ಉದಯರಶ್ಮಿ ದಿನಪತ್ರಿಕೆ
ಚಡಚಣ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರ ಹಾಗೂ ಷಡ್ಯಂತ್ರದ ವಿರುದ್ಧ ‘ಧರ್ಮದ ಉಳಿವಿಗಾಗಿ ಧರ್ಮ ಯುದ್ಧ’ ಎಂಬ ಘೊಷಣೆಯೊಂದಿಗೆ ನೂರಾರು ಬಿಜೆಪಿ ಕಾರ್ಯಕರ್ತರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸ್ಥಳೀಯ ಬಸವೇಶ್ವರ ವೃತ್ತದಿಂದ ಆರಂಭಗೊಂಡ ರ್ಯಾಲಿ ತಹಶೀಲ್ದಾರ ಕಚೇರಿ ತಲುಪಿತು. ರ್ಯಾಲಿಯುದ್ದಕ್ಕೂ ಸರ್ಕಾರದ ಹಿಂದೂ ವಿರೋಧ ನೀತಿಯನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಅಪಪ್ರಚಾರ ಮಾಡಿದವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರಿಗೆ ಮನವಿ ಸಲ್ಲಿಸಲಾಯಿತು.
ಯುವ ನಾಯಕ ಸಂಜೀವ ಐಹೊಳ್ಳಿ, ಚಡಚಣ ಮಂಡಲ ಅಧ್ಯಕ್ಷ ಕಾಂತುಗೌಡ ಪಾಟೀಲ, ನಾಗಠಾಣ ಮಂಡಲ ಅಧ್ಯಕ್ಷ ಸಿದಗೊಂಡ ಬಿರಾದಾರ, ತಾ.ಪಂ. ಮಾಜಿ ಸದಸ್ಯ ರಾಜು ಝಳಕಿ, ಮುಖಂಡ ಚಿದಾನಂದ ಛಲವಾದಿ ಮತ್ತಿತರರು ಮಾತನಾಡಿ, ಧರ್ಮಸ್ಥಳವು ಸತ್ಯಧರ್ಮದ ನಿಲಯವಾದ ಧರ್ಮಸ್ಥಳ ಕ್ಷೇತ್ರವು ಪರಮಪಾವನ ಸ್ಥಳವಾಗಿದೆ. ಜಾತಿ, ಧರ್ಮಗಳ ಬೇಧಭಾವ ಮರೆತು ಡಾ| ವಿರೇಂದ್ರ ಹೆಗ್ಗಡೆಯವರು ಲಕ್ಷ್ಯಾಂತರ ಬಡವರ ಬದುಕಿಗೆ ಬೆಳಕನ್ನು ನೀಡಿದ್ದಾರೆ ಮತ್ತು ಎಷ್ಟೋ ಬಡ ಕುಟುಂಬಗಳ ಹೆಣ್ಣು ಮಕ್ಕಳಿಗೆ ಆರ್ಥಿಕ ಸಹಾಯ ನೀಡಿ ಅವರ ಬದುಕನ್ನು ಹಸನು ಮಾಡುವುದರ ಜೊತೆಗೆ ಮಹಿಳಾ ಸಬಲೀಕರಣ ಮಾಡುತ್ತಿದ್ದಾರೆ. ಇಂತಹ ಧರ್ಮಸ್ಥಳ ಕ್ಷೇತ್ರದ ವಿರುದ್ಧ ನಡೆಯುತ್ತಿರುವ ದುಷ್ಟಶಕ್ತಿಗಳ ಅಪಪ್ರಚಾರ ಭಕ್ತರ ಮನಸ್ಸಿಗೆ ನೋವುಂಟುಮಾಡಿದೆ. ಧರ್ಮ ರಕ್ಷಣೆಗೆ ನಾವೆಲ್ಲರೂ ಒಂದಾಗಿ ಹೋರಾಡೊಣ ಎಂದು ಹೇಳಿದ ಅವರು, ರಾಜ್ಯ ಸರ್ಕಾರ ಯಾರದೊ ಮಾತು ಕೇಳಿ ಈ ರೀತಿ ಕೊಟ್ಯಾಂತರ ರೂ. ಖರ್ಚು ಮಾಡಿ ತನಿಖೆ ನಡೆಸುವುದು ಸರಿಯಲ್ಲ.ಈ ದುಡ್ಡು ಜನರ ದುಡ್ಡು. ಆದರೆ ಎಲ್ಲಿಯೂ ಒಂದೇ ಒಂದು ಮೂಳೆ ಪತ್ತೆ ಆಗಿಲ್ಲ ಎಂದು ಆಕ್ರೋಷ ವ್ಯಕ್ತಪಡಿಸಿದ ಅವರು, ರಾಜ್ಯದ ಅಷ್ಟೆ ಅಲ್ಲ ದೇಶದ ಕೋಟ್ಯಾಂತರ ಭಕ್ತರ ಆಧ್ಯಾತ್ಮಿಕ ಕೇಂದ್ರವಾಗಿರುವ ಧರ್ಮಸ್ಥಳದ ಬಗ್ಗೆ ಕೆಲವರು ದುರುದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿದ್ದಾರೆ. ಪೊಲೀಸ್ ತನಿಖೆ ನಂತರ ಅವರ ನಿಜಸ್ವರೂಪ ಬಹಿರಂಗವಾಗಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಉಮೇಶ ಕೊಳಕೂರ, ಬಸವರಾಜ ಬೈಚಬಾಳ, ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೋತ್ರೆ, ಮುಂಖಂಡರಾದ ರಾಮ ಅವಟಿ,ಸೇರಿದಂತೆ ಎಲ್ಲ ಬಿಜೆಪಿ ಕಾರ್ಯಕರ್ತರು,ಮಹಿಳಾ ಸ್ವಸಹಾಯ ಗುಂಪಿನ ಪದಾಧಿಕಾರಿಗಳಾದ ವಿಜಯಲಕ್ಷ್ಮಿ ಸೋಲಾಪೂರ,ಇಂತಾಜ ನದಾಫ, ಭಾಗ್ಯಶ್ರೀ ಸಿಂಧೆ,ಸೇರಿದಂತೆ ನೂರಾರು ಕಾರ್ಯಕರ್ತರು, ಭಕ್ತರು ಉಪಸ್ಥಿತರಿದ್ದರು.