ಉದಯರಶ್ಮಿ ದಿನಪತ್ರಿಕೆ
ತಿಕೋಟಾ: 12ನೇ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪತಂಜಲಿ ಯೋಗ ಸಮಿತಿ ವತಿಯಿಂದ ಪಟ್ಟಣದ ಕನಕದಾಸ ಮಂಗಲ ಕಾರ್ಯದಲ್ಲಿ ಏಳು ದಿನಗಳ ಉಚಿತ ಯೋಗ ಶಿಬಿರವನ್ನು ಸಾರ್ವಜನಿಕರಿಗಾಗಿ ಯಶಸ್ವಿಯಾಗಿ ಆಯೋಜಿಸಿದರು.
ಶಿಬಿರದ ರವಿವಾರ ಮುಕ್ತಾಯ ಸಮಾರಂಭದಲ್ಲಿ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಜಿ.ಎಸ್. ಬೂಸಗೊಂಡ ಮಾತನಾಡಿ, ವಯಸ್ಸು ಮತ್ತು ಲಿಂಗ ಭೇದವಿಲ್ಲದೆ ಪ್ರತಿಯೊಬ್ಬರೂ ಯೋಗ ಮಾಡಿದರೆ ರೋಗ ದೂರವಾಗುತ್ತದೆ. ಸದೃಢ ನಾಗರಿಕರಿಂದ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ವಿರಕ್ತ ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ ಸದೃಢ ಶರೀರದಲ್ಲಿ ಮಾತ್ರ ಸದೃಢ ಮನಸ್ಸು ನೆಲೆಸಲು ಸಾಧ್ಯ. ನಮ್ಮ ಆರೋಗ್ಯದ ಜೊತೆಗೆ ಪರಿಸರ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.
ರಾಷ್ಟ್ರಮಟ್ಟದಲ್ಲಿ ಯೋಗ ಪ್ರದರ್ಶನ ನೀಡಿ ಹೆಸರು ಗಳಿಸಿದ ಪಟ್ಟಣದ ಕುಮಾರಿ ಅನುಷ್ಕಾ ಅಥಣಿ ವೇದಿಕೆಯ ಮೇಲೆ ಯೋಗ ಪ್ರದರ್ಶನ ನೀಡಿ ಆಯೋಜಕರಿಂದ ಗೌರವಿಸಲ್ಪಟ್ಟರು.
ಊರಿನ ಮುಖಂಡರಾದ ಲೇಪು ಕಣ್ಣು, ಸದಾಶಿವ ಮಂಗಸೂಳಿ, ಬಸವರಾಜ ದೇವಾನಾಯಕ, ಗೀತಾ ತಾಳಿಕೋಟಿ ಮಾತನಾಡಿದರು. ಸುರೇಶ್ ಪರಮಾಜಿ, ಸುರೇಶ ಕೊಣ್ಣೂರ, ಚೆನ್ನಯ್ಯ ಸಾಲಿಮಠ, ಮಂಜುನಾಥ್ ಬಿದರಿ, ಸೋಮಶೇಖರ ಜತ್ತಿ ಹಾಗೂ ಗ್ರಾಮಸ್ಥರು ಇದ್ದರು.

