ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಧಾರವಾಡ ವಲಯದ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಶೀರ್ಷಿಕೆಯಡಿ ಐತಿಹಾಸಿಕ ಗೋಳಗುಮ್ಮಟ ಆವರಣದಲ್ಲಿ ಯೋಗ ದಿನ ಆಚರಿಸಲಾಯಿತು.
ಸಂಸ್ಕೃತಿ ಮಂತ್ರಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣ ಅಧೀನದಲ್ಲಿರುವ ದೇಶದ ೧೦೦ ಐತಿಹಾಸಿಕ ತಾಣಗಳಲ್ಲಿ ವಿಶೇಷ ಯೋಗ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಪರಂಪರೆ ಸಂಯೋಜಿತ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಬಾದಾಮಿ ಗುಹೆಗಳು, ಐಹೊಳೆ ದುರ್ಗಾ ದೇವಾಲಯ ಮತ್ತು ಪಟ್ಟದಕಲ್ಲಿನ ದೇವಾಲಯಗಳ ಸಮೂಹಗಳಲ್ಲಿ ಯೋಗ ಕಾರ್ಯಕ್ರಮಗಳು ಏಕಕಾಲಕ್ಕೆ ನಡೆದವು.
ಈ ವರ್ಷದ ಆಚರಣೆಯ ಮುಖ್ಯ ಉದ್ದೇಶವು ಯೋಗದ ಮೂಲಕ ದೀರ್ಘಾಯುಷ್ಯ, ಸಕ್ರಿಯ ಜೀವನಶೈಲಿ ಹಾಗೂ ಎಲ್ಲಾ ತಲೆಮಾರುಗಳ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುವುದಾಗಿದೆ.
ನಗರದ ಗೋಳಗುಮ್ಮಟದಲ್ಲಿ ಬೆಳಗ್ಗೆ ೬:೨೦ ರಿಂದ ೭ರವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನಾಚರಣೆಯ ಕುರಿತು ಮಾತನಾಡುವ ನೇರಪ್ರಸಾರದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿಜಯಪುರ ಉಪವಿಭಾಗದ ಸಹಾಯಕ ಆಯುಕ್ತರು ಗುರುನಾಥ ದಡ್ಡೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಯೋಗ ಗುರು ಸುರೇಶ್ ಆನಂದಿ, ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿ ತರಬೇತಿ ನೀಡಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣ, ಧಾರವಾಡ ವಲಯದ ಉಪ ಅಧೀಕ್ಷಕ ಪುರಾತತ್ವ ಅಭಿಯಂತರ ಎನ್. ಬಿ. ಡಿ. ಕೆಂಪಗೌಡ ಅವರು ವಿಜಯಪುರದ ಯೋಗ ದಿನಾಚರಣೆಯ ನೋಡಲ್ ಅಧಿಕಾರಿಯಾಗಿದ್ದರು. ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವಿದ್ ಜಮಾದಾರ್, ಬಿಎಲ್ ಡಿಇ ಸಂಸ್ಥೆಯ ಶ್ರೀಮಂತಿ ಬಂಗಾರಮ್ಮ ಸಜ್ಜನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ವೈ. ತಮ್ಮಣ್ಣ, ಹಾಗೂ ಅಣು ವಿಜ್ಞಾನ ಮತ್ತು ಶಾಂತಿ ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಲಿರುವ ಶಿಫಾ ಜಮಾದಾರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಶ್ರೀಮತಿ ಬಂಗಾರಮ್ಮ ಸಜ್ಜನ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಡಾ. ಬಿ.ಆರ್. ಅಂಬೇಡ್ಕರ್ ಮಹಿಳಾ ವಸತಿನಿಲಯ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಿಕಾಸ್ ಹೈಸ್ಕೂಲ್ ಹಾಗೂ ವಿವಿಧ ಶಾಲೆಯ ಸುಮಾರು ೫೦೦ ಹೆಚ್ಚು ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ್ದರು.

