ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಗೆಲುವು ಮರೀಚಿಕೆ ಎನಿಸುತ್ತಿದೆ. ಸೋಲುಗಳ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇನೆ. ನನ್ನ ಸೋಲಿಗೆ ಯಾರು ಕಾರಣರು ಎಂಬ ಪ್ರಶ್ನೆಗೆ ಮನಸ್ಸು ಬೇರೆಯವರನ್ನು ಹೆಸರಿಸುತ್ತದೆ. ಕೆಲವೊಮ್ಮೆ ಪರಿಸ್ಥಿತಿಯ ಹೆಸರು ಹೇಳಿ ಬಾಯಿ ಮುಚ್ಚಿಸುತ್ತದೆ. ನಾನು ಬಡವ ನನ್ನ ಶಿಕ್ಷಣ ಸರಿಯಿಲ್ಲ ಎಂಬ ನೆಪಗಳು ಬೇರೆ ಈ ಸಾಲಿನಲ್ಲಿ ಬಂದು ನಿಲ್ಲುತ್ತವೆ. ನನಗಿಂತ ಹೀನಾಯ ಸ್ಥಿತಿಯಲ್ಲಿರುವವರು ಗೆದ್ದ ಪ್ರಸಂಗಗಳನ್ನು ನೋಡಿದಾಗ ನನ್ನನ್ನು ಹಿಂದಿಕ್ಕಿದ ಅಂಶಗಳಾದರೂ ಯಾವವು ಎಂದು ತಿಳಿದುಕೊಳ್ಳಲು ಗುರು ಹಿರಿಯರು ತಿಳಿಸುತ್ತಾರೆ. ಕೆಲ ದಿನ ಅತ್ತ ಮುಖ ಮಾಡಿ ನಿಂತು ನಾಯಿ ಬಾಲದಂತೆ ಮತ್ತೆ ಮುದುಡಿ ನಿಲ್ಲುತ್ತದೆ. ಇವು ಗೆಲುವಿನ ಆಕಾಂಕ್ಷೆಯಲ್ಲಿರುವ ಹಲವರ ನೋವಿನ ವಿಚಾರಗಳು. ಗೆಲುವಿನ ಹಾದಿಯಲ್ಲಿರುವ ಮುಳ್ಳುಗಳು ಯಾವವು ಅವುಗಳನ್ನು ತೆಗೆಯುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರವಾಗಿ ಇಲ್ಲಿ ಕೆಲ ಅಂಶಗಳಿವೆ ನೋಡೋಣ ಬನ್ನಿ

ದುರ್ಬಲತೆ ನಿರ್ವಹಿಸಿ
ಪ್ರತಿಯೊಬ್ಬರಲ್ಲೂ ಶಕ್ತಿ ಮತ್ತು ದೌರ್ಬಲ್ಯಗಳು ಇದ್ದೇ ಇರುತ್ತೇವೆ. ಕೇವಲ ದೌರ್ಬಲ್ಯಗಳಿರುವ ಇಲ್ಲವೇ ಶಕ್ತಿಯನ್ನು ಮಾತ್ರ ಹೊಂದಿರುವವರು ಯಾರೂ ಇಲ್ಲ. ಇಲ್ಲಿ ಮುಖ್ಯವಾದ ಸಂಗತಿಯೆಂದರೆ ನಮ್ಮ ದುರ್ಬಲತೆ ಬೇರೆಯವರಿಗೆ ತಿಳಿಯಬಾರದು. ಅದನ್ನು ಗೌಪ್ಯವಾಗಿಟ್ಟುಕೊಳ್ಳಬೇಕು. ಹಾಗೆ ಏನಾದರೂ ಜನರಿಗೆ ಗೊತ್ತಾದರೆ ನಮ್ಮನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಎರಡು ತರಹದ ಜನರು ಇರುತ್ತಾರೆ ಬೇಟೆ ಆಡುವವರು ಮತ್ತು ಬೇಟೆಗೆ ಬಲಿಯಾಗುವವರು. ನೀವು