ವಿಜಯಪುರ ಜಿಲ್ಲೆಯ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗಾರರು ನೂರಾರುನಮಸ್ಯೆಗಳ ಮಧ್ಯ ಸಾವು ನೋವಿನ ಮಧ್ಯ ಹೋರಾಟ ಮಾಡುತ್ತಾ ಜೀವನ ಸಾಗಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ದ್ರಾಕ್ಷಿ ಬೆಳೆಗಾರರ ಸಮಸ್ಯೆ ಕುರಿತು ಆಗ್ರಹ ಮಾಡಿ ಮನವಿ ಸಲ್ಲಿಸಲಾಯಿತು.
ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಮಾತನಾಡುತ್ತಾ, ಇಡೀ ಕರ್ನಾಟಕದಲ್ಲಿ ಅಂದಾಜು ೧ ಲಕ್ಷ ಎಕರೆ ದ್ರಾಕ್ಷಿ ಬೆಳೆಯಲಾಗುತ್ತದೆ, ವಿಜಯಪುರದಲ್ಲಿ ೭೦% ದ್ರಾಕ್ಷಿ ಬೆಳೆಯುತ್ತಿದ್ದು, ಇದನ್ನು ನಂಬಿ ೧೫-೨೦ ಸಾವಿರ ರೈತ ಕುಟುಂಬಗಳು ಹಾಗೂ ಸಾವಿರಾರು ರೈತ ಕಾರ್ಮಿಕರು ಬದುಕು ಸಾಗಿಸುತ್ತಿದ್ದಾರೆ, ಆದರೆ ದಲ್ಲಾಳಿಗಳ ಹಾವಳಿ, ಮಾರುಕಟ್ಟೆಯ ಕೊರತೆ, ಕೋಲ್ಡ್ ಸ್ಟೋರೆಜ್ ಕೊರತೆ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಖರ್ಚು, ಕೂಲಿಯವರ ಪಗಾರ, ಔಷಧ, ಗೊಬ್ಬರ ಇನ್ನಿತರ ಖರ್ಚು ಹತ್ತು ಪಟ್ಟು ಹೆಚ್ಚಾಗಿದೆ, ಇವುಗಳಿಂದ ಗೆದ್ದು ಬಂದ್ದರೆ, ರೋಗ ಹಾಗೂ ಸರಿಯಾದ ಬೆಲೆ ಸಿಗದೇ ಬೀದಿಗೆ ಬಿದ್ದು ಅನೇಕ ರೈತರು ರೈತ ಆತ್ಮಹತ್ಯೆ ಮಾಡಿಕೊಂಡಿರುವುದು ಇದೆ. ಕಳೆದ ತಿಂಗಳು ಸುರಿದಿರುವ ಅತೀ ಹೆಚ್ಚಿನ ಮಳೆಯಿಂದಾಗಿ ಅನೇಕ ರೈತರ ಜಮೀನಿನಲ್ಲಿ ನೀರು ನಿಂತು ನಷ್ಟ ಅನುಭವಿಸುವಂತಾಗಿದೆ, ಇದನ್ನು ಮನಗಂಡು ವಿಮೆ ಹಾಗೂ ಸರಕಾರದಿಂದ ಪರಿಹಾರ ಕೊಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದರು.
ಈ ಕೆಳಗಿನ ದ್ರಾಕ್ಷಿ ಬೆಳೆಗಾರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಿಕೊಂಡರು.
೨೦೨೪-೨೫ ನೇ ಸಾಲಿನ ದ್ರಾಕ್ಷಿ ಬೆಳೆ ವಿಮೆ ಅವದಿ ಮುಗಿದರು ಇನ್ನುವರೆಗೂ ವಿಮೆ ಹಣ ಜಮಾ ಮಾಡಿಲ್ಲ, ಬೇಗ ವಿಮೆ ಹಣ ಜಮಾ ಮಾಡಬೇಕು,
ದ್ರಾಕ್ಷಿಗೆ ಸಂಬಂಧಿಸಿದ ವಿಮೆ ಕಂಪನಿಯ ಕಚೇರಿಯನ್ನು ವಿಜಯಪುರದಲ್ಲಿ ತೆರೆಯಬೇಕು
೨೦೨೫-೨೬ ನೇ ಸಾಲಿನ ವಾತಾವರಣದಲ್ಲಿ ದ್ರಾಕ್ಷಿ ಬೆಳೆಯಲು ಯೋಗ್ಯ ವಾತಾವರಣ ಇಲ್ಲ, ಕೂಡಲೇ ಜಂಟಿ ಸಮೀಕ್ಷೆ ಕೈಕೊಂಡು ಪ್ರಕೃತಿ ವಿಕೋಪದಿಂದ ಆಗಿರುವ ನಷ್ಟಕ್ಕೆ ಪರಿಹಾರವನ್ನು ನ್ಯಾಯಯುತವಾಗಿ ನೀಡಬೇಕು.
