ಏಕ ಕಾಲಕ್ಕೆ ಹದಿನೈದು ಚೌಕಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆ
ಉದಯರಶ್ಮಿ ದಿನಪತ್ರಿಕೆ
ವರದಿ: ಗುರು ಆರ್ ಹಿರೇಮಠ
ಆಲಮೇಲ: ಪಟ್ಟಣದಲ್ಲಿ ರವಿವಾರ ರಾತ್ರಿ ಗಣೇಶ ವಿಸರ್ಜನೆಯು ಅದ್ದೂರಿಯಾಗಿ ನಡೆಯಿತು.
ಕಳೆದ ನಾಲ್ಕು ದಶಕಗಳಿಂದ ಭಾವೈಕ್ಯತೆಯ ನೆಲೆಯಲ್ಲಿ ಇಲ್ಲಿಯ ಗಣೇಶ ಉತ್ಸವಕ್ಕೆ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದೆ.
ಕಾರ್ಯಕ್ರಮದ ಉದ್ಘಾಟನೆಗೆ ಒಂದು ವೇದಿಕೆಯನ್ನು ಪಟ್ಪಣ ಪಂಚಾಯತ ಹತ್ತಿರ ಮತ್ತು ಇನ್ನೊಂದು ವೇದಿಕೆಯನ್ನು ಅಂಬಿಗರ ಚೌಡಯ್ಯ ಸರ್ಕಲ್ ನಲ್ಲಿ ಎರಡು ಕಡೆ ಪ್ರಧಾನ ವೇದಿಕೆಗಳನ್ನು ನಿರ್ಮಿಸಲಾಗಿತ್ತು.
ಪಟ್ಟಣದಲ್ಲಿ ಹದಿನೈದು ಚೌಕಿನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳು ಏಕ ಕಾಲಕ್ಕೆ ವಿಸರ್ಜನೆ ಮೆರವಣಿಗೆಯಲ್ಲಿ ಸಾಗಿಬಂದವು. ಒಂದರ ಹಿಂದೆ ಒಂದು ಸಾಲು ಸಾಲು ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗುತ್ತಿದ್ದರೆ ರಸ್ತೆಯ ಎರಡೂ ಕಡೆಗಳಲ್ಲಿ ಜನ ಜಾತ್ರೆ ತುಂಬಿಕೊಂಡಿತು ಪೌರಾಣಿಕ ದೃಶ್ಯಗಳು ಮಹಾಭಾರತ ಮತ್ತು ರಾಮಾಯಣಕ್ಕೆ ಸಂಬಂಧಿಸಿದ ರೂಪಕಗಳು, ಪ್ರಸ್ತುತ ಘಟನೆಗಳಿಗೆ ಸಂಬಂಧಿಸಿದಂತೆ ಚಿತ್ರಗಳು ನಿರ್ಮಾಣ ಮಾಡಲಾಗಿತ್ತು.
ರೇವಣಸಿದ್ದೇಶ್ವರ ಚೌಕದಿಂದ ಆರ್ ಸಿ ಬಿ ತಂಡ ಕಪ್ ಕ್ರೀಡಾಪಟು ವಿರಾಟ್ ಕೊಹ್ಲಿ ಮತ್ತು ರಜತ್ ಪಾಟೀದಾರ ಅವರ ಸ್ತಬ್ಧಚಿತ್ರ ಬಹು ಆಕರ್ಷಣೀಯವಾಗಿತ್ತು, ಶ್ರೀ ಕಾಮನ ಕಟ್ಟೆ ಚೌಕನಿಂದ ಸೋಲಾಪೂರ ಸಿದ್ದರಾಮೇಶ್ವರ, ವೀರಭದ್ರೇಶ್ವರ ಚೌಕನಿಂದ ಗುಡ್ಡಗಾಡಿನಿಂದ ಅವತರಿಸಿದ ಕಾಮಕ್ಕ ದೇವಿ, ಶ್ರೀ ಸಾವಳಗಿ ಶಿವಲಿಂಗೇಶ್ವರ ಚೌಕನಿಂದ ಗಾಣದೇವತೆ, ಶ್ರೀ ಗಣೇಶ ನಗರ ಚೌಕನಿಂದ ಹಣಮಂತ ಲಿಂಗ ಪೂಜೆ ಮಾಡುವುದು. ಬಸವನಗರದಿಂದ ಕೃಷ್ಣ ವಾಸುದೇವ, ಭವಾನಿ ಕಟ್ಟಿಯಿಂದ ಉಗ್ರ ನರಸಿಂಹ ಅವತಾರ, ಹನುಮಂತ ಚೌಕ ಮತ್ತು ಗಾಂಧಿ ಚೌಕ ನವರು ದೇವಿ ಅವತಾರ, ಲಕ್ಷ್ಮೀ ಚೌಕಿನಿಂದ ನವದುರ್ಗೆಯ ಒಂದನೇ ಅವತಾರ(ಶೈಲಪುತ್ರಿ) ಅವತಾರ ಸೇರಿದಂತೆ ವಿವಿಧ ಸ್ತಬ್ಧ ಚಿತ್ರಗಳು ಜನರನ್ನು ಆಕರ್ಷಿಸಿದವು.
