ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸರ್ಕಾರಕ್ಕೆ ಸಾಲ ಕೊಡಬಲ್ಲ ರೈತ ಆದರೆ ಇಂದು ರೈತ ತನ್ನ ಗೊಬ್ಬರ ಪಡೆಯಲು ಹೋರಾಟ ಮಾಡಿ ಪಡೆಯುವ ದುಸ್ಥಿತಿ ಬಂದಿದೆ ಎಂದು ದಿಗಂಬರೇಶ್ವರ ಮಠದ ಶ್ರೀ ಕಲ್ಲಿನಾಥ ದೇವರು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ಕರವೇ ಕಾರ್ಯಕರ್ತರು ರೈತರಿಗೆ ಯೂರಿಯಾ ಗೊಬ್ಬರ ಲಭ್ಯತೆ ಹಾಗೂ ಸತತ ಸುರಿದ ಮಳೆಯಿಂದ ಹಾನಿಯಾದ ಬೆಳೆ ಪರಿಹಾರ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಪಟ್ಟಣದ ತಹಶೀಲ್ದಾರ ಕಚೇರಿ ಮುಂಭಾಗದಲ್ಲಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮುಖಂಡ ಟಿ.ಟಿ. ಹಗೇದಾಳ ಮಾತನಾಡಿ ರಾಜ್ಯದಲ್ಲಿ ನಮ್ಮ ತಾಲೂಕಿನಲ್ಲಿಯೇ ಅತಿ ಹೆಚ್ಚು ಭೂಮಿಯನ್ನು ಸರ್ಕಾರ ವಿವಿಧ ಯೋಜನೆಗಳಿಗೆ ಸ್ವಾಧೀನ ಪಡಿಸಿಕೊಂಡಿದ್ದು, ಮುಂದೆ ಯಾವುದೇ ಭೂಮಿಯನ್ನು ಸರ್ಕಾರ ಸ್ವಾಧೀನ ಪಡಿಸಿಕೊಳ್ಳಬಾರದು. ನಮ್ಮ ಮುಂದಿನ ಮಕ್ಕಳು, ಮೊಮ್ಮಕ್ಕಳಿಗೆ ಭೂಮಿ ಇಲ್ಲದಂತಾಗುತ್ತದೆ. ಜಿಲ್ಲಾಡಳಿತ ಅತೀ ಶೀಘ್ರದಲ್ಲಿ ಮಳೆಯಿಂದ ಹಾನಿಯಾದ ಬೆಳೆಗಳ ವರದಿಯನ್ನು ಪಡೆದು ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ರೈತ ಸಂಘ ತಾಲೂಕು ಘಟಕದ ಅಧ್ಯಕ್ಷ ಸೋಮು ಬಿರಾದಾರ ಮಾತನಾಡಿ ರೈತರಿಗೆ ಶೀಘ್ರ ಯೂರಿಯಾ ಗೊಬ್ಬರ ಒದಗಿಸಿಕೊಡುವುದು ಮತ್ತು ಬೆಳೆಹಾನಿ ಪರಿಹಾರಕ್ಕೆ ಆದೇಶ ಮಾಡುವುದು ಆಗಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರ ಜವಾಬ್ದಾರಿ. ತಾಲೂಕಿನ ರೈತರಿಗೆ ವಿತರಿಸಲು ಬಂದಂತಹ ಯೂರಿಯಾ ಗೊಬ್ಬರವನ್ನು ಹಾವೇರಿ ಜಿಲ್ಲೆಗೆ ಕಳುಹಿಸುವ ಮೂಲಕ ಈ ಭಾಗದ ರೈತರಿಗೆ ದ್ರೋಹವೆಸಗಲಾಗಿದೆ ಎಂದು ಆರೋಪಿಸಿದರು.
