ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಮಳೆ ನೀರಿನಿಂದ ಮನೆ ಪೂರ್ಣ ಆವೃತ್ತವಾಗಿ ಮಾರಾಟಕ್ಕೆ ತಯಾರಿಸಿದ್ದ ಸಿಹಿತಿಂಡಿ ಸಹಿತ ಐವತ್ತು ಸಾವಿರ ಮೌಲ್ಯದ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಳಾದ ಘಟನೆ ಪಟ್ಟಣದಲ್ಲಿ ಭಾನುವಾರ ಜರುಗಿದೆ.
ಪಟ್ಟಣದಲ್ಲಿ ಭಾನುವಾರ ರಾತ್ರಿ ಸುರಿದ ಸತತ ಮಳೆಯಿಂದ ಸದಯ್ಯನಮಠ ಸುತ್ತಮುತ್ತಲಿನ ಆನಂದ, ಮಲ್ಲಯ್ಯ, ಶಿವಯ್ಯ ಹಾಗೂ ಶ್ರೀಶೈಲ ಸ್ಥಾವರಮಠ ಎಂಬುವವರ ಮನೆಗಳಿಗೆ ಮಳೆ ನೀರು ಪ್ರವೇಶಿಸಿ ಅವಾಂತರ ಮಾಡಿದೆ. ಮಳೆ ನೀರು ಮನೆಯುದ್ದಕ್ಕೂ ತುಂಬಿದ ಪರಿಣಾಮ ಮಕ್ಕಳು ಸಹಿತ ಕುಟುಂಬದವರೆಲ್ಲ ನಿದ್ರಿಸಲು ಆಗದೇ ಅಸಹಾಯಕರಾಗಿ ಒಂದೆಡೆ ಕುಳಿತರು. ಜೊತೆಗೆ ಸೋಮವಾರ ಸಂತೆಯ ಮಾರಾಟಕ್ಕೆ ಸಿದ್ಧಪಡಿಸಿದ್ದ ಶೇವು, ಬೂಂದೆ ಲಾಡು, ಜಿಲೇಬಿಯಂತಹ ಸಾವಿರಾರು ರೂ.ಗಳ ಮೌಲ್ಯದ ತಿನಿಸುಗಳು ಸಂಪೂರ್ಣವಾಗಿ ಹಾಳಾಗಿವೆ. ಆನಂದ ಸದಯ್ಯನಮಠ ಅವರ ಮನೆಯಲ್ಲಿ ಸುಮಾರು ಒಂದು ಅಡಿಯಷ್ಟು ನೀರು ರಾತ್ರಿ ಇಡೀ ಇದ್ದ ಕಾರಣ ಪ್ರೀಜ್, ಕೂಲರ್ ಸಹಿತ ಹಲವು ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾನಿಗೊಳಗಾಗಿವೆ.
ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯಿಂದ ತಗ್ಗಾದ ಪ್ರದೇಶ ಹಾಗೂ ರಸ್ತೆಗಳಲ್ಲಿ ನೀರು ನಿಂತು ಸಾರ್ವಜನಿಕರ ತೊಂದರೆ ಉಂಟು ಮಾಡುವ ಕಾರಣ ಕೂಡಲೇ ಸ್ಥಳೀಯ ಆಡಳಿತ ಇಂತಹ ಪ್ರದೇಶಗಳನ್ನು ಗುರುತಿಸಿ ಸೂಕ್ತ ಕ್ರಮ ಕೈಗೊಳ್ಳಲು ಸದಯ್ಯನಮಠದ ವೀರಗಂಗಾಧರ ಸ್ವಾಮೀಜಿ, ಡಾ.ಆರ್.ಆರ್.ನಾಯಿಕ, ಡಾ.ಸತೀಶ ರಾಠೋಡ, ವ್ಯಾಪಾರಸ್ಥರಾದ ಕೆ.ಎಸ್.ಕೋರಿ, ಕಾಶೀನಾಥ ಸಾಲಕ್ಕಿ, ಶಿವಾನಂದ ಅತನೂರ ಆಗ್ರಹಿಸಿದ್ದಾರೆ.