ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೆಬಿಜೆಎನ್ ಎಲ್ ನಾನಾ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಕಾರ್ಮಿಕರನ್ನು ತೆಗೆದು, ಹೊರಗುತ್ತಿಗೆ ಆಧಾರದ ಮೇಲೆ ನೇಮಕಾತಿಗಾಗಿ ಕರೆದ ಟೆಂಡರ್ ರದ್ದುಪಡಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ದಿನಗೂಲಿ ನೌಕರರ ಸಂಘದ ಸದಸ್ಯರು ಮಂಗಳವಾರ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ನಡೆಸಿದರು.
ಸಂಘದ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ, ಕಳೆದ ೨೦ ವರ್ಷಗಳಿಂದ ಇಲ್ಲಿ ಕೂಲಿಕಾರ್ಮಿಕರಾಗಿ ವಿವಿಧ ಉದ್ಯಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ, ಅದಕ್ಕಾಗಿ ನೇರವಾಗಿ ನಿಗಮವೇ ಅರಣ್ಯ ಇಲಾಖೆಯ ಮೂಲಕ ವೇತನ ಪಾವತಿ ಮಾಡುತ್ತಿದೆ. ಆದರೆ ಈಗ ಹೊರಗುತ್ತಿಗೆ ಏಜೆನ್ಸಿಯ ಮೂಲಕ ವೇತನ ನಿಗದಿಗೊಳಿಸಲು ಟೆಂಡರ್ ಕರೆಯಲಾಗಿದೆ, ಅದನ್ನು ರದ್ದುಗೊಳಿಸಬೇಕು, ಕನಿಷ್ಟ ಸರ್ಕಾರಿ ಸೇವಾ ಭದ್ರತೆ ನೀಡಬೇಕು, ಬಾಕಿ ವೇತನ ಬಿಡುಗಡೆಗೊಳಿಸಬೇಕು, ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಟೆಂಡರ್ ಇಲ್ಲದೆ ಕರ್ತವ್ಯ ನಿರ್ವಹಿಸಲು ಕೆಟಿಪಿಪಿ ಕಾಯ್ದೆಯ ನಿಯಮ ೪ ಜಿರನ್ವಯ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.
ಇಡೀ ದಿನ ಧರಣಿ ನಡೆಯಿತು. ಧರಣಿ ಸ್ಥಳಕ್ಕೆ ಆಗಮಿಸಿ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಡಿ. ಬಸವರಾಜ ಹಾಗೂ ಡಿಎಫ್ ಓ ಎನ್.ಕೆ. ಬಾಗಾಯತ್ ಅವರು ಧರಣಿನಿರತರ ಸಮಸ್ಯೆ ಬಗ್ಗೆ, ಅದಕ್ಕಿರುವ ಕಾನೂನಾತ್ಮಕ ತೊಡಕು ಮತ್ತೀತರ ವಿಷಯಗಳ ಬಗ್ಗೆ ಚರ್ಚಿಸಿದರು. ಬಾಕಿ ವೇತನ ಪಾವತಿಸಲಾಗುವುದು, ಟೆಂಡರ್ ರದ್ದತಿಯ ಬಗ್ಗೆ ಕೆಬಿಜೆಎನ್ ಎಲ್ ಎಂಡಿ ಅವರೊಂದಿಗೆ ತುರ್ತಾಗಿ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮುಖ್ಯ ಎಂಜಿನಿಯರ್ ಭರವಸೆಯ ಮೇರೆಗೆ ಧರಣಿ ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಗುಡಿಮನಿ, ಅವ್ವಣ್ಣ ವಾಲಿಕಾರ, ಕಾಶಿನಾಥ ಬಿಂಗೆ, ಶಂಕರ ಪಡಸಲಗಿ, ಗೋವಿಂದ ಬಂಡಿವಡ್ಡರ, ಮಹೇಶ ತೆಲಗಿ, ನೀಲವ್ವ ಗುಡೆಕಾರ, ರುಕ್ಮಾ ಚೌಹಾಣ, ರೇಣುಕಾ ಚಲವಾದಿ, ಶೋಭಾ ಗೌಡರ, ತುಳಿಸಿ ಮೊಹಿತೆ, ಸವಿತಾ ಭಾಂಡವಳಕರ, ಭೀಮಸಿ ಮಾದರ, ಪ್ರಕಾಶ ಮಾಲಗತ್ತಿ, ಅಲ್ಲಾಸಾಬ ಮೆಟಗುಡ್ಡ, ಬಸಪ್ಪ ತುಮರಮಟ್ಟಿ, ಚನ್ನಪ್ಪ ಹುಲ್ಲೂರು ಇತರರಿದ್ದರು.