ಎಷ್ಟು ಒಳ್ಳೆಯ ವ್ಯಕ್ತಿಯಾಗಿದ್ದರೂ ಅದು ವ್ಯತ್ಯಾಸ ತರುವುದಿಲ್ಲ. ಏಕೆಂದರೆ ಅವರಿಗೆ ಬೇಕಿರುವುದು ದುರ್ಬಲ ವ್ಯಕ್ತಿ ಮಾತ್ರ. ನಿಮ್ಮ ಸುತ್ತಲಿನವರೆಗೆ ದುರ್ಬಲತೆ ಗೊತ್ತಾದರೆ ಸಾಕು ನಿಮ್ಮನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಎಲ್ಲರೂ ನಿನ್ನನ್ನು ದುರುಪಯೋಗ ಪಡಿಸಿಕೊಳ್ಳುತ್ತಾರೆ ಎಂಬುದು ನೆನಪಿನಲ್ಲಿಡಿ. ‘ದುರ್ಬಲತೆಯನ್ನು ಹೊಂದಿರುವುದು ತಪ್ಪಲ್ಲ. ಅದನ್ನು ಇತರರಿಗೆ ಗೊತ್ತು ಮಾಡಿಕೊಡುವುದು ದೊಡ್ಡ ತಪ್ಪು.’ ನಥಾನಿಯಲ್ ಸಮಸಮಸ ಹೀಗೆ ಹೇಳುತ್ತಾನೆ ‘ಒಬ್ಬ ವ್ಯಕ್ತಿಯ ಬಲವನ್ನು ಅವರು ತಮ್ಮ ದೌರ್ನಲ್ಯಗಳನ್ನು ಹೇಗೆ ಎದುರಿಸುತ್ತಾರೆ ಎಂದಬುದರ ಮೇಲೆ ಅಳೆಯಲಾಗುತ್ತದೆ.
ಸ್ವಯಂ ಗೌರವ
ಹೆನ್ರಿ ವಡ್ಸ್ವರ್ಥ್ ಲಾಂಗ್ಫೆಲೊ ಹೇಳಿದ ಮಾತು ಸತ್ಯವಾಗಿದೆ.’ ಹಿ ದ್ಯಾಟ್ ರೆಸ್ಪೆಕ್ಟ್÷್ಸ ಹಿಮ್ಸೆಲ್ಪ್ ಈಸ್ ಸೇಫ್ ಫ್ರಾಮ್ ಅರ್ಸ್.’ ನಿನ್ನನ್ನು ನೀನು ಗೌರವಿಸಿಕೊಳ್ಳದಿದ್ದರೆ ಸುತ್ತಲ ಸಮಾಜ ನಿನ್ನನ್ನು ತುಳಿದು ಹಾಕಿ ಬಿಡುತ್ತದೆ. ನಿನ್ನ ಗೌರವ ಮೊದಲು ನಿನ್ನಿಂದಲೇ ಶುರುವಾಗುತ್ತದೆ. ನೀವೇ ನಿಮ್ಮನ್ನು ಕೀಳಾಗಿ ನೋಡುತ್ತಿದ್ದರೆ ಬೇರೆಯವರು ನಿಮ್ಮನ್ನು ಮೂಲೆಗೆ ದೂಡುತ್ತಾರೆ. ಅದಕ್ಕಾಗಿ ಬೇರೆಯವರು ನಿಮಗೆ ಗೌರವ ಕೊಡಲಿ ಎಂದು ಕಾಯಬೇಡಿ, ನಿಮಗೆ ನೀವೇ ಗೌರವ ಕೊಟ್ಟುಕೊಳ್ಳಿ. ನೀವು ಆಡಿದ ಹಾಗೆ ನಡೆದುಕೊಳ್ಳುವುದನ್ನು ರೂಢಿಸಿಕೊಳ್ಳಿ. ಆಡಿದ ಹಾಗೆ ನಡೆದುಕೊಳ್ಳದಿದ್ದರೆ ಇತರರು ನಿಮ್ಮನ್ನು ಕೇವಲ ಮಾತನಾಡುವ ಆಸಾಮಿ ಎಂದು ತಿಳಿದು ಗೌರವಿಸುವುದನ್ನೇ ಬಿಟ್ಟುಬಿಡುತ್ತಾರೆ. ಕ್ರಮೇಣವಾಗಿ ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದನ್ನು ನಿಲ್ಲಿಸುತ್ತಾರೆ.
