ಲೇಖನ
*- *ಡಾ ಶಶಿಕಾಂತ ಪಟ್ಟಣ*
ರಾಮದುರ್ಗ – ಪುಣೆ
ಉದಯರಶ್ಮಿ ದಿನಪತ್ರಿಕೆ
ಇವತ್ತು ರಾಜಕಾರಣ ಮತ್ತು ಪ್ರಾಮಾಣಿಕತೆ ಎಂಬುದು ತದ್ವಿರುದ್ಧ ಪದಗಳು. ಇದಕ್ಕೆ ಮಾದರಿ ಎಂದರೆ ಮಾಜಿ ಸಚಿವ ಶ್ರೀ ಎಸ್ ಕೆ ಕಾಂತಾ
ತನ್ನ ಬದುಕಿನುದ್ದಕ್ಕೂ ಸಂಘರ್ಷ ಸಮನ್ವಯತೆಯ ಸಾಕಾರ ರೂಪದಲ್ಲಿ ತಮ್ಮನ್ನು ತೊಡಗಿಸಿಕೊಂಡ ನಾನು ಕಂಡರ ಅತ್ಯಂತ ಅಪರೂಪದ ಪ್ರಾಮಾಣಿಕ ರಾಜಕಾರಣಿ ಎಂದು ಕರೆದರೆ ತಪ್ಪಾಗಲಾರದು. ಈಗಲೂ ಬಾಡಿಗೆ ಮನೆಯಲ್ಲಿ ಕಾಲ ಕಳೆಯುವ ಸರಳ ಸಜ್ಜನಿಕೆಯ ಸ್ನೇಹ ಜೀವಿ. ಮಂತ್ರಿ ಪದವಿ ಇದ್ದಾಗ ಕಾರ್ಮಿಕರ ಪರವಾಗಿ ನಿಂತ ಶ್ರೀ ಎಸ್ ಕೆ ಕಾಂತಾ ಕರ್ನಾಟಕವು ಕಂಡ ಅಪರೂಪದ ಪ್ರಬುದ್ಧ ಶ್ರೇಷ್ಠ ರಾಜಕಾರಣಿ.
ಪ್ರಶಸ್ತಿ ಹಣವನ್ನು ಕಾರ್ಮಿಕ ನಿಧಿಗೆ ಮರಳಿ ನೀಡಿದ ಮಹಾನುಭಾವರು
ಕಳೆದ ವರ್ಷ ಡಿ ದೇವರಾಜ ಅರಸು ಪ್ರಶಸ್ತಿ ಅವರಿಗೆ ದೊರಕಿತು. ಶ್ರೀ ಸಿದ್ಧರಾಮಯ್ಯ ಶ್ರೀ ಬಸವರಾಜ ಹೊರಟ್ಟಿ ಅಂತಹ ಅನೇಕ ಹಿರಿಯ ನಾಯಕರ ಮಧ್ಯೆ ಸದು ವಿನಯದ ಶ್ರೀ ಎಸ್ ಕೆ ಕಾಂತಾ ಅವರು ಬೆಂಗಳೂರಿನ ಬ್ಯಾಂಕ್ವೆಟ್ ಹಾಲ್ ನಲ್ಲಿ ತಮಗೆ

ದೊರೆತ ಐದು ಲಕ್ಷ ರೂಪಾಯಿ ಹಣವನ್ನು ಕಾರ್ಮಿಕ ಕಲ್ಯಾಣ ನಿಧಿಗೆ ಮರಳಿ ಪ್ರಶಸ್ತಿ ಹಣವನ್ನು ನೀಡಿದ ಮಹಾನ್ ವ್ಯಕ್ತಿಗಳು. ನಡೆ ನುಡಿ ಸಮನ್ವಯದ ನಿಜ ವಕ್ತಾರರು.
