ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ನೃತ್ಯಕಲಾ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಮಹಿಳಾ ವಿವಿ ರಜಿಸ್ಟ್ರಾರ್ ಶಂಕರಗೌಡ ಸೋಮನಾಳ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜೀವನದಲ್ಲಿ ಗುರಿ ಮುಖ್ಯ, ನಿಗದಿಪಡಿಸಿಕೊಂಡ ಗುರಿಯೊಂದಿಗೆ ತಮ್ಮ ಕನಸನ್ನು ನನಸಾಗಿಸಿಕೊಳ್ಳಲು ಪರಿಶ್ರಮ ಅಗತ್ಯ ಎಂದು ಮಹಿಳಾ ವಿಶ್ವ ವಿದ್ಯಾಲಯದ ರಜಿಸ್ಟ್ರಾರ್ ಶಂಕರಗೌಡ ಸೋಮನಾಳ ಅವರು ಹೇಳಿದರು.
ಸೋಮವಾರ ಪರ್ಲ್ಸ್ ಕ್ಯಾಂಪಸ್ನಲ್ಲಿರುವ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ಪರಿಶಿಷ್ಟ ಪಂಗಡ ಉಪಯೋಜನೆಯಡಿ ಶಾಲಾ ವಿದ್ಯಾರ್ಥಿನಿಯರಿಗೆ ಆರು ತಿಂಗಳ ಕಾಲ ನೃತ್ಯಕಲಾ ತರಬೇತಿ ಶಿಬಿರದ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿ, ಎಲ್ಲರಲ್ಲೂ ಅಗಾಧವಾದ ಶಕ್ತಿ ಇದೆ. ಸತತ ಅಧ್ಯಯನಶೀಲತೆ ಬೆಳೆಸಿಕೊಳ್ಳಬೇಕು. ಮಹಿಳೆ ಇಂದು ಎಲ್ಲ ಕ್ಷೇತ್ರಗಳಲ್ಲೂ ಮುಂದಿದ್ದಾರೆ. ಈ ವಸತಿ ನಿಲಯದಿಂದ ಪ್ರತಿಭೆಗಳು ಹೊರಹೊಮ್ಮಿ ಕೀರ್ತಿ ತರುವಂತಾಗಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅನೇಕ ಸಮಸ್ಯೆಗಳನ್ನು ನೀಗಿಸಿಕೊಂಡು ಸಾಧನೆ ಮಾಡಬೇಕು. ದಿನ ಪತ್ರಿಕೆಗಳನ್ನು ಪ್ರತಿನಿತ್ಯ ಓದುವುದನ್ನು ರೂಢಿಸಿಕೊಳ್ಳಬೇಕು ಜೀವನದಲ್ಲಿ ವಿವಿಧ ಉನ್ನತ ಹುದ್ದೆ ಹೊಂದಿ ಈ ವಸತಿ ನಿಲಯದ ಜಿಲ್ಲೆಯ ಕೀರ್ತಿ ತರುವಂತಾಗಲಿ ಎಂದು ಆಶಿಸಿದರು.
ಕ್ರೀಡಾಧಿಕಾರಿ ರಾಜಶೇಖರ್ ದೈವಾಡಿ, ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಅನೇಕ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದ್ದು, ವಿದ್ಯಾರ್ಥಿ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು.ನೃತ್ಯ ರೂಪಕ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಉಪ ಆಯುಕ್ತ ಮಹಾವೀರ ಬೋರಣ್ಣವರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಜೆ ಇಂಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ, ವಾರ್ತಾಧಿಕಾರಿ ಅಮರೇಶ ದೊಡಮನಿ, ವಸತಿ ನಿಲಯದ ಮೇಲ್ವಿಚಾಕರಾದ ಶ್ರೀಮತಿ ಎಸ್.ಎನ್. ಅಗಸಿಮುಂದಿನ, ತರಬೇತಿ ಗುರುಗಳಾದ ರೋಹಿಣಿ ತಳವಾರ, ಸುಭಾಶ್ಚಂದ್ರ ಕನ್ನೂರ ಇದ್ದರು.