ಆಡುವ ಪದಗಳು
‘ನಾವು ಬಳಸುವ ಶಬ್ದಗಳು ಕೇವಲ ಶಬ್ದಗಳಲ್ಲ ಅವು ಶಕ್ತಿಯುತ ಅಸ್ತçಗಳಿದ್ದಂತೆ.’ ಕೆಟ್ಟ ಶಬ್ದಗಳು ಈಟಿಯಂತೆ ಇರಿಯುತ್ತವೆ. ಮನಸ್ಸಿಗೆ ಘಾಸಿ ಮಾಡುತ್ತವೆ. ಉತ್ತಮ ಶಬ್ದಗಳು ಹೂವಿನಂತೆ ನವಿರಾಗಿ ಮನಸ್ಸನ್ನು ಅರಳಿಸುತ್ತವೆ. ಸರಿಯಾದ ಸಮಯಕ್ಕೆ ಸರಿಯಾದ ಶಬ್ದಗಳನ್ನು ಬಳಸುವುದು ಬಹು ಮುಖ್ಯ. ನೀವು ಒಂದು ವೇಳೆ ಶಬ್ದಗಳ ಆಯ್ಕೆಯಲ್ಲಿ ಎಡವಿದರೆ ಜನ ನಿಮ್ಮನ್ನು ಕಡೆಗಣಿಸುತ್ತಾರೆ. ನಿಮ್ಮನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಬೇಡವಾದದ್ದನ್ನು ಪದೇ ಪದೇ ನೀವು ಹೇಳುತ್ತಿದ್ದರೆ ಜನ ನಿಮ್ಮನ್ನು ತಮಾಷೆ ವಸ್ತುವಾಗಿ ನೋಡುತ್ತಾರೆ. ನೀವಾಡಿದ ಮಾತುಗಳಿಂದಲೇ ನಿಮ್ಮನ್ನು ಚುಡಾಯಿಸುತ್ತಾರೆ. ತಮ್ಮ ಶಬ್ದಗಳ ಜಾಣತನದ ಆಯ್ಕೆಯಿಂದ ನಿಮ್ಮನ್ನು ಆಳಲು ಪ್ರಯತ್ನಿಸುತ್ತಾರೆ. ಯಶಸ್ವಿ ವ್ಯಕ್ತಿಗಳಿಗೆ ಪದಗಳ ಶಕ್ತಿ ತುಂಬಾ ಚೆನ್ನಾಗಿ ಗೊತ್ತಿರುತ್ತದೆ. ಯಾವಾಗ ಏನು ಹೇಳಬೇಕು ಮತ್ತು ಯಾವ ರೀತಿಯಲ್ಲಿ ಹೇಳಬೇಕೆಂದು ತಿಳಿದಿರುತ್ತಾರೆ. ಮೇಲಾಗಿ ಅವರಿಗೆ ಅಳೆದು ತೂಗಿ ಪದಗಳನ್ನು ಬಳಸುವುದೂ ಗೊತ್ತಿರುತ್ತದೆ. ಯಾವಾಗ ನೀವು ಕಡಿಮೆ ಮಾತನಾಡುತ್ತೀರೋ ಆಗ ಜನರು ನಿಮ್ಮ ಮಾತುಗಳನ್ನು ಗಮನವಿಟ್ಟು ಕೇಳುತ್ತಾರೆ. ನಿಮ್ಮ ಮಾತಿಗೆ ಬೆಲೆ ಕೊಡುತ್ತಾರೆ. ಮುಂದಿನವರು ನಿಮ್ಮ ಮಾತು ಒಪ್ಪದೇ ಇರಲು ದಾರಿ ಇರಬಾರದು ಆ ರೀತಿಯಲ್ಲಿ ಪರಿಣಾಮಕಾರಿಯಾಗಿ ಪದಗಳನ್ನು ಬಳಿಸಿ. ‘ನಮ್ಮ ನಾಲಿಗೆ ಎಲ್ಲಕ್ಕಿಂತ ದೊಡ್ಡ ಆಯುಧ.’ ಎಂಬುದನ್ನು ನೆನಪಿನಲ್ಲಿಡಬೇಕು.