ಎಸ್.ಕೆ. ಕಾಂತ ಅವರು ಕಾರ್ಮಿಕರಾಗಿ, ಕಾರ್ಮಿಕ ನಾಯಕರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ಶಾಸಕರಾಗಿ, ಸಚಿವರಾಗಿ ತಮ್ಮನ್ನು ಪೊರೆದ ಸಮಾಜಕ್ಕೆ ತೆತ್ತುಕೊಂಡವರು. ಜನ ಮುಖ್ಯ ಎಂದವರು. ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದವರು. ಅಧಿಕಾರದ ಸ್ಥಾನಗಳು, ಅವಕಾಶಗಳು ಸಿಕ್ಕರೂ ಹಣ- ಆಸ್ತಿಗಳತ್ತ ತಿರುಗಿ ನೋಡದವರು. ಬದುಕನ್ನು ಜನಕಲ್ಯಾಣಕ್ಕಾಗಿ ಮುಡಿಪಿಟ್ಟ ಕಾಂತ ಅವರಿಗೆ ಈ ಬಾರಿ ದೇವರಾಜ ಅರಸು ಪ್ರಶಸ್ತಿ ಸಂದಿರುವುದು, ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ…
87ರ ಹರೆಯದ ಎಸ್.ಕೆ. ಕಾಂತ, ಕಲ್ಯಾಣ ಕರ್ನಾಟಕ ಭಾಗದ ಅಸಲಿ ಹೋರಾಟಗಾರರು. ರಾಜ್ಯ ರಾಜಧಾನಿ ಬೆಂಗಳೂರಿನಿಂದ ಬಹಳ ದೂರದ ಕಲಬುರಗಿಯಲ್ಲಿದ್ದು, ಪ್ರಚಾರ-ಪ್ರಶಸ್ತಿಗಳಿಂದ ದೂರವೇ ಉಳಿದವರು. ಅಪರೂಪದ ಸಮಾಜಸೇವಕರು.
ಇಂತಹ ಸರಳ ಸಜ್ಜನರಿಗೆ, ಪರಮ ಪ್ರಾಮಾಣಿಕರಿಗೆ ಈ ಬಾರಿ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿರುವುದು, ಪ್ರಶಸ್ತಿಗೇ ಬೆಲೆ ಬಂದಂತಾಗಿದೆ.
ಎಸ್.ಕೆ. ಕಾಂತ ಅವರು ಕಾರ್ಮಿಕರಾಗಿ, ಕಾರ್ಮಿಕ ನಾಯಕರಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ, ರಾಜಕಾರಣಿಯಾಗಿ ತಮ್ಮನ್ನು ಪೊರೆದ ಸಮಾಜಕ್ಕೆ ತೆತ್ತುಕೊಂಡವರು. ಜನ ಮುಖ್ಯ ಎಂದವರು. ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದವರು. ಅಧಿಕಾರದ ಸ್ಥಾನಗಳು, ಅವಕಾಶಗಳು ಸಿಕ್ಕರೂ ಹಣ- ಆಸ್ತಿಗಳತ್ತ ತಿರುಗಿ ನೋಡದವರು. ಬದುಕನ್ನು ಜನಕಲ್ಯಾಣಕ್ಕಾಗಿ ಮುಡಿಪಿಟ್ಟು ಕಲಬುರಗಿ ಭಾಗದ ಜನರ ಪಾಲಿನ ಗಾಂಧಿಯಾದವರು.
