿದರು.

ಪಟ್ಟಣದ ವಾರ್ಡ್ ನಂ.೧೦ ರ ಪುರಸಭೆ ಸದಸ್ಯ ನಾಗರಾಜ ಕಾಚಟ್ಟಿ ಮಾತನಾಡಿ, ಶಿಕ್ಷಕ ಕೃಷ್ಣಪ್ಪ ಪೂಜಾರ ಅವರು, ಹಿರಿಯರೊಂದಿಗೆ ಹಿರಿಯರಾಗಿ, ಕಿರಿಯರೊಂದಿಗೆ ಕಿರಿಯರಾಗಿ ನಮ್ಮ ಗಾರ್ಡನ್ ಕಾಲೊನಿಯ ಎಲ್ಲ ಉತ್ಸವಗಳಲ್ಲೂ ದಣಿವರಿಯದೆ ಪಾಲ್ಗೊಂಡು ಅವುಗಳ ಯಶಸ್ಸಿಗೆ ಶ್ರಮಿಸುವ ಸಂಘಜೀವಿಯಾಗಿದ್ದಾರೆ ಎಂದು ಬಣ್ಣಿಸಿದರು.
ಶಿಕ್ಷಕ ಕೃಷ್ಣಪ್ಪ ಪೂದಾರ ಸುಪುತ್ರ, ಅಭಿಯಂತರ ಮಂಜುನಾಥ ಮಾತನಾಡಿ, ತಂದೆಯವರು ನನಗೆ ಹಾಗೂ ನನ್ನ ಸಹೋದರಿಯರಿಗೆ ಉತ್ತಮ ಸಂಸ್ಕಾರ ಮತ್ತು ಉನ್ನತ ಶಿಕ್ಷಣ ನೀಡಿರುವ ಕಾರಣದಿಂದಲೇ ನಾವೆಲ್ಲ ಇಂದು ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಇಂದು ಅವರ ಸಹೋದ್ಯೋಗಿಗಳು, ಮಿತ್ರರು ಹೃದಯತುಂಬಿ ಮಾಡಿದ ತಂದೆಯ ಗುಣಗಾನ ಕೇಳಿ ಅವರ ಬಗೆಗಿನ ಗೌರವ ಇಮ್ಮಡಿಯಾಗಿದೆ. ಅವರ ಪುತ್ರನಾಗಿ ನನ್ನಲ್ಲಿ ಧನ್ಯತಾ ಭಾವ ಮೂಡಿದೆ ಎಂದು ಭಾವುಕರಾಗಿ ನುಡಿದರು.
ಇದೇ ವೇಳೆ ಶಿಕ್ಷಕ ಕೃಷ್ಣಪ್ಪ ಪೂಜಾರ, ಧರ್ಮಪತ್ನಿ ಸುನಂದಾ ಪೂಜಾರ ದಂಪತಿಗೆ ಶಿಕ್ಷಕ ಬಂಧುಗಳು, ಪಟ್ಟಣದ ಗಣ್ಯರು ಮತ್ತು ಗಾರ್ಡನ್ ಕಾಲೊನಿ ನಿವಾಸಿಗಳು ಸನ್ಮಾನಿಸಿ ಗೌರವಿಸಿದರು.
ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಹಿರಿಯ ಶಿಕ್ಷಕ ಕೃಷ್ಣಪ್ಪ ಪೂಜಾರ, ತಮ್ಮೆಲ್ಲರ ಹಾರೈಕೆ, ಗೌರವ ಕಂಡು ನನ್ನ ವೃತ್ತಿಜೀವನದಲ್ಲಿ ಸಾರ್ಥಕತೆ ಭಾವ ಮೂಡಿದೆ. ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಶಿಕ್ಷಕನಾಗಿ ನಿವೃತ್ತಿ ಹೊಂದಿರಬಹುದು. ಇದನ್ನು ಮುಕ್ತಾಯವೆಂದು ಭಾವಿಸದೆ ಎರಡನೆ ಇನ್ನಿಂಗ್ಸ್ ನ ಆರಂಭವೆಂದು ಅರ್ಥೈಸಿಕೊಂಡು ಸಮಾಜಸೇವೆಯಲ್ಲಿ ತೊಡಗಿಕೊಳ್ಳುವುದಾಗಿ ತಿಳಿಸಿದರು.
ಹಿರಿಯ ಪತ್ರಕರ್ತ ಇಂದುಶೇಖರ ಮಣೂರ ಸ್ವಾಗತಿಸಿದರು. ಶ್ರೀಮತಿ ಜಯಶ್ರೀ ಜುಮ್ಮನಗೌಡರ ನಿರೂಪಿಸಿದರು. ಮುಖ್ಯ ಗುರು ಝೆಡ್.ಕೆ.ಹುಸೇನಭಾಯಿ ಪರಿಚಯಿಸಿದರು. ಎಲ್ಐಸಿ ಅಧಿಕಾರಿ ಎನ್.ಎಂ.ಕುಂಬಾರ ವಂದಿಸಿದರು.
ಕಾರ್ಯಕ್ರಮದಲ್ಲಿ ಗಾರ್ಡನ್ ಕಾಲೋನಿಯ ಮುಖಂಡರಾದ ರಾಜೂ ಕಾಚಟ್ಟಿ ಪುರಸಭೆ ಸದಸ್ಯರು, ಎಸ್.ಎನ್.ಪರೂತಿ ಅಧ್ಯಕ್ಷರು, ಶಂಕ್ರಣ್ಣ ತೆಗ್ಗಿನಮನಿ, ಆರ್.ಆರ್.ಪಾಟೀಲ, ಬಂದೇನವಾಜ ಕೆಸರಟ್ಟಿ, ಬಿ.ಬಿ.ಶಾಂತಪ್ಪನವರ್, ಸಿ.ಎಸ್.ಕುಂಬಾರ, ಎನ್.ಎಮ್.ಕುಂಬಾರ, ಪಿಎಸೈ ರಾಘವೇಂದ್ರ ಗುರ್ಲ್, ನಿವೃತ್ತ ಯೋಧ ಬಸವರಾಜ ಮೆಣಸಗಿ, ಸಂಜೀವ ಬರಗುಂಡಿ ಸೇರಿದಂತೆ ಅನೇಕ ಶಿಕ್ಷಕರಿದ್ದರು.