ಸದ್ಗುಣ
‘ಜಗತ್ತು ಪ್ರಯೋಜನದ ಸ್ನೇಹಿತ.’ ಪ್ರಯೋಜನವಿಲ್ಲದೇ ಯಾರೂ ಯಾರಿಗೂ ಸಂಬಂಧವಿಲ್ಲ. ಉಚಿತವಾಗಿ ಯಾರೂ ನಿಮ್ಮೊಂದಿಗೆ ಬೆರೆಯುವುದಿಲ್ಲ. ಯಾವುದೇ ಉದ್ದೇಶಕ್ಕಾಗಿ ಜೊತೆಯಲ್ಲಿರುತ್ತಾರೆ. ಉದ್ದೇಶಿತ ಗುರಿ ಮುಟ್ಟಿದ ನಂತರ ಹೊರಟು ಹೋಗುತ್ತಾರೆ. ನೀವು ಮಾಡುವ ಪ್ರತಿ ಕೆಲಸವನ್ನು ಬೇರೆಯವರು ಗಮನಿಸುತ್ತಲೇ ಇರುತ್ತಾರೆ. ಸದ್ಗುಣ ಹಣ ಅಧಿಕಾರ ಇರುವಾಗ ಸಿಗುವ ಗೌರವ, ಖಾಲಿ ಕೈಗಳಿಗೆ ಆಲಸಿ ಮನಸ್ಸಿಗೆ ಸಿಗುವುದಿಲ್ಲ ಅನ್ನುವ ಸತ್ಯವನ್ನು ಮನಸ್ಸಿನಲ್ಲಿಟ್ಟುಕೊಂಡಿರಬೇಕು. ನಿಮ್ಮ ನಡೆಯ ಬಗ್ಗೆ ಜಾಗರೂಕರಾಗಿರುವುದು ಅವಶ್ಯಕ.
ಸತ್ಸಂಗ
‘ಸುಂದರ ವ್ಯಕ್ತಿಗಳು ಯಾವಾಗಲೂ ಒಳ್ಳೆಯವರಾಗಿರುತ್ತಾರೆ ಎಂದು ಹೇಳಲಾಗುವುದಿಲ್ಲ. ಆದರೆ, ಒಳ್ಳೆಯ ವ್ಯಕ್ತಿಗಳು ಯಾವಾಗಲೂ ಸುಂದರವಾಗಿರುತ್ತಾರೆ.’ ಸತ್ಸಂಗಗಳನ್ನು ಬೆಳೆಸಿಕೊಳ್ಳುವುದರ ಮೂಲಕ ಸ್ವಯಂ ಪ್ರೇರಣೆ ಹೆಚ್ಚಿಸಿಕೊಳ್ಳುವುದು ಒಳಿತು. ಯಶಸ್ವಿ ವ್ಯಕ್ತಿಗಳು ಸ್ವಯಂ ಪ್ರೇರಣೆ ಪಡೆಯುವುದರೊಂದಿಗೆ ಜೊತೆಗೆ ಇರುವವರನ್ನು ಪ್ರೇರೇಪಿಸುತ್ತಾರೆ. ಸತ್ಸಂಗದಲ್ಲಿದ್ದಾಗ್ಯೂ ಸಹ ನೀವು ಮಾಡುವ ಕೆಲಸದಲ್ಲಿ ತಪ್ಪಿಲ್ಲದಿದ್ದಾಗ ಮತ್ತೊಬ್ಬರ ಒಪ್ಪಿಗೆಗೆ ಕಾಯಬೇಕಾಗಿಲ್ಲ ಎಂಬುದನ್ನು ಅರಿಯಿರಿ. ನಿಮ್ಮ ಮಾತುಗಳಲ್ಲಿ ದಾಕ್ಷಿಣ್ಯ, ಕೀಳರಿಮೆ, ಅತೀವ ಗೌರವ, ಭಯ ನಾಚಿಕೆ ಇಣುಕ ಕೂಡದು. ಯಾರೋ ನಿಮ್ಮನ್ನು ಮೋಸಗೊಳಿಸಿದರೆಂದ ಮಾತ್ರಕ್ಕೆ ಜನರೆಲ್ಲ ಅಪ್ರಯೋಜಕರೆಂದು ನಿಂದಿಸಬಾರದು. ಹಳೆಯ ವಾಸನೆಯಿಂದ ಹಳೆಯ ಸುಳಿಯಲ್ಲಿ ಸಿಲುಕಿಕೊಳ್ಳಬಾರದು.
