ಲೇಖನ
– ಶ್ರೀಮತಿ ಗಿರಿಜಾ ಸಂತೋಷ ಪಾಟೀಲ
ಹವ್ಯಾಸಿ ಬರಹಗಾರರು
ಬಸವನಬಾಗೇವಾಡಿ
ಉದಯರಶ್ಮಿ ದಿನಪತ್ರಿಕೆ
ಬೆರೆತು ಅರಿತು ಬದುಕುವದರಲ್ಲಿ ಬದುಕಿಗೊಂದು ಅರ್ಥವಿದೆ. ನಾವೆಲ್ಲರೂ ಒಂದೇ ಎನ್ನುವ ಭಾವದಲ್ಲಿ ಬದುಕಿದೆ. ಬದುಕಿನ ಆನಂದ ನಾವು ಆಚರಿಸುವ ಹಬ್ಬಗಳಲ್ಲಿದೆ.
ಹಬ್ಬಗಳು ಆಗಾಗ ಸುಮ್ಮನೆ ಹಾಯ್ದುಹೋಗುವ ಗಾಳಿಯಂತಲ್ಲ , ನಮ್ಮ ಬದುಕು ಕಟ್ಟಿಕೊಡುವ, ಬಾಂಧವ್ಯ ಗಟ್ಟಿಗೊಳಿಸುವ ದಿವ್ಯ ಅಸ್ತ್ರ.

ಜಗತ್ತಿನಲ್ಲೇ ಭಾರತ ದೇಶ ಬಲು ವಿಶೇಷ. ಇಲ್ಲಿರುವ ಧಾರ್ಮಿಕ ಆಚರಣೆ, ಹಬ್ಬಗಳ ಸಡಗರ, ಗುರುಭಕ್ತಿ , ಸಂಸ್ಕೃತಿ , ಸಂಪ್ರದಾಯ ಭಾರತಕ್ಕೆ ವಿಶೇಷ ಕಳೆ ತಂದಿದೆ. ನಾನು ಭಾರತೀಯ ಎಂದು ಕೂಗಲು ಕೂಡಾ ಪೂರ್ವ ಜನ್ಮದ ಪುಣ್ಯ ಬೇಕು. ಭಾರತ ಹಳ್ಳಿಗಳ ದೇಶ , ಹಬ್ಬಗಳ ದೇಶ. ಪ್ರತಿ ಪ್ರಮುಖ ಹಬ್ಬದಲ್ಲೂ ಬರೀ ಸಂಸ್ಕೃತಿ, ಸಂಪ್ರದಾಯ ಅಷ್ಟೇ ಇಲ್ಲಾ. ವೈಜ್ಞಾನಿಕ ಕಾರಣವು ಇದರೊಂದಿಗೆ ಬೆರೆತಾಗಿದೆ. ಆದ್ದರಿಂದಲೇ ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹೆಚ್ಚಾದರೂ ಹಬ್ಬಗಳಲ್ಲಿ ಇನ್ನೂ ಜೀವಂತಿಕೆ ಇದೆ. ಬ್ರಹ್ಮಾಂಡದ ಪ್ರತಿ ಚಲನೆ, ಪ್ರತಿ ಬದಲಾವಣೆ ಕೂಡ ನಮ್ಮ ಬದುಕುಗಳ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಅಲ್ಲಿ ಉಂಟಾಗುವ ಕೆಲವು ಬದಲಾವಣೆ ಗಳನ್ನು ಕೂಡಾ ಮನುಷ್ಯ ಹಬ್ಬದ ಮುಖೇನ ಸಂಭ್ರಮಿಸುತ್ತಾನೆ ಎನ್ನುವದಕ್ಕೆ ಸಂಕ್ರಾಂತಿ ಒಂದು ಉದಾಹರಣೆಯಾಗಿದೆ.
ಸಂಕ್ರಾಂತಿ ಹಬ್ಬ ಬಲು ವಿಶೇಷವಾದದ್ದು. ನಮ್ಮಲ್ಲಿ ಶಾಂತಿ ಪ್ರೀತಿ ಸೌಹಾರ್ದತೆಯನ್ನು ಸೂಚಿಸುವ ಹಬ್ಬವಾಗಿದೆ. ಕರ್ನಾಟಕದಲ್ಲಿ ಇದನ್ನು ಸುಗ್ಗಿ ಹಬ್ಬ ಎಂದು ಕರೆಯುತ್ತಾರೆ. ನಮ್ಮೆಲ್ಲರಿಗೆ ಅನ್ನ ನೀಡುವ ಈ ಭೂಮಿಯನ್ನು ಪೂಜಿಸುವ ದಿನ ಮತ್ತು ಕೃತಜ್ಞತೆ ಸಲ್ಲಿಸುವ ದಿನ. ಸಂಕ್ರಾಂತಿ ಎಂದಾಗ ಎಳ್ಳು ಬೆಲ್ಲ ನೆನಪಾಗುತ್ತದೆ. ಇಂದಿಗೂ ಹಳ್ಳಿಯಲ್ಲಿ ಎಲ್ಲರೂ ಎಲ್ಲರ ಮನೆಗ್ಹೋಗಿ ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡೋಣ ಎಂದು ಹೇಳಿವ ವಾಡಿಕೆ ಇದೆ. ಅದರರ್ಥ ಇದೊಂದು ಬಾಂಧವ್ಯದ ಸಂಕೇತವಾಗಿದೆ. ಈದಿನ ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ದಿನ. ಇದು ಉತ್ತರಾಯಣದ ಆರಂಭ. ಹೀಗಾಗಿ ಈ ದಿನವನ್ನು ಮಂಗಳಕರವೆಂದು ನಂಬಲಾಗಿದೆ. ಈ ಸುಗ್ಗಿಯ ಹಬ್ಬಕ್ಕೆ ಹುಗ್ಗಿ ತಯಾರಿಸಿ ಹಂಚುವುದು , ಪವಿತ್ರ ನದಿಗಳಲ್ಲಿ ಸ್ನಾನ ಮಾಡುವುದು, ಹೊಸ ಬಟ್ಟೆ ಧರಿಸುವುದು ಮತ್ತು ಜಾನುವಾರಗಳ ಪೂಜೆ ಮಾಡುವುದು ಇವೆಲ್ಲವೂ ಸಂಕ್ರಾಂತಿಯ ವಿಶೇಷತೆಗಳಾಗಿವೆ. ಸಂಕ್ರಾಂತಿಯ ಸಮಯದಲ್ಲಿ ಎಳ್ಳು ಬೆಲ್ಲ ಕೊಬ್ಬರಿ ತಿನ್ನಬೇಕು ಎನ್ನುವುದಕ್ಕೆ ವೈಜ್ಞಾನಿಕ ಕಾರಣವಿದೆ. ಸಂಕ್ರಾಂತಿಯಲ್ಲಿ ಚರ್ಮ ಒಡೆದಿರುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗಿರುತ್ತದೆ. ಕೊಬ್ಬಿನ ಅಂಶವಿರುವ ಇವೆಲ್ಲ ಪದಾರ್ಥಗಳನ್ನು ಸೇವಿಸಬೇಕೆಂಬ ವೈಜ್ಞಾನಿಕ ಕಾರಣ ಸಂಕ್ರಾಂತಿಯಲ್ಲಿ ಅಡಗಿದೆ.
ವರ್ಷವೆಲ್ಲ ದುಡಿದು ಅದರ ಫಲ ಕೈ ಸೇರಿದಾಗ ರೈತನಿಗೆ ಎಲ್ಲಿಲ್ಲದ ಖುಷಿ. ಭೂಮಿ ರೈತನ ಜೀವ.ದನಕರುಗಳು ರೈತನ ಬಲಗೈ ಎನ್ನಬಹುದು. ವರ್ಷಪೂರ್ತಿ ದುಡಿಮೆಯಲ್ಲಿ ತೊಡಗಿರುವ ದನಕರುಗಳಿಗೆ ಈಗ ಸ್ವಲ್ಪ ವಿಶ್ರಾಂತಿ ಸಮಯ. ಅವುಗಳನ್ನು ಅಲಂಕರಿಸಿ ಮತ್ತು ಪೂಜೆ ಮಾಡಿ ಅವುಗಳಿಗೆ ಕೃತಜ್ಞತೆ ಸಲ್ಲಿಸುವ ವಿಶೇಷ ದಿನ. ಅವುಗಳ ಮೈಯಲ್ಲಿ ಜಿಗಣಿಯಂತ ಕ್ರಿಮಿಗಳು ಗುಟ್ಟಾಗಿ ಅಡಗಿಕೊಂಡು ಅವುಗಳಿಗೆ ಕಿರಿಕಿರಿ ಉಂಟಾಗಿರುತ್ತದೆ.
