ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಾದಕ ವ್ಯಸನಮುಕ್ತ ಸಮಾಜದ ನಿರ್ಮಾಣ ನಮ್ಮೇಲ್ಲರ ಜವಾಬ್ದಾರಿಯಾಗಿದೆ ಎಂದು ಪಿಎಸ್ಐ ಸಚೀನ ಆಲಮೇಲಕರ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಮಾದಕ ದ್ರವ್ಯ ದುರ್ಬಳಕೆ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದಿನ ಯುವಜನತೆ ತಾವು ಮಾದಕ ವಸ್ತುಗಳ ವ್ಯಸನಿಗಳಾಗಿ ಜೀವನ ಹಾಳು ಮಾಡಿಕೊಳ್ಳಬಾರದು. ಅದಕ್ಕಾಗಿ ಮಾದಕ ಪದಾರ್ಥಗಳ ಸೇವನೆಯ ಅಪಾಯಗಳ ಕುರಿತು ವಿಶೇಷ ಎಚ್ಚರಿಕೆ ವಹಿಸಿ ದೂರವಿರಬೇಕು. ಇಂದು ಮಾದಕ ಪದಾರ್ಥಗಳಾದ ಗಾಂಜಾ ಮಿಶ್ರಿತ ಮಾವಾ, ತಂಬಾಕು, ಗುಟುಕಾಗಳು ವ್ಯಕ್ತಿಯ ಮೆದುಳು ಮತ್ತು ನಡುವಳಿಕೆಯ ಮೇಲೆ ನೇರ ಪರಿಣಾಮ ಬೀರಿ ಅವನನ್ನು ಮಾನಸಿಕ ಅಸ್ವಸ್ಥನನ್ನಾಗಿ ಮಾಡುತ್ತವೆ. ಜೊತೆಗೆ ಕುಟುಂಬದ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ. ಆದ್ದರಿಂದ ಮನೆಯಲ್ಲಿ ತಂದೆ, ಸಹೋದರ ಯಾರೇ ಆಗಿರಲಿ ಅವರಿಗೆ ಮಾದಕ ಪದಾರ್ಥಗಳ ಬಳಕೆಯಿಂದಾಗುವ ಕೆಡುಕುಗಳ ಈ ಬಗ್ಗೆ ಮಾಹಿತಿ ನೀಡಿ ದೂರವಿರಿಸಲು ತಾವು ಪ್ರಯತ್ನಿಸಬೇಕು ಎಂದರು. ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ದುರ್ಬಳಕೆ ಮತ್ತು ಸಮಾಜದಲ್ಲಿ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತಾದ ಭಿತ್ತಿಚಿತ್ರಗಳಗಳನ್ನು ಪ್ರದರ್ಶಿಸಿ ಘೋಷಣೆಗಳ ಮೂಲಕ ಅರಿವು ಮೂಡಿಸಲಾಯಿತು.
ಪ್ರಾಚಾರ್ಯ ವ್ಹಿ.ಜಿ.ಹೂನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಕ್ಷಿಪ್ತವಾಗಿ ಮಾತನಾಡಿದರು.
ಕಾಲೇಜಿನ ಕೆ.ವ್ಹಿ.ಒಡೆಯರ್, ಸಂತೋಷ ಬಡಿಗೇರ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಸಿದ್ದು ಗಂಗನಳ್ಳಿ, ಎಂ.ಎಸ್.ಥೋರವೆ, ಶ್ರೀಕಾಂತ ಶಿನ್ನೂರ ಹಾಗೂ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.

