ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಪುಸ್ತಕಗಳು ಮಾನವನ ಆತ್ಮೀಯ ಗೆಳೆಯನಂತಿರಬೇಕು. ಓದುವ ಹವ್ಯಾಸ ಸನ್ಮಾರ್ಗದ ದಾರಿಯತ್ತ ಕರೆದುಕೊಂಡು ಹೋಗುತ್ತವೆ. ಇದರಿಂದ ಮಾನಸಿಕ ಆರೋಗ್ಯ ವೃದ್ಧಿಗೊಳ್ಳುತ್ತದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯ ಡಾ.ಕುಶಾಲ ಬರಗೂರ ಹೇಳಿದರು.
ಅವರು ಶನಿವಾರ ಜಿಲ್ಲೆಯ ಸಿಂದಗಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಮ್ಮಿಕೊಂಡಿದ್ದ “ನನ್ನ ಮೆಚ್ಚಿನ ಪುಸ್ತಕ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನಾಡಿನಾದ್ಯಂತ ಪುಸ್ತಕ ಪ್ರಾಧಿಕಾರವು ವಿದ್ಯಾರ್ಥಿಗಳಲ್ಲಿ ಪುಸ್ತಕ ಅಭಿರುಚಿಯನ್ನು ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ ಎಂದರು.
ಉದ್ಘಾಟನೆಯನ್ನು ನೆರವೇರಿಸಿ ಕಲಬುರಗಿಯ ವಿಮರ್ಶಕ ಡಾ.ಶ್ರೀಶೈಲ ನಾಗರಾಳ ಮಾತನಾಡಿ ತಾಯಿ ಭಾಷೆ ಕನ್ನಡವಾಗಿರುವುದರಿಂದ ಕನ್ನಡವನ್ನೇ ಹೆಚ್ಚಾಗಿ ಬಳಸಿಕೊಳ್ಳಲು ಕರೆ ನೀಡಿದರು. ಯುವಕರು ಪುಸ್ತಕವನ್ನು ಪ್ರೀತಿಸುವುದರಿಂದ ಅವರಲ್ಲಿ ಕೀರ್ತಿ, ಸಂಪತ್ತು ಎಲ್ಲವೂ ದೊರೆಯುತ್ತದೆ, ವಿಧ್ಯಾರ್ಥಿಗಳಲ್ಲಿ ಇಂತಹ ಆಸಕ್ತಿ ಶಾಲಾ ಕಾಲೇಜುಗಳು ಬೆಳೆಸಬೇಕಿದೆ ಎಂದರು.
ಯುವ ಸಾಹಿತಿ ದೇವು ಮಾಕೊಂಡ ವಿದ್ಯಾರ್ಥಿಗಳಲ್ಲಿ ಜ್ಞಾನಾಬಿರುಚಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಆಲಮೇಲದ ಪ್ರಕಾಶಕ ಡಾ. ರಮೇಶ ಕತ್ತಿ ಅತಿಥಿಗಳಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎಸ್.ಎಸ್. ಹಳೇಮನಿ ವಹಿಕೊಂಡು ಮಾತನಾಡಿದರು.
ಡಾ. ಹಣಮಂತ ಹಾರವಾಳ ಸ್ವಾಗತಿಸಿದರು. ಡಾ. ರಾಜಶೇಖರ ಧ. ಬೆನಕನಹಳ್ಳಿ ವಂದಿಸಿದರು. ಪ್ರೊ. ರಾಜೇಸಾಬ ಇವರು ಕಾರ್ಯಕ್ರಮವನ್ನು ನಿರೂಪಿಸಿದರು