ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯೋಗವು ಕೇವಲ ಒಂದು ದೈಹಿಕ ವ್ಯಾಯಾಮವಲ್ಲ. ಅದು ಮನಸ್ಸು, ದೇಹ ಮತ್ತು ಉಸಿರಾಟಗಳ ನಡುವಿನ ಸಂಪರ್ಕದ ಸಾಧನವಾಗಿದೆ. ವ್ಯಕ್ತಿಯಲ್ಲಿರುವ ಚಿತ್ತದ ವೃತ್ತಿಗಳನ್ನು ನಿಯಂತ್ರಿಸುವುದಾಗಿದೆ. ಇದರಿಂದ ಜೀವನದಲ್ಲಿ ಶಿಸ್ತು, ಚೈತನ್ಯ, ಸಮತೋಲಿತ ಮತ್ತು ಸುಸ್ಥಿರ ಆರೋಗ್ಯಕ್ಕೆ ಸಹಕಾರಿ ಎಂದು ಪ್ರೊ. ಎಂ.ಎಸ್.ಖೊದ್ನಾಪೂರ ಅಭಿಪ್ರಾಯಪಟ್ಟರು.
ಅವರು ನಗರದ ಅಥಣಿ ರಸ್ತೆಯಲ್ಲಿರುವ ಅಲ್-ಅಮೀನ್ ಆಸ್ಪತ್ರೆಯ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ದಿನಾಂಕ: ೨೧-೦೬-೨೦೨೬ ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಮತ್ತು ೭ ದಿನಗಳ ಯೋಗ ಶಿಬಿರದ ಉದ್ಘಾಟನೆಯಲ್ಲಿ ಅವರು ಮಾತನಾಡುತ್ತಿದ್ದರು.
ಭಾರತವು ಭವ್ಯ ಪರಂಪರೆ-ಸಂಸ್ಕೃತಿಯ ತವರೂರು. ಸಾಧು-ಸಂತ, ಋಷಿಮುನಿಗಳ ಭವ್ಯತೆ ನಾಡು. ಅಧ್ಯಾತ್ಮಕತೆಯ ಪುಣ್ಯಭೂಮಿ. ಪ್ರಾಚೀನ ಕಾಲದಲ್ಲಿ ನಮ್ಮ ದೇಶದ ಋಷಿ-ಮುನಿಗಳು, ಸಾಧು-ಸಂತರು ತಮ್ಮ ತಪಸ್ಸು, ಮನಃಶಾಂತಿ, ಭಕ್ತಿ ಮತ್ತು ಧ್ಯಾನದಲ್ಲಿ ಏಕಾಗ್ರತೆಯನ್ನು ತರಲು ಯೋಗ ಅವಶ್ಯಕ. ಯೋಗದ ಮೂಲಕ ಜಾಗತಿಕ ಐಕ್ಯತೆ ಮತ್ತು ಸಂಸ್ಕೃತಿಯ ಪರಿಚಯಿಸಿದ ಮತ್ತು ಇಡೀ ಜಗತ್ತಿಗೆ ಯೋಗದ ಮೂಲಕ ಅಧ್ಯಾತ್ಮಕತೆಯನ್ನು ಸಾರಿದ ನಾಡು ನಮ್ಮದು.. ಯೋಗ-ವ್ಯಾಯಾಮಗಳಂತಹ ನಮ್ಮ ದೇಶೀಯ ಸಂಸ್ಕೃತಿಯನ್ನು ರೂಢಿಸಿಕೊಂಡು ನಮ್ಮ ಮುಂದಿನ ಜನಾಂಗದ ಉತ್ತಮ ಆರೋಗ್ಯಕ್ಕೆ ಯೋಗದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಿ ತನ್ಮೂಲಕ ಈ ಭವ್ಯ ಭಾರತವನ್ನು ಸ್ವಾಸ್ಥö್ಯ ಮತ್ತು ಆರೋಗ್ಯಯುತವನ್ನಾಗಿಸಲು ನಾವೆಲ್ಲ ಕಂಕಣಬದ್ಧರಾಗೋಣ ಎಂದು ಸಲಹೆ ನೀಡಿದರು.
ಯೋಗ ಶಿಕ್ಷಕಿ ಮಂಜುಳಾ ಜೋಶಿ ಅವರು ಮಹಿಳೆಯರಿಗೆ ಯೋಗಾಭ್ಯಾಸ ಶಿಬಿರದಲ್ಲಿ ಮಾತನಾಡುತ್ತಾ, ಯೋಗವು ಒತ್ತಡ, ಸಂಘರ್ಷ, ಆತಂಕ, ದುಗುಡ, ಖಿನ್ನತೆ, ನಿರ್ಲಿಪ್ತತೆ ಮತ್ತು ಮಾನಸಿಕ ಅಶಾಂತಿಯನ್ನು ಹೋಗಲಾಡಿಸಿ ಏಕಾಗ್ರತೆಯನ್ನು ಹೆಚ್ಚಿಸಲು ಪ್ರಯೋಜನಕಾರಿಯಾಗಿದೆ. ದೈನಂದಿನವಾಗಿ ಯೋಗಾಭ್ಯಾಸ ಮಾಡುವುದರಿಂದ ಆರೋಗ್ಯಕರ ಜೀವನಶೈಲಿ ಬೆಳೆಸಲು ಇದೊಂದು ಶಕ್ತಿಯುತವಾದ ಸಾಧನವಾಗಿದೆ ಎಂದರು.
ಈ ಯೋಗ ಶಿಬಿರದಲ್ಲಿ ಸುತ್ತಮುತ್ತಲಿನ ಕಾಲನಿಗಳ ಮಹಿಳೆಯರು, ಮಕ್ಕಳು ಸೇರಿದಂತೆ ೧೦೦ ಕ್ಕೂ ಹೆಚ್ಚು ಜನರು ಯೋಗ ಶಿಬಿರದಲ್ಲಿ ಪಾಲ್ಗೊಂಡಿದ್ದರು.

