ಪಪೂ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತ | ಮಾಜಿ ಎಂಎಲ್ಸಿ ಅರುಣ ಶಹಾಪೂರ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಖಾಲಿ ಇರುವ ವಿಷಯ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೆ, ಅತಿಥಿ ಶಿಕ್ಷಕರ ಮೇಲೆಯೇ ಶಿಕ್ಷಣ ವ್ಯವಸ್ಥೆಯನ್ನು ನಡೆಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಆತಂಕಕಾರಿ ಬೆಳವಣಿಗೆಯಾಗಿದೆ. ಜೊತೆಗೆ ಇದೀಗ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೋಧನೆಗೆ ನಿಯೋಜಿಸುವ ಕ್ರಮವೂ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ ಎಂದು ಮಾಜಿ ವಿಪ ಸದಸ್ಯ ಅರುಣ ಶಹಾಪೂರ ಹರಿಹಾಯ್ದರು.
ಸಿಂದಗಿ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ನಿರ್ಧಾರವನ್ನು ಮರುಪರಿಶೀಲಿಸಿ, ಅವರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಬೇಕಾಗಿದೆ. ರಾಜ್ಯ ಸರ್ಕಾರವು ಸಂಪೂರ್ಣ ಸಚಿವ ಸಂಪುಟವನ್ನು ರಚಿಸಿ, ಶಿಕ್ಷಣ ಇಲಾಖೆಗೆ ಪೂರ್ಣಾವಧಿಯ ಸಚಿವರನ್ನು ನೇಮಿಸಬೇಕು. ಶಿಕ್ಷಣದಂತಹ ಮಹತ್ವದ ಇಲಾಖೆಗೆ ಇನ್ನೂ ಸಚಿವರ ನೇಮಕವಾಗದೇ ಇರುವುದು ಅತ್ಯಂತ ದುರದೃಷ್ಟಕರ ಸಂಗತಿ. ಈ ವಿಷಯದಲ್ಲಿ ಹೋರಾಟ ನಡೆಸುತ್ತಿರುವವರ ನ್ಯಾಯಯುತ ಬೇಡಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಸರ್ಕಾರ ಕೂಡಲೇ ಶಿಕ್ಷಣ ಕ್ಷೇತ್ರದ ಸಮಸ್ಯೆಗಳತ್ತ ಗಮನಹರಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕು.
ಕೇಂದ್ರ ಸರ್ಕಾರವು ಲೋಕಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಅನುಷ್ಠಾನದ ಕುರಿತು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳು ಮಾಧ್ಯಮಗಳಲ್ಲಿ ಕಾಲಕಾಲಕ್ಕೆ ಪ್ರಕಟವಾಗುತ್ತಿವೆ. ಈ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು ಹಾಗೂ ಸಾರ್ವಜನಿಕರು ಒಗ್ಗೂಡಿ ನಮ್ಮ ಜಿಲ್ಲೆಯ ಹಿತಾಸಕ್ತಿಗಾಗಿ ಧ್ವನಿ ಎತ್ತುವ ಅಗತ್ಯವಿದೆ. ಪುನರ್ವಿಂಗಡಣೆ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಗೆ ಎರಡು ಲೋಕಸಭಾ ಕ್ಷೇತ್ರಗಳನ್ನು ಮಂಜೂರು ಮಾಡಬೇಕೆಂದು ನಮ್ಮ ಜಿಲ್ಲೆಯ ಜನತೆಯ ಆಗ್ರಹ. ಎರಡು ಕ್ಷೇತ್ರಗಳಾಗಿ ಪುನರ್ವಿಂಗಡಣೆಯಾದಲ್ಲಿ ಒಂದನ್ನು ಸಿಂದಗಿ ಲೋಕಸಭಾ ಕ್ಷೇತ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸುವ ದಿಸೆಯಲ್ಲಿ ಸ್ಥಳೀಯ ಶಾಸಕರು, ಎಲ್ಲಾ ಜನಪ್ರತಿನಿಧಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಒಗ್ಗೂಡಿ ಜಿಲ್ಲೆಯ ಸಂಸದರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಮುಂದೆ ಈ ಬೇಡಿಕೆಯನ್ನು ಬಲವಾಗಿ ಮಂಡಿಸಬೇಕು ಎಂದು ಆಗ್ರಹೊಸೋಣ ಎಂದರು.
ರಾಜ್ಯದಲ್ಲಿ ಜಿಲ್ಲೆಗಳ ಪುನರ್ವಿಂಗಡಣೆ ಮಾಡುವ ಇಚ್ಛಾಶಕ್ತಿ ಆಗಿನ ಮತ್ತು ಈಗಿನ ಸರ್ಕಾರಕ್ಕೆ ಇಲ್ಲ. ಒಂದು ವೇಳೆ ಭವಿಷ್ಯದಲ್ಲಿ ಪುನರ್ವಿಂಗಡಣೆ ಮಾಡುವ ಇಚ್ಛಾಶಕ್ತಿ ಉಂಟಾದರೆ ಸಿಂದಗಿಯನ್ನೇ ಪ್ರತ್ಯೇಕ ಜಿಲ್ಲೆಯಾಗಿ ಘೋಷಿಸಬೇಕು ಎಂಬುದು ಈ ಭಾಗದ ಜನರ ಬಹುಕಾಲದ ನ್ಯಾಯಸಮ್ಮತ ಬೇಡಿಕೆಯಾಗಿದೆ. ಆಡಳಿತಾತ್ಮಕ ಅನುಕೂಲತೆ, ಸಮಗ್ರ ಅಭಿವೃದ್ಧಿ ಹಾಗೂ ಜನಸೇವೆಯ ದೃಷ್ಟಿಯಿಂದ ಸಿಂದಗಿಗೆ ಜಿಲ್ಲೆಯ ಸ್ಥಾನಮಾನ ನೀಡುವುದು ಅತ್ಯಗತ್ಯವಾಗಿದೆ. ಭವಿಷ್ಯದಲ್ಲಿ ಜಿಲ್ಲೆ ಸ್ಥಾನಮಾನ ನೀಡಬೇಕು. ಇದು ಕೇವಲ ಒಂದು ಪ್ರದೇಶದ ಬೇಡಿಕೆಯಲ್ಲ. ಉತ್ತರ ಕರ್ನಾಟಕದ ಸಮತೋಲನ ಅಭಿವೃದ್ಧಿಗೆ ಪೂರಕವಾದ ಜನರ ಹಕ್ಕೊತ್ತಾಯವಾಗಿದೆ ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಸಾಯಬಣ್ಣ ದೇವರಮನಿ, ಸಿದ್ರಾಮ ಆನಗೊಂಡ, ಶಿವಾನಂದ ರೋಡಗಿ ಸೇರಿದಂತೆ ಇತರರು ಇದ್ದರು.

