ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವೆ ಸೆ.೧೪ರಂದು ದುಬೈನಲ್ಲಿ ನಡೆಯುತ್ತಿರುವ ಏಷ್ಯಾಕಪ್-೨೦೨೫ ಟಿ೨೦ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ತಂಡ ಗೆದ್ದು ಬರಲಿ ಎಂದು ಭಾರತದ ತ್ರಿವರ್ಣ ಧ್ವಜವನ್ನು ಹಿಡಿದು ಪ್ರಶಿಕ್ಷಣಾರ್ಥಿಗಳು ಭಾರತ ಕ್ರಿಕೆಟ್ ತಂಡಕ್ಕೆ ಶುಭ ಹಾರೈಸಿದರು.
ಈ ವೇಳೆ ಪ್ರಾಧ್ಯಾಪಕ ದಾನಯ್ಯ ಮಠಪತಿ, ಸುಧಾಕರ ಚೌವ್ಹಾಣ, ಚನ್ನು ಕತ್ತಿ ಮಾತನಾಡಿ, ಭೀಕರ ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದಕ್ಕೆ ಭಾರತದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ಉತ್ತರದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ದ್ವೇಷ ಹೊಗೆಯಾಡುತ್ತಿದೆ. ಇಂತಹ ಬಿಗುವಿನ ವಾತಾವರಣದಲ್ಲಿ ಉಭಯ ದೇಶಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುವುದು ಅಷ್ಟು ಸುಲಭದ ಮಾತಲ್ಲ. ಈ ಬಾರಿ ಟಿ-೨೦ ಏಷ್ಯಾ ಕಪ್ನಲ್ಲಿ ಪಂದ್ಯಾವಳಿಗಿಂತಲೂ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳ ಕುರಿತು ಹೆಚ್ಚು ಚರ್ಚೆಯಾಗುತ್ತಿದೆ. ಪೆಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆ ಬಳಿಕ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆ ನಂತರ, ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಸಂಪೂರ್ಣವಾಗಿ ನೆಲಕಚ್ಚಿವೆ. ಇದರ ಮಧ್ಯೆ ಜಗತ್ತು ಈ ಒಂದು ಆಟವನ್ನು ನೋಡಲು ಕಾತುಕರಾಗಿ ನಿಂತಿದೆ. ಭಾರತ ಬಲಿಷ್ಠ ತಂಡವಾಗಿ ಹೊರ ಹೊಮ್ಮುತ್ತಿರುವುದು ನಮಗೆ ದೊಡ್ಡ ಹೆಮ್ಮೆ.
ಇದೇ ಸಂದರ್ಭದಲ್ಲಿ ಪ್ರಾಧ್ಯಾಪಕ ದಾನಯ್ಯ ಮಠಪತಿ ಮಾತನಾಡಿ, ಇದು ೧೭ನೇ ಏಷ್ಯಾ ಟಿ೨೦ ಆಗಿದ್ದು, ಇದರಲ್ಲಿ ಭಾರತ ಒಟ್ಟು ೮ಬಾರಿ ವಿಜಯಶಾಲಿಯಾಗಿದೆ. ಐಸಿಸಿ ನಡೆಸುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತ್ರ ಭಾರತ ಪಾಕಿಸ್ತಾನ ಎದುರಾಳಿಗಳಾಗಿ ಭಾಗವಹಿಸುತ್ತವೆ. ಭಾರತ ಕ್ರಿಕೆಟ್ ತಂಡದ ಬಲಿಷ್ಠ ನಾಯಕರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ಟಿ-೨೦ಯಿಂದ ನಿವೃತ್ತಿಯಾಗಿರುವುದು ಬೇಸರದ ಸಂಗತಿಯಾಗಿದ್ದರೂ ಜಗತ್ತು ಅವರಿಲ್ಲದ ಭಾರತ ತಂಡ ಹೇಗಾಡುತ್ತದೆ ಎಂದು ನೋಡಲು ಅತ್ಯಂತ ಕಾತುರದಿಂದ ವೀಕ್ಷಿಸಲಿದ್ದಾರೆ. ಮುಂಬರುವ ೨೦೨೮ರಲ್ಲಿ ಇಟಲಿಯಲ್ಲಿ ಜರುಗುತ್ತಿರುವ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಈ ಬಾರಿ ಟಿ-೨೦ ಮ್ಯಾಚ್ಗಳು ಜರುಗಲಿವೆ. ಹೀಗಾಗಿ ಈ ಪಂದ್ಯಾವಳಿಯು ನಿರ್ಣಾಯಕತ್ವವನ್ನು ಹೊಂದಿದೆ. ಅದೇನೇ ಇದ್ದರೂ ಈ ಬಾರಿಯೂ ಕೂಡ ಖಂಡಿತವಾಗಿಯೂ ಭಾರತ ಗೆಲ್ಲಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.
ಈ ವೇಳೆ ಕಾಲೇಜಿನ ಆವರಣದಲ್ಲಿ ಜಿತೇಗಾ ಜಿತೇಗಾ ಇಂಡಿಯಾ ಜಿತೇಗಾ, ಗೆದ್ದು ಬಾ ಇಂಡಿಯಾ, ಭಾರತ್ ಮಾತಾ ಕೀ ಜೈ, ಇಂಡಿಯಾ ಇಂಡಿಯಾ ನಮ್ಮ ಇಂಡಿಯಾ ಎಂಬ ಕೂಗುಗಳು ಕೇಳಿ ಬಂದವು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಿ, ಭಾರತ ಕ್ರಿಕೆಟ್ ತಂಡ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠತೆಯ ತಂಡವಾಗಿ ಹೊರಹೊಮ್ಮುತ್ತಿದೆ. ನಮ್ಮ ವೈರಿ ರಾಷ್ಟçವಾದ ಪಾಕಿಸ್ತಾನ ದೇಶವನ್ನು ಹೆಡೆಮುರಿ ಕಟ್ಟುವಲ್ಲಿ ಭಾರತ ಸನ್ನದ್ಧವಾಗಿದೆ. ಭಾರತದ ಕ್ರಿಕೆಟ್ ತಂಡದಲ್ಲಿ ಸೃಜನಾತ್ಮಕ ಆಟಗಾರರಿದ್ದಾರೆ ಅವರು ಖಂಡಿತವಾಗಿ ಭಾರತವನ್ನು ಗೆದ್ದೇ ಗೆಲ್ಲುಸುತ್ತಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಾಚಾರ್ಯ ಜೆ.ಸಿ.ನಂದಿಕೋಲ ಉಪನ್ಯಾಸಕರಾದ ಪ್ರಶಾಂಶ ಕುಲಕರ್ಣಿ, ಎ.ಆರ್. ಹಾಲಕೇರಿ, ಮಾಹಾಂತೇಶ ನೂಲನವರ, ಸಂತೋಷ ಬಿರಾದಾರ, ಭಾಗ್ಯಜ್ಯೋತಿ ದಸ್ಮಾ, ನಾಜೀಯಾ ಮುಲ್ಲಾ, ಶ್ವೇತಾ ರೇಬಿನಾಳ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.