ಕೌಟುಂಬಿಕ ಜೀವನ
ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಹಾಗರಗುಂಡಗಿಯಲ್ಲಿ 1938ರಲ್ಲಿ ಜನಿಸಿದ ಎಸ್.ಕೆ.ಕಾಂತ ಅವರು, ಕಡುಕಷ್ಟದ ಕುಟುಂಬದಿಂದ ಬಂದವರು. ಹಸಿವು, ಅವಮಾನಗಳನ್ನು ಅರಗಿಸಿಕೊಂಡೇ ಬೆಳೆದವರು. ಪ್ರಾಥಮಿಕ ಶಾಲೆಗೆ ಓದಲು ಕಲಬುರಗಿಗೆ ಬಂದ ಕಾಂತಾ, ಮನೆಯ ಪರಿಸ್ಥಿತಿ ಸರಿ ಇಲ್ಲದ ಕಾರಣ ಶಾಲೆ ಬಿಟ್ಟರು. ಎಂಎಸ್ಕೆ ಮಿಲ್ನಲ್ಲಿ ಕಾರ್ಮಿಕರಾಗಿ ಕೆಲಸಕ್ಕೆ ಸೇರಿದರು. ತಮ್ಮಂತೆಯೇ ಇದ್ದ ಕೂಲಿ ಕಾರ್ಮಿಕರ ಕಷ್ಟ-ಸುಖ ಅರಿತು ಅರಗಿಸಿಕೊಂಡರು. ತಂದೆ ಕರಿಸಿದ್ದಪ್ಪ ಒಬ್ಬ ಕೃಷಿ ಕಾರ್ಮಿಕರಾಗಿದ್ದರು. ಮಿಲ್ ಕಾರ್ಮಿಕರಿಗೆ ಆಗುತ್ತಿದ್ದ ಅನ್ಯಾಯವನ್ನು ಪ್ರತಿಭಟಿಸುವ ಮೂಲಕ ಕಾರ್ಮಿಕ ನಾಯಕರಾಗಿ ಗುರುತಿಸಿಕೊಂಡರು.
ಕಾರ್ಮಿಕ ಮುಷ್ಕರ ಹೋರಾಟ ಇವುಗಳ ಜೊತೆ ಜೊತೆಗೆ, ಕಾಂತಾ ಅವರು ರಾಜಕಾರಣಕ್ಕೆ ಧುಮುಕಿ, 1967ರಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷ ಸೇರಿದರು. ಅದೇ ಸಮಯದಲ್ಲಿ ಕಾಂತ ಅವರು ಕೆಲಸ ಮಾಡುತ್ತಿದ್ದ ಎಂಎಸ್ಕೆ ಮಿಲ್ಲನ್ನು ವಿನಾಕಾರಣ ಸರಕಾರವೇ ಬಂದ್ ಮಾಡಿತು. ಆಗ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು ವೀರೇಂದ್ರ ಪಾಟೀಲರು. ಅದೇ ಭಾಗದವರು. ಆದರೂ ಕಾರ್ಮಿಕರ ಪರ ನಿಲ್ಲಲಿಲ್ಲ. ಸ್ಥಳೀಯ ಶಾಸಕರೂ ಸರ್ಕಾರದ ಪರವೇ ಕೈಜೋಡಿಸಿದರು. ಆಗ ಕಾಂತಾ ಅವರ ನೇತೃತ್ವದಲ್ಲಿ ಕಾರ್ಮಿಕರ ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳು ಜರುಗಿದವು. ಅದು ಅವರನ್ನು ಜನನಾಯಕನನ್ನಾಗಿ ರೂಪಿಸಿತು. 1983ರಲ್ಲಿ ಜನತಾ ಪಕ್ಷ ಸೇರಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರು. ಲಿಂಗಾಯತರಾದರೂ, ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ಹೋರಾಟಕ್ಕಿಳಿಯುತ್ತಿದ್ದರಿಂದ, ಆ ಜನರೇ ಹಣ ಹಾಕಿ, ಓಡಾಡಿ ಕಾಂತಾರನ್ನು ಗೆಲ್ಲಿಸಿಕೊಂಡು ಬಂದರು. ಮೊದಲ ಬಾರಿಗೆ ಶಾಸಕರಾಗಿ ವಿಧಾನಸೌಧದ ಮೆಟ್ಟಿಲು ತುಳಿದರು.
ಅದಾದ ನಂತರ, 1985ರಲ್ಲಿ ಮತ್ತೆ ಜನತಾ ಪಕ್ಷದಿಂದ ಕಲಬುರಗಿ ನಗರದಿಂದ ಸ್ಪರ್ಧಿಸಿದ ಕಾಂತ ಅವರಿಗೆ ಸರೋಜಿನಿ ಮಹಿಷಿಯವರು ಚುನಾವಣಾ ಖರ್ಚಿಗಾಗಿ 10 ಸಾವಿರ ಕೊಟ್ಟಿದ್ದರು. , ಮಧು ದಂಡವತೆ ಮತ್ತು ನಜೀರ್ ಸಾಬ್ರಂತಹ ನಾಯಕರು ಕಲಬರುಗಿಗೆ ಬಂದು ಕಾಂತ ಪರ ಪ್ರಚಾರ ಭಾಷಣ ಮಾಡಿದ್ದರು. ಅವರೆಲ್ಲರ ಪ್ರಯತ್ನದ ಫಲವಾಗಿ ಕಾಂತ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.
ಒಂದೊಮ್ಮೆ ಮಡದಿಯ ಮೈಮೇಲಿನ ಬಂಗಾರವನ್ನೂ ಸಹ ಅಡವಿಟ್ಟು ಚುನಾವಣೆಯ ಖರ್ಚು ವೆಚ್ಚ ನಿರ್ವಹಿಸಿದ್ದಾರೆ. ಸಿಟ್ಟಿಗೆದ್ದ ಮಡದಿ ನನ್ನ ಬಂಗಾರ ನನಗೆ ಕೊಡಿ ಇಲ್ಲದಿದ್ದರೆ ನಾನು ತವರು ಮನೆಗೆ ಹೋಗುವೆ ಬಂಗಾರ ಕೊಟ್ಟ ಮೇಲೆ ಬರುತ್ತೇನೆ ಎಂದು ಹಠ ಮಾಡಿದಾಗ ಆಗಲಿ ನೀನು ನಿನ್ನ ತವರು ಮನೆಗೆ ಹೋಗು ಬಂಗಾರ ಮರಳಿ ಪಡೆದಾಗ ನಿನಗೆ ಕೊಟ್ಟು ಕರೆದುಕೊಂಡು ಬರುತ್ತೇನೆ ಎಂದು ಹೆಂಡತಿಗೆ ಹೇಳಿದರಂತೆ.
ಆಗ, ಎರಡನೇ ಬಾರಿಗೆ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು, ಕಲ್ಯಾಣ ಕರ್ನಾಟಕ ಭಾಗದ ಹಿರಿಯರು, ಲಿಂಗಾಯತ ನಾಯಕರೂ ಆದ ವಿಶ್ವನಾಥರೆಡ್ಡಿ ಮುದ್ನಾಳರನ್ನು ಮಂತ್ರಿ ಮಾಡುತ್ತಾರೆಂದು ಎಲ್ಲರೂ ಭಾವಿಸಿದ್ದರು. ಆದರೆ ಹೆಗಡೆಯವರು, ಕಾರ್ಮಿಕ ನಾಯಕ ಎಸ್.ಕೆ. ಕಾಂತ ಅವರನ್ನು ಕ್ಯಾಬಿನೆಟ್ ಸಚಿವರನ್ನಾಗಿಸಿದರು. ಅದೂ ಅವರದೇ ಕ್ಷೇತ್ರವಾದ ಕಾರ್ಮಿಕ ಖಾತೆಯನ್ನೇ ಕೊಟ್ಟಿದ್ದರು. ಕಾಂತ ಅವರೊಂದಿಗೆ ಅಂದು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದವರಲ್ಲಿ ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರೂ ಇದ್ದರು.
ಹೋರಾಟದಿಂದ ಬಂದವರು ಅಧಿಕಾರದ ಸ್ಥಾನಗಳಿಗೆ ಏರಿದರೆ, ಮುಂದುವರೆದು ಶಾಸಕ, ಸಚಿವರಾದರೆ, ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಸಹಜ. ಸರ್ಕಾರದ ಭಾಗವಾಗಿ ಕಾರ್ಮಿಕರ ವಿರುದ್ಧ ನಿಲುವು ತಾಳುವುದೂ ಇದೆ. ಆದರೆ ಕಾಂತ ಅವರ ವಿಷಯದಲ್ಲಿ ಹಾಗಾಗಲಿಲ್ಲ. ಅವರು ಮಂತ್ರಿಯಾಗಿದ್ದರೂ ಕಾರ್ಮಿಕರ ಪರವಾಗಿಯೇ ಇದ್ದರು. ಕೆಲವು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಕಾರ್ಮಿಕರ ಪರವೇ ವಕಾಲತ್ತು ವಹಿಸಿದರು. ಆ ಕಾರಣದಿಂದಾಗಿ ಅವರ ಸಚಿವ ಸ್ಥಾನ 18 ತಿಂಗಳಿಗೆ ಕೊನೆಯಾಯಿತು. ಮತ್ತೆ ಕಾರ್ಮಿಕನಾಗಿ ಕಾರ್ಖಾನೆ ಸೇರಿದರು.
ಪ್ರಾಮಾಣಿಕತೆಯ ಪಾರಿಭಾಷಿಕ ಪದ
ಕಾಂತಾ ಅವರು 1986ರಲ್ಲಿ ರಾಮಕೃಷ್ಣ ಹೆಗಡೆಯವರ ಕ್ಯಾಬಿನೆಟ್ನಲ್ಲಿ ಕಾರ್ಮಿಕ ಖಾತೆ ಸಚಿವರಾಗಿದ್ದಾಗಿನಿಂದಲೂ ತಮ್ಮ ಪ್ರಾಮಾಣಿಕತೆಗೆ ಹೆಸರಾದವರು. ಆಗ ನಡೆದ ಘಟನೆಯೊಂದನ್ನು ನೆನಪಿಸಿಕೊಂಡಿದ್ದಾರೆ. ಅದೇನೆಂದರೆ, ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಂದ ಎಸ್.ಕೆ. ಕಾಂತ ಅವರಿಗೆ ಪತ್ರವೊಂದು ಬಂದಿತ್ತು. ಅದನ್ನು ಅವರು ಜನರ ಮುಂದೆಯೇ ಒಡೆದು ಓದಿ, ಪ್ರತಿಕ್ರಿಯಿಸಿದ್ದನ್ನು ಕಣ್ಣಾರೆ ಕಂಡು ವಿವರಿಸಿದ್ದು ಹೀಗೆ..
”ಅದು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಪತ್ರ. ಸಾಹೇಬ್ರು ಕಲಬುರಗಿಯಲ್ಲಿದ್ರು. ಎಲ್ಲರ ಮುಂದೆ ಓದಿದರು. ಏನಿತ್ತೆಂದರೆ, ಹೆಗಡೆಯವರು ಕಾಂತಾರಿಗೆ ಬೆಂಳೂರಿನ ಪ್ರತಿಷ್ಠಿತ ಬಡಾವಣೆಯಾದ ಡಾಲರ್ಸ್ ಕಾಲನಿಯಲ್ಲಿ ಅವರ ಹೆಸರಿಗೆ 50 x 80 ಸೈಟ್ ಮಂಜೂರು ಮಾಡಿದ್ದರು. ಅದಕ್ಕೆ ಕಾಂತ ಅವರು ಒಪ್ಪಿಗೆ ಸೂಚಿಸಬೇಕಾಗಿತ್ತು. ಆದರೆ ನಮ್ಮ ಕಾಂತ ಸಾಹೇಬ್ರು, ‘ಮಾನ್ಯ ಶ್ರೀ ಮುಖ್ಯಮಂತ್ರಿಗಳಿಗೆ, ನಿಮ್ಮ ಕಾಳಜಿಗೆ ಧನ್ಯವಾದಗಳು, ಆದರೆ ನಾನು ಈ ಸೈಟನ್ನು ಪಡೆಯಲು ಅರ್ಹನಲ್ಲ, ಪಡೆಯುವುದಿಲ್ಲ. ಅನ್ಯಥಾ ಭಾವಿಸಬೇಡಿ’ ಎಂದಷ್ಟೇ ಹೇಳಿ ಅದನ್ನು ವಾಪಸ್ ಮಾಡಿಬಿಟ್ಟರು. ಯಾರಿದಾರೆ ಹೇಳಿ ? 1986ರಲ್ಲಿ ಡಾಲರ್ಸ್ ಕಾಲನಿಯಲ್ಲಿ ಸೈಟ್ ಅಂದ್ರೆ, ಅದು ಇವತ್ತು ಎಷ್ಟು ಕೋಟಿಯಾಗುತ್ತಿತ್ತು? ಕಾಂತಾ ಅವರದ್ದು ಒಂದೇ ಮಾತು. ಇಂಥ ಮನುಷ್ಯ ಸಿಗಾಕಿಲ್ಲ. ಗಾಂಧಿ, ಬುದ್ಧ, ಅಂಬೇಡ್ಕರ್ ಮೂವರನ್ನು ಒಟ್ಟಿಗೆ ಸೇರಿಸಿದ್ರೆ ಆಗುವಂತಹ ವ್ಯಕ್ತಿತ್ವ ಅದು. ಅವರ ಜೊತೆಗಿರೋದೆ ನಮ್ಮ ಭಾಗ್ಯ. ಅವರ ಹೆಸರಲ್ಲಿ ಇವತ್ತಿಗೂ ಒಂದೇ ಒಂದು ಇಂಚು ಭೂಮಿ ಇಲ್ಲ. ನಂಬ್ತೀರಾ?” ಓದುಗರೇ.
