ಅಭಿಯಾನ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ ಸೂಚನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿನ ಬಡಾವಣೆ, ರಸ್ತೆ ಬದಿ, ಉದ್ಯಾನವನ, ಖಾಲಿ ನಿವೇಶನಗಳಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸಾರ್ವಜನಿಕರ ಸಹಕಾರದೊಂದಿಗೆ ದೂರು ಸ್ವೀಕರಿಸಿದ ೨೪ ಗಂಟೆಯೊಳಗೆ ವಿಲೇವಾರಿ ಮಾಡಲು ಕಸ ಕಂಡರೆ ಫೋಟೋ ಕಳುಹಿಸಿ ಎಂಬ ಅಭಿಯಾನವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದ್ದು, ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ವಿಶೇಷ ಆಸಕ್ತಿ ವಹಿಸಿ ಈ ಅಭಿಯಾನದ ಮಾರ್ಗಸೂಚಿಗಳಂತೆ ಕಾರ್ಯನಿರ್ವಹಿಸಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ಆನಂದ ಕೆ.ಅವರು ಸೂಚನೆ ನೀಡಿದ್ದಾರೆ.
ಕಸ ಕಂಡರೆ ಫೋಟೋ ಕಳುಹಿಸಿ ಅಭಿಯಾನ ಯಶಸ್ವಿಗೊಳಿಸಲು ಮಾರ್ಗಸೂಚಿಗಳನ್ನು ನಿಗದಿಪಡಿಸಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಕಂಡಾಗ ತಕ್ಷಣದ ಫೋಟೋ ಮೂಲಕ ದೂರು ಸಲ್ಲಿಸುವ ವ್ಯವಸ್ಥೆ ಕಲ್ಪಿಸುವುದು, ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛ ನಗರ ನಿರ್ಮಾಣ, ದೂರು ಬಂದ ೨೪ ಗಂಟೆಯೊಳಗೆ ಪರಿಹಾರ ಒದಗಿಸುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದು, ದೂರುಗಳಿಂದ ಬಂದ ಡೇಟಾವನ್ನು ವಿಶ್ಲೇಷಿಸಿ ಬ್ಲಾಕ್ಸ್ಪಾಟ್ ಏರಿಯಾ ಗುರುತಿಸಿ ಭವಿಷ್ಯದ ಕ್ಲೀನಿಂಗ್ ಪ್ಲಾನ್ನಲ್ಲಿ ಸೇರಿಸುವ ಅಭಿಯಾನದ ಉದ್ದೇಶವಾಗಿದೆ.
ದೂರು ಸಲ್ಲಿಕೆ ವಿಧಾನ
ಸಾರ್ವಜನಿಕರು ಫೋಟೋ ತೆಗೆದು ವ್ಯಾಟ್ಸ್ಪ್ ಸಂಖ್ಯೆಗೆ ಕಳುಹಿಸುವ ಸಂದರ್ಭದಲ್ಲಿ ಸ್ಥಳದ ಹೆಸರು ಅಥವಾ ಲ್ಯಾಂಡ್ ಮಾರ್ಕ್, ಕಸದ ಪ್ರಕಾರ (ಹೊರಬಿದ್ದ ತ್ಯಾಜ್ಯ, ಪ್ಲಾಸ್ಟಿಕ್, ಮಲಮೂತ್ರ, ನಿರ್ಮಾಣ ತ್ಯಾಜ್ಯ ಇತ್ಯಾದಿ) ನಮೂದಿಸಬೇಕು.
ನಿರ್ವಹಣಾ ವ್ಯವಸ್ಥೆ
ದೂರು ಬಂದ ತಕ್ಷಣ ಸ್ವಯಂ ಪ್ರೇರಿತ ಸಂದೇಶ ಸ್ವೀಕರಿಸಲಾಗಿದೆ, ೨೪ ಗಂಟೆಯಲ್ಲಿ ಕ್ರಮ ಕೈಗೊಳ್ಳಲಾಗುವುದು, ಎಂಬ ