ಇಂಡಿ ತಾಲೂಕಿನಾದ್ಯಂತ ಹದಗೆಟ್ಟ ರಸ್ತೆಗಳು | ಚಿಟ್ಟ ಹಲಗೆ, ತಮಟೆ ಬಾರಿಸುವ ಮೂಲಕ ಪ್ರತಿಭಟನೆ
ಇಂಡಿ: ತಾಲೂಕಿನಾದ್ಯಂತ ಗ್ರಾಮೀಣ ಭಾಗದ ಬಹುತೇಕ ರಸ್ತೆಗಳು ಕೆಟ್ಟು ಹೋಗಿವೆ. ಸರಕಾರ ಅದರ ಸುಧಾರಣೆಯತ್ತ ಕೂಡಲೆ ಗಮನ ಹರಿಸಬೇಕು. ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಜಯ ಕರ್ನಾಟಕ ಕಾರ್ಯಕರ್ತರು ಪ್ರತಿಭಟಿಸಿ ತಾಲೂಕು ದಂಡಾಧಿಕಾರಿ ಬಿ.ಎಸ್ ಕಡಕಬಾವಿ ಅವರ ಮೂಲಕ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಮಂಗಳವಾರ ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾಕಾರರು ಚಿಟ್ಟ ಹಲಗೆ, ತಮಟೆ ಬಾರಿಸುವ ಮೂಲಕ ಮತ್ತು ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದರು.
ತದನಂತರ ಹೃದಯ ಭಾಗದ ಬಸವೇಶ್ವರ ವೃತದ ಮೂಲಕ ಹಾದು ತಾಲೂಕು ಆಡಳಿತ ಸೌಧಕ್ಕೆ ಆಗಮಿಸಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ಜಿಲ್ಲಾ ಅಧ್ಯಕ್ಷ ಮಹೇಶ ನಾಯಕ ಮಾತನಾಡಿ, ರಸ್ತೆಗಳು ದೇಶದ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮತ್ತು ನಿರ್ದಿಷ್ಟ ಪ್ರದೇಶದ ಆರ್ಥಿಕ ಬೆಳವಣಿಗೆಗೆ ಪರೋಕ್ಷವಾಗಿ ಕಾರಣವಾಗಿವೆ. ಆದರೆ ಈ ತಾಲೂಕಿನಾದ್ಯಂತ ಹದಗೆಟ್ಟ, ಕೆಟ್ಟ ರಸ್ತೆಗಳು ಕಂಡರೆ, ಜನರು ತುಂಬಾ ಗಂಭೀರವಾದ ಪರಿಸ್ಥಿತಿ ಅನುಭವಿಸುತ್ತಿದ್ದಾರೆ. ಕೂಡಲೇ ಹದಗೆಟ್ಟ ರಸ್ತೆಗಳ ಸುಧಾರಣೆ ಮಾಡಿಕೊಟ್ಟು ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಬೇಕು. ಪ್ರತಿಯೊಬ್ಬ ಬಡವರ ಪ್ರಾಣ ರಕ್ಷಣೆಗೆ ಸರಕಾರ ಮುಂದಾಗಬೇಕು. ಈ ಹದಗೆಟ್ಟ ರಸ್ತೆಗಳ ಸಮಸ್ಯೆ ನಿವಾರಣೆಯಾದಾಗ ಮಾತ್ರ ಇಂಡಿ ತಾಲೂಕು ಒಂದು ಸಮೃದ್ಧ ತಾಲೂಕಾಗಿ ಬೆಳೆಯಬಹುದು. ತಾಲೂಕಾ ಆಡಳಿತ ಕೂಡಲೇ ಎಚ್ಚೆತ್ತುಕೊಂಡು ಈ ಸಮಸ್ಯೆ ಬಗೆಹರಿಸಬೇಕು. ಒಂದು ವೇಳೆ ಈ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಿಂಟು ಗಬ್ಬೂರ, ರಿಯಾಜ ಪಾಂಡು, ತಾಲೂಕು ಅಧ್ಯಕ್ಷ ಇಸ್ಮಾಯಿಲ್ ಕುಣಬಿ, ನಗರ ಅಧ್ಯಕ್ಷ ಮಹ್ಮದಯಾಸಿನ ಶೇಖ, ದೇಸು ಚವ್ಹಾಣ, ನಫೀಸಾ ಶೇಖ, ಕವಿತಾ ಅಳ್ಳೊಳ್ಳಿ, ಸವಿತಾ ಅಡವಿ, ನಿಲಾಂಬಿಕಾ ಬಿರಾದಾರ, ಬೇಬಿ ತಳವಾರ, ಸೈನಾಜ ಮುಲ್ಲಾ, ಬುಡ್ಡು ಸರಾಫ, ಮಾದು ನಾವಿ, ಮುಸ್ತಾಕ ಪಾಂಡು, ಚಾಂದಸಾಬ ಪಾಂಡು, ಸೀರಾಜ ಕಾರಬಾರಿ, ಇಸ್ಮಾಯಿಲ್ ಮುಲ್ಲಾ, ರುಕ್ಸನಾ ಮಕಾಂದಾರ, ಸಾಹಿನ್ ಬಡೆಘರ, ಖಾಜಮಾ ಬಾಗವಾನ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.