ಅಷ್ಟೇ ಅಲ್ಲ, ಸ್ವತಃ ಕಾಂತ ಅವರೇ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ‘ಎಷ್ಟು ದಿನ ನಾವು ಅಧಿಕಾರದಲ್ಲಿದ್ದೆವು ಎನ್ನುವುದಲ್ಲ, ಏನು ಕೆಲಸ ಮಾಡಿದೆವು ಎನ್ನುವುದು ಮುಖ್ಯ’ ಎಂದಿದ್ದರು. ಮತ್ತೂ ಮುಂದುವರೆದು, ‘ರಾಜಕೀಯದಲ್ಲಿ ನೀತಿ ಇರಬೇಕು. ಜನತೆ ನಮ್ಮ ಮೇಲೆ ವಿಶ್ವಾಸವಿಟ್ಟು ಆರಿಸಿ ಕಳಿಸಿದಾಗ ಜನರ ಸೇವೆಯನ್ನು ನಿಷ್ಠೆಯಿಂದ ಮಾಡಬೇಕು. ಮತದಾರರ ನಂಬಿಕೆ ಉಳಿಸಿಕೊಂಡು ಹೋಗಬೇಕು’ ಎಂದಿದ್ದರು.
ಸಚಿವ ಸ್ಥಾನ ಹೋದರೂ ಕಾರ್ಮಿಕರು ಮತ್ತು ಶ್ರಮಿಕರ ಪರವಾದ ಹೋರಾಟ ನಿಲ್ಲಲಿಲ್ಲ. ಆಳಂದ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಪರವಾಗಿ ಸತ್ಯಾಗ್ರಹ ನಡೆಸುತ್ತಿದ್ದಾಗ ಅವರನ್ನು ಬಂಧಿಸಿ ಜೈಲಿಗೆ ಕಳಿಸಲಾಗಿತ್ತು. ರೈತರು, ಸಿಮೆಂಟ್ ಕಾರ್ಖಾನೆ ಕಾರ್ಮಿಕರು, ದಲಿತರು ಮತ್ತಿತರರ ಸಮಸ್ಯೆಗಳಿಗಾಗಿ ಹೋರಾಟದ ಮುಂಚೂಣಿಯಲ್ಲಿರುವ ಕಾಂತ, ಕಲಬುರ್ಗಿಯಲ್ಲಿ ಕೆರೆಗಳ ರಕ್ಷಣೆಗೆ, ಸರ್ಕಾರಿ ಭೂಮಿಯ ಅತಿಕ್ರಮಣ, ಒತ್ತುವರಿಯ ತಡೆಗೆ ಹೋರಾಟ ಮಾಡಿದ್ದಿದೆ.