ವಿಜಯಪುರ ಎಸಿ ಗುರುನಾಥ ದಡ್ಡಿ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿ, ರೈತರಿಗೆ ಗೊಬ್ಬರ ಅಂಗಡಿಯವರು ಯೂರಿಯಾ ಗೊಬ್ಬರವನ್ನು ಸಕಾಲದಲ್ಲಿ ನೀಡಬೇಕು ನೀಡಿದೆ ಸಂಗ್ರಹಿಸಿದ್ದರೆ ಅಂತಹ ಅಂಗಡಿ ಲೈಸೆನ್ಸ್ ರದ್ದು ಮಾಡಲಾಗುತ್ತದೆ. ಈ ಭಾಗದ ರೈತರ ಬೆಳೆಗಳಿಗೆ ಬೆಳೆಹಾನಿ ಪರಿಹಾರ ಶೀಘ್ರದಲ್ಲೇ ವರದಿ ಪಡೆದು ಪರಿಹರಿಸುತ್ತೇವೆ ಎಂದು ಹೇಳಿದರು.
ಬಳೂತಿ ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣವಾದರು ಹಕ್ಕುಪತ್ರ ವಿತರಣೆ ಹಾಗೂ ಹಳ್ಳದ ಗೆಣ್ಣೂರ ಗ್ರಾಮದ ಸಾರ್ವಜನಿಕ ಸ್ಥಳಗಳ ಸಮಸ್ಯೆ ಎಲ್ಲವನ್ನೂ ಮಾಹಿತಿ ಪಡೆದು ತಮ್ಮ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಂಗಮೇಶ ಸಗರ, ಕರವೇ ತಾಲೂಕು ಅಧ್ಯಕ್ಷರಾದ ಮಹಾಂತೇಶ ಗಿಡ್ಡಪ್ಪಗೋಳ ಮತ್ತು ರವಿ ಗೊಳಸಂಗಿ, ಗ್ರಾಪಂ ಸದಸ್ಯ ಪ್ರದೀಪಗೌಡ ಪಾಟೀಲ ಹಾಗೂ ತಹಶೀಲ್ದಾರ ಎಸ್.ಎಂ. ಮ್ಯಾಗೇರಿ, ಪಿಎಸ್ಐ ಎಮ್ ಬಿ ಬಿರಾದಾರ, ಉಪ ಕೃಷಿ ನಿರ್ದೇಶಕ ಶರಣಗೌಡ, ಇಒ ಸುನೀಲ ಮದ್ದಿನ ಮಾತನಾಡಿದರು.
ಈ ಸಂದರ್ಭದಲ್ಲಿ ಶಶಿಕಾಂತ ಬಿರಾದಾರ, ಮುದಕಪ್ಪ ಚಲವಾದಿ, ಶ್ರೀಶೈಲ ಬೆಣ್ಣೂರ, ಸುರೇಶ ಗಿಡ್ಡಪ್ಪಗೋಳ, ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೋಳ, ಬಸವರಾಜ ನ್ಯಾಮಗೊಂಡ, ಗುಳಪ್ಪ ಗುಗ್ಗರಿ, ಸತ್ಯಪ್ಪ ಕುಳೊಳ್ಳಿ ತಾಲೂಕಿನ ಹಲವು ಗ್ರಾಮಗಳಿಂದ ಸೇರಿದ್ದ ರೈತರು, ರೈತ ಮಹಿಳೆಯರು ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಮೂತ್ರ ವಿಸರ್ಜನೆಗೆ ಪರದಾಡಿದ ರೈತರು
ಪಟ್ಟಣದ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದಿರುವುದರಿಂದ ದಿನ ಪೂರ್ತಿ ಧರಣಿ ನಡೆಸಿದ ರೈತರು ಮೂತ್ರ ವಿಸರ್ಜನೆ ಮಾಡಲು ಮುಳ್ಳು ಕಂಟಿಯನ್ನು ಆಶ್ರಯಿಸುವುದು ಸಾಮಾನ್ಯವಾಗಿತ್ತು.

