ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣನೆ
ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಸಾಮರಸ್ಯದ ಸಮಾಜ ಕಟ್ಟುವುದಕ್ಕಾಗಿ ಅಣ್ಣ ಬಸವಣ್ಣ, ಶಿರಡಿ ಸಾಯಿಬಾಬಾ, ಸಿದ್ಧೇಶ್ವರ ಶ್ರೀಗಳಂಥ ದೈವಿ ಪುರುಷರು ಕಾಲ ಕಾಲಕ್ಕೆ ಸಮಾಜೊದ್ದಾರಕ್ಕೆ ಜನ್ಮ ತಳೆಯುತ್ತಾರೆ. ಅಂಥ ವಿಶಿಷ್ಟ ಸಾಧನೆಯ ಸಂತ, ಮಹಾತ್ಮರಲ್ಲಿ ಚನ್ನಬಸವೇಶ್ವರ ಮಹಾರಾಜರು ಕೂಡ ಪ್ರಮುಖರು. ಜಾಗತಿಕ ಆಧ್ಯಾತ್ಮಿಕ ಪರಂಪರೆಗೆ ಭಾರತೀಯ ಧಾರ್ಮಿಕ ಪರಂಪರೆ ವಿಶಿಷ್ಠವಾಗಿದೆ. ಇಂಚಗೇರಿ ಮಠದ ವಿಶಿಷ್ಟ ಪರಂಪರೆ ಭಾರತೀಯ ಆಧ್ಯಾತ್ಮಿಕ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ನೀಡಿದೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಬಣ್ಣಿಸಿದರು.
ತಾಲೂಕಿನ ಕೂಡಗಿ ಗ್ರಾಮದ ವಿಠ್ಠಲ ಮಂದಿರದಲ್ಲಿ ಹಮ್ಮಿಕೊಂಡಿದ್ದ ಇಂಚಗೇರಿ ಆಧ್ಯಾತ್ಮ ಸಂಪ್ರದ್ಧಾಯದ ಚನ್ನಬಸವೇಶ್ವರ ಮಹಾರಾಜರ 39ನೇ ಪುಣ್ಯಸ್ಮರಣೋತ್ಸವ ಸಮಾರಂಭದಲ್ಲಿ ದೇವರ ದರ್ಶನ ಪಡೆದು, ಸನ್ಮಾನಗೊಂಡು ಮಾತನಾಡಿದ ಸಚಿವರು, 1400 ಕೋಟಿ ಜನಸಂಖ್ಯೆಯಲ್ಲಿ ಪದೇ ಪದೇ ಕೆಲವೇ ಕೆಲವರನ್ನು ಮಾತ್ರ ನೆನೆಯುತ್ತೇವೆ ಎಂದರೆ ಸಮಾಜಕ್ಕೆ ಅಂಥ ಸ್ಮರಣೀಯ ಕೊಡುಗೆ ನೀಡಿದ್ದಾರೆ ಎಂದರ್ಥ ಎಂದು ವಿಶ್ಲೇಷಿಸಿದರು.
ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರ ರಾಜ್ಯದಲ್ಲೂ ಇಂಚಗೇರಿ ಆಧ್ಯಾತ್ಮಿಕ ಪರಂಪರೆಯ ಅನುಸರಿಸುವ ಲಕ್ಷಾಂತರ ಭಕ್ತರಿದ್ದಾರೆ. ಜಾತ್ಯಾತೀತ ಸಮಾಜ ಕಟ್ಟುವ ಜೊತೆಗೆ ಹೆಣ್ಣು-ಗಂಡು, ಬಡವ- ಶ್ರೀಮಂತ ಎಂಬ ತಾರತಮ್ಯಕ್ಕೆ ಇಲ್ಲದ ಸುಭಿಕ್ಷ ಸಮಾಜ ನಿರ್ಮಿಸುವುದಕ್ಕಾಗಿ ಸಾಮರಸ್ಯದ ಸಂದೇಶ ಸಾರಿದ ಇಂಚಗೇರಿ ಆಧ್ಯಾತ್ಮಿಕ ಸಂಪ್ರದಾಯ ವಿಶಿಷ್ಠವಾಗಿ ಗುರುತಿಸಿಕೊಂಡಿದೆ ಎಂದರು.
ಚನ್ನಬಸವೇಶ್ವರ ಮಠದ ಅಧ್ಯಕ್ಷರಾದ ಮಲ್ಲಿಕಾರ್ಜುನ ಮಿಣಜಗಿ ಅಧ್ಯಕ್ಷತೆ ವಹಿಸಿದ್ದರು. ಈರಣ್ಣ ಶಿರೂರು, ಸಿ.ಎಸ್. ಜುಗತಿ, ಎಸ್.ಜಿ. ಜುಗತಿ, ಖಾಸೀಂಸಾಬ ಮಾಶ್ಯಾಳ, ಸಿ.ಎಸ್. ಮಮದಾಪೂರ, ರೇವಣಸಿದ್ಧಪ್ಪ ಕುಂಬಾರ, ರಾಜು ರಾಠೋಡ, ಎಂ.ಎಸ್. ಪಾಟೀಲ ಸೇರಿದಂತೆ ಇತರರು ವೇದಿಕೆ ಮೇಲಿದ್ದರು.