ದ್ರಾಕ್ಷಿಗೆ ಹವಾಮಾನ ಆದಾರಿತ ವಿಮೆ ನೀಡುವುದಾಗಿ ಹೇಳಿ ಪ್ರಭಾವಿಗಳ ಆದೇಶದಂತೆ ಇದರಲ್ಲಿ ಕೂಡಾ ಅಕ್ರಮ ಕಂಡು ಬರುತ್ತಿದ್ದು, ಇದನ್ನು ಸರಿ ಪಡಿಸಿ ನ್ಯಾಯಯುತವಾಗಿ ನಷ್ಟ ಪರಿಹಾರ ನೀಡಬೇಕು.
ಅವಶ್ಯಕತೆಗೆ ಅನುಗುಣವಾಗಿ ಕೋಲ್ಡ್ಸ್ಟೋರೆಜ್ ಸ್ಥಾಪನೆ ಮಾಡಬೇಕು, ಸರ್ಕಾರಿ ಕೋಲ್ಡ್ಸ್ಟೋರೆಜ್ ಭೂಮಿ ಪೂಜೆಯಾಗಿ ಬಹುದಿನಗಳೆ ಕಳೆದಿವೆ, ಅದು ಪ್ರಾರಂಭವಾಗಬೇಕು.
ಜಿಲ್ಲೆಯಲ್ಲಿ ನೆನೆಗುದಿಗೆ ಬಿದ್ದ ವೈನ್ ಪಾರ್ಕ ಕೂಡಲೇ ಪ್ರಾರಂಭವಾಗಬೇಕು
ಎ.ಪಿ.ಎಮ್.ಸಿ ಅಡಿಯಲ್ಲಿ ದ್ರಾಕ್ಷಿ (ಮನುಕು) ಖರೀಧಿ ಪುನಃ ಆರಂಭವಾಗಬೇಕು, ಇದರಿಂದ ಮಹಾರಾಷ್ಟçಕ್ಕೆ ಹೋಗುವ ಖರ್ಚು ಉಳಿದು ರೈತರಿಗೆ ಹೆಚ್ಚಿನ ಲಾಭ ಸಿಗಲಿದೆ,
ದ್ರಾಕ್ಷಿ ಇಲ್ಲದ ಜಮಿನಿಗೆ ವಿಮೆ ತುಂಬಿ ದ್ರಾಕ್ಷಿ ಎಂದು ರೈತರಿಂದ ಹಣ ಪಡೆದು ಬ್ಯಾನರ ಇಟ್ಟು ಜಿ.ಪಿ.ಎಸ್ ಮಾಡುತ್ತಿದ್ದು, ಇದರಿಂದ ನೈಜ ದ್ರಾಕ್ಷಿ ಬೆಳೆಗಾರರಿಗೆ ಪೆಟ್ಟು ಬಿಳಲಿದೆ, ಇಂತವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
ಜಿಲ್ಲೆಯಲ್ಲಿ ನಕಲಿ ಬೀಜ , ಗೊಬ್ಬರ ಹಾಗೂ ಕೀಟನಾಶಕಗಳ ಹಾವಳಿ ಹೆಚ್ಚಾಗಿದ್ದು ಇದನ್ನು ಕೂಡಲೇ ನಿಲ್ಲಿಸಬೇಕು.
ಈ ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಈ ವೇಳೆ ಮುಖಂಡರಾದ ಜಕರಾಯ ಪೂಜಾರಿ, ಕನ್ನಪ್ಪ ಕೊಂಡಿ, ಈಶ್ವರ ಯಳಜೇರಿ, ಮಲ್ಲಪ್ಪ ಕೋಮಡಿ, ಕುಮಾರ ಚಡಚಣ, ಸದಾಶಿವ ಘಡಾಲಟ್ಟಿ, ರಾಮಚಂದ್ರ ಅಗಸರ, ಬಸಪ್ಪ ಮಾಳಿ, ಶಿವು ಪಟ್ಟಣಶೆಟ್ಟಿ, ಅಶೋಕ ಶಿರೋಳ, ಭೀಮು ತೋನಶೆಟ್ಟಿ, ಭೀಮು ಬಡಕುರಿ, ಅಮರ ಪೂಜರಿ, ಭೀರು ಗಡದಿ, ಬಾಲಿಸಾಬ ಮುಲ್ಲಾ, ಶೀವು ಮಾಳಿ ಸೇರಿದಂತೆ ಇತರರು ಇದ್ದರು.