ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ವಿಕಲಚೇತನರು ಸಮಾಜದಲ್ಲಿ ಮುಕ್ತವಾಗಿ ಸಂಚರಿಸಲು ಅವರಿಗೆ ತ್ರಿಚಕ್ರ ವಾಹನ ನೀಡುತ್ತಿರುವುದು ಶ್ಲಾಘನೀಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಸಿಂದಗಿ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತನ್ ೨೦೨೫-೨೬ನೆಯ ಸಾಲಿನ ತಾಪಂ ಅನಿರ್ಬಂಧಿತ ಅನುದಾನದಡಿಯಲ್ಲಿ ಅರ್ಹ ೬ ವಿಕಲಚೇತನ ಪಲಾನುಭವಿಗಳಿಗೆ ಇಂಧನ ಜಾಲಿತ ತ್ರಿಕಚ್ರ ವಾಹನವನ್ನು ವಿತರಿಸಿ ಮಾತನಾಡಿದ ಅವರು, ವಿಕಲಚೇತನರು ಸಮಾಜದಲ್ಲಿ ಸಮಾನವಾಗಿ ಪ್ರಗತಿ ಸಾಧಿಸಲು ಅವರಿಗೆ ಸರಕಾರದಿಂದ ಸಿಗಬೇಕಾದ ಸೌಕರ್ಯಗಳನ್ನು ಅತ್ಯಂತ ಪ್ರಮಾಣಿಕವಾಗಿ ಅರ್ಹರಿಗೆ ತಲುಪುವಂತಾಗಬೇಕು. ಜೊತೆಗೆ ತ್ವರಿತ ಗತಿಯಲ್ಲಿ ಒದಗಿಸಬೇಕು. ಸಮಾಜದಲ್ಲಿ ವಿಕಲಚೇತನರು ಸ್ವಾವಲಂಬಿಗಳಾಗಿ ಬದುಕಬೇಕು. ಉದ್ಯೋಗಕ್ಕಾಗಿ ಮತ್ತು ಮತ್ತಿತರ ವ್ಯವಸ್ಥೆಗಳಿಗೆ ಬೇರೆಯವರನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಇದೆ. ಆ ಕಾರಣಕ್ಕೆ ಅವರ ಬದುಕಿಗೆ ಚೈತನ್ಯ ನೀಡಲು ಮತ್ತು ಉಳಿದವರಿಗಿಂತ ನಾವೇನೂ ಕಡಿಮೆ ಇಲ್ಲ ಎಂದು ಸಾಧಿಸಿ ತೋರಿಸಲು ಸರಕಾರ ಸಹಕಾರ ನೀಡುತ್ತದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆಯಬೇಕು ಎಂದರು.
ಈ ವೇಳೆ ತಾಪಂ ಇಒ ರಾಮು ಅಗ್ನಿ, ಅಕ್ಷರ ದಾಸೋಹ ಅಧಿಕಾರಿ ಅರವಿಂದ ಡೋಣೂರ, ಜೋಗುರ ಮೋಟರ್ಸ್ ಮಾಲೀಕರಾದ ರಮೇಶ ಜೋಗುರ, ಉಮೇಶ ಜೋಗುರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ ಕೋಳಾರಿ, ಸಂತೋಷ ಸಾಲಿ, ಸುನಂದಾ ಯಂಪುರೆ, ಮಹಾನಂದ ಬಮ್ಮಣ್ಣಿ, ಮುತ್ತು ಸಾತಿಹಾಳ, ಶಾಂತು ರಾಣಾಗೋಳ, ಮೋಶಿನ್ ಬೀಳಗಿ, ಶಿವಾನಂದ ಹಡಪದ, ಐಇಸಿ ನರೇಗಾ ಸಂಯೋಜಕ ಭೀಮರಾಯ ಚೌಧರಿ, ರಮೇಶ ನಡುವಿನಕೇರಿ, ಪ್ರಕಾಶ ಹೊಸಮನಿ ಸೇರಿದಂತೆ ಫಲಾನುಭವಿಗಳು, ಇಲಾಖೆ ಸಿಬ್ಬಂದಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಇತರರು ಇದ್ದರು.

