ಸಿಂದಗಿಯಲ್ಲಿ ೮೪ ಕುಟುಂಬಗಳ ಮನೆಗಳನ್ನು ತೆರವುಗೊಳಿಸಿದ ಕ್ರಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಖಂಡನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸಿಂದಗಿ ನಗರದಲ್ಲಿ ೮೪ ಕುಟುಂಬಗಳ ಮನೆಗಳನ್ನು ತೆರವುಗೊಳಿಸಿ ನಿರ್ಗತಿಕರನ್ನಾಗಿ ಮಾಡಿರುವುದು ಅತ್ಯಂತ ಖಂಡನೀಯ, ಕೂಡಲೇ ಈ ಎಲ್ಲ ಕುಟುಂಬಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ನೇತೃತ್ವದಲ್ಲಿ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಮಾತನಾಡಿ, ಬಡವರ ಮೇಲೆ ಗದಾಪ್ರಹಾರ ಮಾಡುವುದು ಸರಿಯಲ್ಲ, ತೆರವು ಕಾಮಗಾರಿ ನಡೆಸುವ ಪೂರ್ವದಲ್ಲಿ ಶಾಶ್ವತ ಪರಿಹಾರ ಕಲ್ಪಿಸುವುದನ್ನು ಬಿಟ್ಟು ಏಕಾಏಕಿ ಕಾಮಗಾರಿ ನಡೆಸಿದರೆ ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಸಿಂದಗಿ ನಗರ ವ್ಯಾಪ್ತಿಯ ವಾರ್ಡ ನಂ-೨೩ ರಲ್ಲಿನ ಸರ್ವೆ ಸಂ- ೮೪೨/೧ಅ ಕ್ಷೇತ್ರ ೪.೦೦ ಎಕರೆ ಪುರಸಭೆಯ ಜಮೀನಿನಲ್ಲಿ ೨೦೦೪ ನೇ ಸಾಲಿನಲ್ಲಿ ಅಂದಿನ ಶಾಸಕರು, ಪುರಸಭೆ ಅಧಿಕಾರಿಗಳು ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ ಸರಿಸುಮಾರು ೮೪ ಮುಗ್ಧ, ಕೂಲಿಕಾರ್ಮಿಕ, ಬಡ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಎಲ್ಲ ಕುಟುಂಬಗಳಿಗೆ ಕಟ್ಟಡ ಪರವಾನಿಗೆ ನೀಡಿ ಪುರಸಭೆಗೆ ತೆರಿಗೆಯೂ ಕೂಡ ಭರಣ ಮಾಡಿದ್ದರು, ಈಗ ೨೦ ವರ್ಷಗಳ ನಂತರ ಅದೇ ಕ್ಷೇತ್ರದ ೨ ಎಕರೆ ೧೦ ಗುಂಟೆ ಜಮೀನಿಗೆ ಹಾಗೂ ೮೪ ಕುಟುಂಬಗಳಿಗೆ ತೆರವುಗೊಳಿಸಿ ಅನ್ಯಾಯವೆಸಿರುವುದು ನೋವು ತಂದಿದೆ, ಸಂಬಂಧಿಸಿದ ಸರ್ವೆ ಹಾಗೂ ಇನ್ನಿತರ ಆಡಳಿತ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಇಂದು ೮೪ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಅಂಗಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ಕಾರ್ಯದಿಂದಾಗಿ ಸುಮಾರು ೨.೫ ಕೋಟಿಗೂ ಹೆಚ್ಚಿನ ನಷ್ಟವಾಗಿದೆ. ದಿನನಿತ್ಯದ ಕಾರ್ಯಗಳು ಸ್ಥಗಿತಗೊಂಡು ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ, ಈ ವಿಷಯವನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಗಂಭೀರವಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮುಖಂಡರಾದ ಚಂದ್ರಶೇಖರ ಕವಟಗಿ, ಸಂಜಯ ಪಾಟೀಲ ಕನಮಡಿ, ಶಿವರುದ್ರ ಬಾಗಲಕೋಟ, ಶಂಕರಗೌಡ ಪಾಟೀಲ, ಈರಣ್ಣ ರೇವೂರ, ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಪಾಲಿಕೆ ಮಾಜಿ ಸದಸ್ಯ ಉಮೇಶ ವಂದಾಲ, ಸಾಬು ಮಾಶ್ಯಾಳ, ಮಲ್ಲಮ್ಮ ಜೋಗೂರ, ಭರತ ಕೋಳಿ,ಬಸವರಾಜ ಹಳ್ಳಿ, ಗೇಸುದರಾಜ್ ಇನಾಮದಾರ, ಶೇಖರ ಬಾಗಲಕೋಟ, ಅಶ್ವಥ ರೆಬಿನಾಳ, ರಾಜೇಶ ತಾವಸೆ, ಸಂತೋಷ ನಿಂಬರಗಿ, ಪಾಪುಸಿಂಗ್ ರಜಪೂತ, ವಿಜಯ ಹಿರೇಮಠ, ರಾಜು ಬಿರಾದಾರ, ಅಪ್ಪು ಕುಂಬಾರ, ಮಹೇಂದ್ರ ನಾಯಕ, ನ್ಯಾಯವಾದಿ ಡೊಳ್ಳಿ ಮೊದಲಾದವರು ಪಾಲ್ಗೊಂಡಿದ್ದರು.