ಪುಷ್ಪವೃಷ್ಟಿಗೈಯುತ್ತ ಕರೆತಂದರು
ಕಾರ್ಯಕ್ರಮಕ್ಕೂ ಮುನ್ನ ಶಿಕ್ಷಕ ಕೃಷ್ಣಪ್ಪ ಪೂಜಾರ ದಂಪತಿಯನ್ನು ಅವರ ಹಿತೈಷಿಗಳು, ಬಂಧು-ಮಿತ್ರರು ಮತ್ತು ಕುಟುಂಬ ವರ್ಗದವರು ದಾರಿಯುದ್ದಕ್ಕೂ ನಿರಂತರ ಪುಷ್ಪವೃಷ್ಟಿಗೈಯುತ್ತ ವೇದಿಕೆಯ ಸ್ಥಳಕ್ಕೆ ಕರೆತರುವ ದೃಶ್ಯ ಎಲ್ಲರ ಮನಸೂರೆಗೊಂಡಿತು.

“ಮಕ್ಕಳಿಗೆ ಇಂದು ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ. ನೀತಿಬೋಧನೆಯಿಲ್ಲದ ಪಾಠ ವ್ಯರ್ಥ. ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿದಾಗ ಮಾತ್ರ ಅವರು ಸಮಾಜದಲ್ಲಿ ಸಭ್ಯ ನಾಗರಿಕರಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬಲ್ಲರು. ಸಮಾಜದ ಸ್ವಾಸ್ಥ್ಯ ಕಾಪಾಡಬಲ್ಲರು.”
– ಕೃಷ್ಣಪ್ಪ ಪೂಜಾರ
ನಿವೃತ್ತ ಶಿಕ್ಷಕರು, ಬದಾಮಿ