ಕಿವಿ ಗಡಚಿಕ್ಕುವ ಧ್ವನಿ ವರ್ಧಕ, ಎಲ್ಲೆ ಮೀರಿದ ಜನರ ಉತ್ಸಾಹ, ಪಡ್ಡೆ ಹುಡುಗರ ಕೇಕೆ ಕುಣಿತ, ವಿವಿಧ ಶಾಲಾ ಮಕ್ಕಳಿಂದ ಮನಮೋಹಕ ಕಲಾ ವೈಭವದರ್ಶನ ಜಾಂಜ್ ಪಥಕ್, ಹಲಗೆ ಮೇಳ, ಕೊಂಬು ವಾದನ, ಕೋಲಾಟ ಮೊದಲಾದ ಜಾನಪದ ತಂಡಗಳು ಮೆರವಣಿಗೆಗೆ ಸಾಥ್ ನೀಡಿದವು.
ಹರಿದು ಬಂದ ಜನಸಾಗರ: ಈ ಸಂಭ್ರಮ ಕಣ್ತುಂಬಿಕೊಳ್ಳಲು ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಸಿಂದಗಿ, ಇಂಡಿ, ಅಫಜಲಪೂರ, ವಿಜಯಪುರ, ಕಲಬುರ್ಗಿ, ಯಾದಗಿರ ಅಕ್ಕಲಕೋಟ, ದುದನಿ ನೆರೆಯ ಮಹಾರಾಷ್ಟ್ರ ಅಂಧ್ರದಿಂದಲೂ ಜನರು
ಆಗಮಿಸಿದ್ದರಿಂದ ಪಟ್ಟಣದಲ್ಲಿ ಜನ ಜಾತ್ರೆ ಸೇರಿದಂತಾಗಿತ್ತು.

ಭಾವೈಕ್ಯತೆ ಸಂದೇಶ
ಪಟ್ಟಣದಲ್ಲಿ ಕಳೆದ ಹದಿನೈದು ವರ್ಷಗಳಿಂದ ಮುಸ್ಲಿಂ ಮುಖಂಡ ಮೈಬೂಬ ಮಸಳಿ ಸಾರಥ್ಯದಲ್ಲಿ ಗಣೇಶೋತ್ಸವ ಭಾವೈಕ್ಯತೆಯೊಂದಿಗೆ ಆಚರಿಸಲಾಗುತ್ತಿದೆ. ಗಜಾನನ ಮಹಾ ಮಂಡಳಿಗೆ ಇವರು ಪ್ರತಿ ವರ್ಷ ಅವಿರೋಧ ಆಯ್ಕೆಯಾಗುತ್ತಿರುವದು ವಿಶೇಷ.
ದಾಸೋಹ ವ್ಯವಸ್ಥೆ
ಕಾಳೇಶ ಪತ್ತಾರ, ಅಪ್ಪುಗೌಡ ಪಾಟೀಲ, ಭೀಮು ಬಂಡಗಾರ ಸೇರಿದಂತೆ ಹಲವರು ಪಟ್ಟಣದ ಎರಡು ಕಡೆಗಳಲ್ಲಿ ಉತ್ಸವ ನೋಡಲು ಆಗಮಿಸಿದ ಸಾರ್ವಜನಿಕರಿಗೆ ದಾಸೋಹ ವ್ಯವಸ್ಥೆಯೂ
ಸ್ಥಳೀಯರು ಮಾಡಿದ್ದರು.
ಪೊಲೀಸ್ ಸೂಕ್ತ ಬಂದೊಬಸ್ತ್
ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂದೊಬಸ್ತ ಮಾಡಲಾಗಿತ್ತು ಜಿಲ್ಲ ಪೊಲೀಸ ವರಿಷ್ಠಾಧಿಕಾರಿಗಳು ಇಂಡಿ ಡಿವೈಎಸ್ಪಿ.ಸಿಂದಗಿ ಸಿಪಿಐ,ಆಲಮೇಲ ಪಿಎಸ್ಐ ಮತ್ತು ಡಿ ಆರ್ ಎ ಪೊಲೀಸರಿಂದ ಸೂಕ್ತ ಬಂದೊಬಸ್ತ ವ್ಯವಸ್ಥೆ ಮಾಡಲಾಗಿತ್ತು.