ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಿಕ್ಷಕ ಮನುಷ್ಯನ ಸೃಷ್ಟಿಕರ್ತ. ಅವನು ಮಾನವಕುಲ, ವರ್ತಮಾನ ಮತ್ತು ಭವಿಷ್ಯದ ಸಂಪೂರ್ಣ ನಾಗರಿಕತೆಯ ಅಡಿಪಾಯ. ಶಿಕ್ಷಕರ ಸಕ್ರಿಯ ಸಹಕಾರದಿಂದ ರಾಷ್ಟ್ರದ ಪುನರ್ನಿರ್ಮಾಣ ಸಾಧ್ಯ ಎಂದು ಮಡಿಕೇಶ್ವರದ ಸರಕಾರಿ ಪ್ರೌಢ ಶಾಲೆಯ ಇಂಗ್ಲೀಷ್ ಶಿಕ್ಷಕ ಬಸವರಾಜ ಹಂಚಲಿ ಹೇಳಿದರು.
ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದ ಶ್ರೀ ಮಲ್ಲಿಕಾರ್ಜುನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಶಿಕ್ಷಕರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡ “ಶಿಕ್ಷಕರು ರಾಷ್ಟ್ರ ನಿರ್ಮಾಪಕರು”-ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಉತ್ತಮ ನೈತಿಕ ಮೌಲ್ಯ, ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಲಿಸುತ್ತಾ,
ಸೃಜನಾತ್ಮಕ ಚಿಂತನೆ ಮತ್ತು ನವೀನತೆಗೆ ಪ್ರೋತ್ಸಾಹಿಸುತ್ತಾರೆ. ಇದು ದೇಶದ ಆವಿಷ್ಕಾರ ಮತ್ತು ಪ್ರಗತಿಗೆ ಅತ್ಯಗತ್ಯ ಎಂದು ಹೇಳಿದರು.
ಮುಖ್ಯ ಅತಿಥಿ ಶಿಕ್ಷಕ ಸಂತೋಷ ಬಂಡೆ ಮಾತನಾಡಿ, ಶಿಕ್ಷಕರು ರಾಷ್ಟ್ರ ನಿರ್ಮಾಪಕರು. ಅವರು ರಾಷ್ಟ್ರದ ಭವಿಷ್ಯವನ್ನು ರೂಪಿಸುವ ಜ್ಞಾನ, ದೇಶಭಕ್ತಿ,
ಮೌಲ್ಯ, ಸಾಮಾಜಿಕ ಗುಣಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸಿ, ಅವರಲ್ಲಿ ಸಂವಿಧಾನದ ಮೌಲ್ಯಗಳನ್ನು ಉತ್ತೇಜಿಸುವ ಮೂಲಕ ದೇಶದ ಏಕತೆ-ಪ್ರಗತಿಗೆ ಕೊಡುಗೆ ನೀಡುತ್ತಾರೆ ಎಂದು ಹೇಳಿದರು.
ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಅಧ್ಯಕ್ಷ ಶಂಕರ ಹುಣಶ್ಯಾಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ,
ಸಚೀನ ಅವಟಿ, ನವೀನ ಬಂಡೆನ್ನವರ, ಸಿದ್ದು ರತ್ನಾಕರ, ರಾಜಶೇಖರ ಶಿರಶ್ಯಾಡ, ಅಲ್ಲಾಭಕ್ಷ ಇನಾಮದಾರ, ಜಯಶ್ರೀ ಬಂಗಾರಿ, ಲಕ್ಷ್ಮೀ ಮಸೂತಿ, ಸ್ನೇಹಾ ಹಕ್ಕಿ, ಜಯಶ್ರೀ ಬಿರಾದಾರ, ಶೃತಿ ಪೂಜಾರಿ, ರೇಣುಕಾ ಭಜಂತ್ರಿ, ಸರೋಜಿನಿ ಕಟ್ಟಿಮನಿ ಸೇರಿದಂತೆ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪತ್ರಿಕಾ ವಿತರಕ ಬಸವರಾಜ ಸಾರವಾಡ ಅವರನ್ನು ಸನ್ಮಾನಿಸಲಾಯಿತು.