ಟಾಸ್ಕಫೋರ್ಸ ಸಮಿತಿ ಸಭೆಯಲ್ಲಿ
ಶಾಸಕ ಯಶವಂತರಾಯಗೌಡ ಪಾಟೀಲ ಸೂಚನೆ
ಇಂಡಿ: ತಾಲೂಕಿನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರುವ ದಿನಗಳಲ್ಲಿ ಮತ್ತು ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗಬಹುದು. ಹೀಗಾಗಿ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತೆ ವಹಿಸಲು ಶಾಸಕ ಯಶವಂತರಾಯಗೌಡ ಪಾಟೀಲರು ಸೂಚಿಸಿದರು.
ಪಟ್ಟಣದ ಮಿನಿ ವಿಧಾನಸೌಧ ಸಭಾಭವನದಲ್ಲಿ ಕುಡಿಯುವ ನೀರಿನ ಕುರಿತು ಟಾಸ್ಕಫೋರ್ಸ ಸಮಿತಿಯಿಂದ ನಡೆದ ಗ್ರಾ.ಪಂ ಅಧ್ಯಕ್ಷ ಮತ್ತು ಪಿಡಿಒ ಇವರ ಸಭೆಯಲ್ಲಿ ಮಾತನಾಡಿದರು.
೩೮ ಗ್ರಾ.ಪಂ ಗಳಲ್ಲಿ ಜಲಮೂಲ ಇಲ್ಲದ ಕಡೆ ಹೆಚ್ಚು ಕುಡಿಯುವ ನೀರಿನ ಸಮಸ್ಯೆ ಇರುವ ಮತ್ತು ಕಡಿಮೆ ನೀರಿನ ಸಮಸ್ಯೆ ಇರುವ ಗ್ರಾಮಗಳನ್ನು ವಿಂಗಡಿಸಿ ಅದಕ್ಕೆ ತಕ್ಕಂತೆ ಕ್ರಮವಹಿಸಬೇಕಾಗಿದೆ. ಅಡವಿ ವಸ್ತಿಯವರಿಗೆ ಮತ್ತು ತಾಂಡಾಗಳಿಗೆ ತೊಂದರೆಯಾಗದಂತೆ ಮುನ್ನಚರಿಕೆ ವಹಿಸಲು ಕೇಳಿಕೊಂಡರು.
ಲಚ್ಯಾಣ ಬಾಲಕಿಯರ ವಸತಿ ನಿಲಯಕ್ಕೆ ಬಿಸಿ ನೀರಿನ ವ್ಯವಸ್ಥೆ ಮತ್ತು ಝಳಕಿಯ ಪ್ರಥಮ ದರ್ಜೆ, ಪಾಲಿಟೆಕ್ನಿಕ್ ಮತ್ತು ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ತೊಂದರೆ ಇದ್ದು ತಮ್ಮ ಅನುದಾನದಲ್ಲಿ ತಲಾ ಐದು ಲಕ್ಷ ಅನುದಾನ ನೀಡುತ್ತಿದ್ದು, ಕೆಲಸ ಬೇಗ ಮುಗಿಸಲು ಸೂಚಿಸಿದರು.
ವೇದಿಕೆಯ ಕಂದಾಯ ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಸೀಲ್ದಾರ ಬಿ.ಎಸ್.ಕಡಕಬಾವಿ, ಟಾಸ್ಕ ಫೋರ್ಸ ನೋಡಲ್ ಅಧಿಕಾರಿ ವಿಜಯಕುಮಾರ ಮೆಕ್ಕಳಕಿ, ಇಒ ಬಾಬು ರಾಠೋಡ, ಡಿಎಸ್ಪಿ ಜಗದೀಶ ಇದ್ದರು.
ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಹಂಗರಗಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಎಇಇ ಎಸ್.ಆರ್.ರುದ್ರವಾಡಿ, ಹೆಸ್ಕಾ ಎಇಇ ಎಸ್.ಆರ್.ಮೆಂಡೆಹಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಏವೂರ, ದಯಾನಂದ ಮಠ, ಕೆರೂರ ಸೇರಿದಂತೆ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು, ಗ್ರಾ.ಪಂ ಅಧ್ಯಕ್ಷರು,ಪಿಡಿಒಗಳು ಮತ್ತಿತರಿದ್ದರು.