ಕೋಪ ನಿಯಂತ್ರಿಸಿ
ಕೋಪದಲ್ಲಿ ಯೋಚಿಸುವ ಕ್ಷಮತೆ ಕಳೆದುಹೋಗುತ್ತದೆ. ನಿಜವಾದ ಬುದ್ಧಿವಂತಿಕೆ ಕೋಪಕ್ಕೆ ಕೋಪಗೊಂಡು ಉತ್ತರ ಕೊಡುವುzರಲ್ಲಿ ಇಲ್ಲ. ನಕಾರಾತ್ಮಕ ಆಲೋಚನೆಗಳಿಗೆ ಬಲಿಯಾಗಿ ಚೀರುವುದರಲೂದಿಲ್ಲ. ಅಂಥ ಸಮಯದಲ್ಲಿ ಮುಂದಿನವರನ್ನು ಬೆಚ್ಚಿ ಬೀಳಿಸುವಂತಹ ಹುಸಿ ನಗೆ ಬೀರಿ ಆಟವನ್ನು ಪಲ್ಟಿ ಮಾಡುವುದು ಜಾಣತನ. ಜಗತ್ತಿನ ಅತ್ಯುತ್ತಮ ನಾಯಕರಿಗೆ ನಕಾರಾತ್ಮಕ ಪ್ರಶ್ನೆಗಳನ್ನು ಕೇಳಿದಾಗ ಅವರು ಹರಿ ಹಾಯುವುದಿಲ್ಲ. ಮುಂದಿನವರು ಮತ್ತೆ ಆ ವಿಷಯವಾಗಿ ಏನನ್ನಾದರೂ ಕೇಳುವ ಧೈರ್ಯ ಮಾಡಬಾರದು ಹಾಗೆ ಸ್ಮಾರ್ಟ್ ಆಗಿ ಉತ್ತರ ನೀಡುತ್ತಾರೆ.