ಇದನ್ನರಿತ ರೈತಾಪಿ ಜನರು ಎಲ್ಲ ಜಿಗಣಿಗಳನ್ನು ಕಿಚ್ಚು ಹಾಯಿಸುವುದರ ಮೂಲಕ ಜಾನುವಾರಗಳಿಗೆ ಸಂತಸದ ಬದುಕು ನೀಡುತ್ತಾರೆ. ಎಲ್ಲರ ಮನೆ ಮುಂದೆ ರಂಗೋಲಿ ಬಿಡಿಸಿ , ಮನೆಯನ್ನು ಕೂಡಾ ಸುಚಿಗೊಳಿಸಿ, ವಿಶೇಷ ಅಲಂಕಾರ ಮಾಡಿ ಸಂಭ್ರಮಿಸುವುದು.
ಮಹಾಭಾರತದಲ್ಲಿ ಭೀಷ್ಮ ಪಿತಾಮಹನು ಬಾಣದ ಹಾಸಿಗೆಯಲ್ಲಿ ಮಲಗಿ ತನ್ನ ಇಚ್ಛಾ ಮರಣವನ್ನು ಹೊಂದುವಾಗ ಉತ್ತರಾಯಣದ ಪರ್ವಕಾಲಕ್ಕಾಗಿ ಕಾಯ್ದಿದ್ದು ಇಂದಿಗೂ ಚರಿತ್ರೆಯಲ್ಲಿ ಸಾಕ್ಷಿಯಾಗಿದೆ. ಅಂದರೆ ಮಕರ ಸಂಕ್ರಮಣ ಎಂದು ಜನೆವರಿ 14 ರಂದು ಆಚರಿಸುವ ಇದು ಪುಣ್ಯ ಕಾಲ , ಪರ್ವ ಕಾಲ, ಪಾಪಗಳನ್ನು ಕಳೆಯುವ ಕಾಲ. ಪಂಚಭೂತಗಳನ್ನು ಪೂಜಿಸುವ ನಾವು… ಸೂರ್ಯನಿಲ್ಲದೆ ಈ ಜಗತ್ತಿಲ್ಲ. ನಾವು ತಿನ್ನುವ ಆಹಾರಕ್ಕೂ ಸೂರ್ಯ ಬೇಕೇಬೇಕು. ಸೂರ್ಯನಿಲ್ಲದ ಬದುಕು ಶೂನ್ಯ ಎಂದು ತಿಳಿದ ನಾವು ಸೂರ್ಯನಿಗೆ ನೈವೇದ್ಯ ಅರ್ಪಿಸಿ ಕೃತಜ್ಞತೆ ಸಲ್ಲಿಸಿ ಕೃತಾರ್ಥರಾಗುತ್ತೇವೆ. ಅಷ್ಟೊಂದು ಸಂಸ್ಕಾರ , ಕೃತಜ್ಞತಾ ಭಾವ ನಮ್ಮ ಸಮಾಜದ್ದು.
ಸಂಕ್ರಾಂತಿ ನಿಮ್ಮ ಬದುಕಲ್ಲಿ ಸಂ+ಕ್ರಾಂತಿ ತರಲಿ. ಹೊಸ ಮನ್ವಂತರ ಹಾಡಲಿ. ಪ್ರತಿ ಹಬ್ಬಗಳು
ಮನದಿಚ್ಛೆಯಿಂದ ಆಚರಿಸುವಂತಾಗಲಿ. ಹಬ್ಬಗಳು ಪ್ರತಿಷ್ಠೆಗಾಗಿ ಬೇಡ ಪ್ರೀತಿಗಾಗಿ ಮುಡುಪಾಗಿರಲಿ. ಈ ಸಂಕ್ರಾಂತಿ ತಮಗೆಲ್ಲರಿಗೂ ಸುಖ ಶಾಂತಿ ತರಲಿ.


