ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಭಾರತ ಜಗತ್ತಿಗೆ ನೀಡಿದ ಮಹೋನ್ನತ ಕೊಡುಗೆಗಳಲ್ಲಿ ಯೋಗವು ಒಂದಾಗಿದ್ದು ಪ್ರತಿ ದಿನ ಯೋಗ ಮಾಡಿದರೆ ರೋಗವು ದೂರವಾಗುತ್ತದೆ ಎಂದು ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ ಹೇಳಿದರು.
ಅವರು ಪಿ.ಎಂ.ಶ್ರೀ. ಕರ್ನಾಟಕ ಪಬ್ಲಿಕ್ ಶಾಲೆ ಕುಂಬಾರಹಳ್ಳದಲ್ಲಿ ಸಂಪನ್ನಗೊಂಡ ಹನ್ನೆರಡನೆಯ ವಿಶ್ವ ಯೋಗ ದಿನದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದು ಜಗತ್ತಿನಾದ್ಯಂತ ಜನರು ಯೋಗದತ್ತ ಮುಖ ಮಾಡಿದ್ದಾರೆ ಮಕ್ಕಳು ಸಹ ಯೋಗವನ್ನು ಅಳವಡಿಸಿಕೊಂಡು ಉನ್ನತ ಸಾಧನೆಯನ್ನು ಮಾಡಿರಿ. ಪತಂಜಲಿಯ ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎಂಬೀ ಅಷ್ಠಾಂಗ ಮಾರ್ಗವು ಆರೋಗ್ಯದ ತಳಹದಿಯಾಗಿದೆ ಎಂದರು.
ಶಿಕ್ಷಕ ಸಂಗನಬಸವ ಉಟಗಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ಯೋಗ ಬಹಳ ಮುಖ್ಯವಾಗಿದೆ. ಮಕ್ಕಳಲ್ಲಿ ನೆನಪಿನ ಶಕ್ತಿ ಹೆಚ್ಚಿಸುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿ ದಿನವೂ ತಪ್ಪದೇ ಯೋಗವನ್ನು ಮಾಡಬೇಕು ಎಂದು ಹೇಳಿದರು.
ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ ಮಕ್ಕಳಿಗೆ ಎಲ್ಲಾ ಆಸನಗಳನ್ನು ಹೇಳಿಕೊಟ್ಟು ಪೂರಕ ವಿವರಣೆ ನೀಡಿದರು. ಯೋಗದಿಂದ ದೇಹ ಮತ್ತು ಮನಸ್ಸುಗಳ ಸಮನ್ವಯ ಸಾಧ್ಯವಾಗುತ್ತದೆ. ವಸುದೈವ ಕುಟುಂಬಕಂ ಎಂಬ ಘೋಷವಾಕ್ಯವು ಯೋಗದಿಂದ ಮಾತ್ರ ಸಾಧ್ಯ ಎಂದು ಹೇಳಿ ಮಕ್ಕಳಿಗೆ ಪ್ರಾತ್ಯಕ್ಷಿಕೆಯ ಮೂಲಕ ಯೋಗವನ್ನು ಹೇಳಿಕೊಟ್ಟರು.
ಶಿಕ್ಷಕರಾದ ಅಶೋಕ ಬಿರಾದಾರ ಪಾಟೀಲ ಮಕ್ಕಳಿಗೆ ಶುಭ ಹಾರೈಸಿದರು. ಶಿಕ್ಷಕಿ ಶಾರದಾ ಮಠ ಸ್ವಾಗತಿಸಿದರು. ಚಿತ್ರಕಲಾ ಶಿಕ್ಷಕ ಚಂದ್ರಕಾಂತ ಪೋಲೀಸ ವಂದಿಸಿದರು. ಎಸ್.ಡಿ.ಎಮ್.ಸಿ. ಸದಸ್ಯ ಹನುಮಂತ ಮರನೂರ, ಶ್ರೀಮತಿ ಮಂಜುಳಾ ಕಡಕೋಳ, ಶಕುಂತಲಾ ಬಿರಾದಾರ, ಊರಿನ ಹಿರಿಯರು ಉಪಸ್ಥಿತರಿದ್ದರು. ನೂರಾರು ಮಕ್ಕಳು ಸೃಷ್ಠಿಯ ಮಡಿಲಲ್ಲಿ ಯೋಗಿಗಳಾಗಿ ಕಣ್ಮನ ಸೆಳೆದರು.