ಆತುರತೆ
ಆತುರತೆ ನಾಶಗೊಳಿಸುತ್ತದೆ. ‘ಆತುರತೆಗೆ ಸಹನೆ ನಿಜವಾದ ಮದ್ದು.’ ಸುಪ್ರಸಿದ್ಧ ಆಟಗಾರರು ನಾಯಕರು ನಟರು ತಮ್ಮ ಪ್ರತಿಭೆ ಅಪ್ರತಿಮಗೊಳಿಸಲು ಉತ್ತಮ ಸಮಯಕ್ಕಾಗಿ ಕಾಯುತ್ತಾರೆ. ಬಂದ ಅವಕಾಶಗಳನ್ನು ಅತ್ಯುತ್ತಮ ರೀತಿಯಲ್ಲಿ ಬಳಸಿಕೊಳ್ಳುತ್ತಾರೆ. ರಾತ್ರೋರಾತ್ರಿ ಯಶಸ್ಸನ್ನು ಹಂಬಲಿಸಿ ಅಡ್ಡ ದಾರಿ ತುಳಿದು ಜೀವನಪೂರ್ತಿ ಪಶ್ಚಾತ್ತಾಪ ಪಡುವ ದಾರಿಯನ್ನು ತುಳಿಯುವುದಿಲ್ಲ. ಆತುರತೆಯಿಂದ ಹೆಜ್ಜೆ ಮುಂದಿಟ್ಟರೆ ಅದನ್ನು ಹಿಂದಕ್ಕೆ ತೆಗೆದುಕೊಳ್ಳುವುದು ಕಷ್ಟ ಸಾಧ್ಯ. ಆತುರದಲ್ಲಿ ನಿರ್ಧಾರ ತೆಗೆದುಕೊಳ್ಳುವವರು ಸದಾ ಪಶ್ಚಾತ್ತಾಪ ಪಡುತ್ತಾರೆ. ಸ್ಪಷ್ಟವಾಗಿ ಯೋಚಿಸಿ ನಂತರ ಪ್ರತಿಕ್ರಿಯಿಸಬೇಕು. ಪ್ರತಿಕ್ರಿಯಿಸಿ ನಂತರ ಯೋಚಿಸಿದರೆ ಮೂರ್ಖರಾಗಬೇಕಾಗುತ್ತದೆ. ಗೆಲುವಿನ ಸರದಾರರ ಸಂಯಮ ಸಹನೆ ದುಡಕದಿರುವ ಪ್ರವೃತ್ತಿಯನ್ನು ಕಂಡು ಬೆರಗಾಗುವ ನಾವು ಆ ಗುಣಗಳನ್ನು ಅಳವಡಿಸಿಕೊಳ್ಳಬೇಕು. ಆಗ ನಿಧಾನವಾಗಿಯಾದರೂ ಬುದ್ಧಿವಂತಿಕೆಯಲ್ಲಿ ಬಹು ಉತ್ತಮ ಬೆಳವಣಿಗೆ ಕಾಣಬಹುದು.
ಕೊನೆ ಹನಿ
ಗುರಿಯಿಲ್ಲದ ಕನಸುಗಳಿಲ್ಲದ ಜನರೊಂದಿಗೆ ನೀವಿದ್ದರೆ ನಿಮ್ಮ ಕನಸುಗಳಿಗೆ ನೀವೇ ಗುಂಡಿ ತೋಡಿದ ಹಾಗೆ. ಉಡಾಫೆ ಜನರೊಂದಿಗೆ ಬೆರೆಯುವುದನ್ನು ನಿಲ್ಲಿಸಬೇಕು. ‘ಸಿಂಹಗಳೊಂದಿಗೆ ಇದ್ದರೆ ಬೇಟೆಯಾಡುವುದನ್ನು ಕಲಿಯುತ್ತೀರಿ. ಕತ್ತೆಗಳೊಂದಿಗೆ ಇದ್ದರೆ ಒದೆ ತಿನ್ನೋದು ಖಂಡಿತ.’ ಅರಿವು ಇರುವ ಜನರೊಂದಿಗೆ ಬೆರೆಯಬೇಕು. ‘ದ ಸಿಕ್ರೆಟ್ ಈಸ್ ನಾಟ್ ಟು ಫೈಂಡ್ ದ ಮೀನಿಂಗ್ ಆಫ್ ಲೈಫ್, ಬಟ್ ಟು ಯ್ಯೂಸ್ ಯುವರ್ ಲೈಫ್ ಟು ಮೇಕ್ ಥಿಂಗ್ಸ್ ದ್ಯಾಟ್ ಆರ್ ಮೀನಿಂಗ್ಫುಲ್.’ ಯಶಸ್ಸು ಎಂದಿಗೂ ತಪ್ಪುಗಳನ್ನು ಮಾಡದಿರುವಲ್ಲಿ ಇಲ್ಲ. ಆದರೆ ಎರಡನೇ ಬಾರಿಗೆ ಅದೇ ತಪ್ಪನ್ನು ಮಾಡದಿರುವಲ್ಲಿ ಇದೆ.