ಬದುಕಿನುದ್ದಕ್ಕೂ ಸಾಮಾಜಿಕ ಪಿಡುಗುಗಳಾದ ಪಾನನಿಷೇಧ, ಜಾತೀಯತೆ, ಶೋಷಣೆ, ಕಂದಾಚಾರ, ಮೂಢನಂಬಿಕೆ, ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತುತ್ತಲೇ ಬಂದ ಕಾಂತ ಅವರು, ದಲಿತ ಚಳವಳಿ, ರೈತ ಚಳವಳಿ, ಕನ್ನಡದ ಆದ್ಯತೆಗಾಗಿ ನಡೆದ ಗೋಕಾಕ್ ಚಳವಳಿಯಲ್ಲಿ ಸಕ್ರಿಯವಾಗಿ ಪಾಲುಗೊಂಡವರು. ಈಗಲೂ ಹೋರಾಟ ನಡೆಸುತ್ತಿದ್ದಾರೆ. ಅಮಾಯಕ, ಅಲಕ್ಷಿತ, ತುಳಿತಕ್ಕೆ ಒಳಗಾದ ಜನರಿಗೆ ನ್ಯಾಯ ಕೊಡಿಸಿ ಸಹಸ್ರಾರು ಕುಟುಂಬಗಳಿಗೆ ನೆರವಾಗುತ್ತಿದ್ದಾರೆ. ಇಂದಿಗೂ ಬಾಡಿಗೆ ಮನೆಯಲ್ಲಿರುವ ಎಸ್ ಕೆ ಕಾಂತ ಸಾಮಾಜಿಕ ಹೋರಾಟಗಾರರಿಗೆ ಮಾದರಿಯಾಗಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ ಸಿಗಬೇಕು, ಸಮಾಜದಲ್ಲಿ ಪ್ರೀತಿ ವಿಶ್ವಾಸ ಇರಬೇಕು. ದೇಶದ ಬಗ್ಗೆ ಕಳಕಳಿ ಇರಬೇಕು. ಜಾತಿ ಪದ್ಧತಿ ನಿಲ್ಲಬೇಕು. ಎಲ್ಲ ಕಡೆ ನೀತಿ ಬೆಳೆಯಬೇಕು. ದೇಶ ಆಳುವವರು ಆದರ್ಶದ ಬದುಕು ನಡೆಸಬೇಕು. ವ್ಯಕ್ತಿಪೂಜೆ ನಿಲ್ಲಬೇಕು ಎಂಬುದನ್ನು ಪ್ರತಿಪಾದಿಸುತ್ತಾ ಅದೇ ರೀತಿ ಬದುಕುತ್ತಿರುವ ಕಾಂತ ಅಪರೂಪದ ಅಸಲಿ ಸಮಾಜಸೇವಕ. ಇಂತಹ ಕಾಂತ ಅವರಿಗೆ ಈ ಬಾರಿ ದೇವರಾಜ ಅರಸು ಪ್ರಶಸ್ತಿ ಸಂದಿರುವುದು, ಪ್ರಶಸ್ತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಮಾಜದ ಬಗ್ಗೆ ಅರಸು ಅವರಿಗಿದ್ದ ಕಾಳಜಿ, ಕಳಕಳಿಯನ್ನು ಮುಂದುವರೆಸಿದ ಕಾಂತ ಅವರ ಹೋರಾಟದ ಬದುಕಿಗೆ ಬೆಲೆ ಬಂದಿದೆ.
ಶ್ರೀ ಎಸ್ ಕೆ ಕಾಂತಾ ಅಂತಹ ಅಪ್ಪಟ ಚಿನ್ನ ಮತ್ತೆ ರಾಜಕಾರಣದಲ್ಲಿ ಮರೀಚಿಕೆ. ನಮ್ಮ ಮಧ್ಯ ಒಬ್ಬ ಸೃಜನಶೀಲ ವ್ಯಕ್ತಿಯನ್ನು ನಾವು ನೋಡುತ್ತೇವೆ ಎಂದರೆ ಅದು ನಮ್ಮ ಸೌಭಾಗ್ಯವಲ್ಲವೇ. ಶ್ರೀ ಎಸ್ ಕೆ ಕಾಂತಾ ಅವರು ಇನ್ನೂ ನೂರಾರು ವರ್ಷ ಬದುಕಿ ಬಾಳಲಿ ಎಂದು ಹಾರೈಸುತ್ತೇನೆ..


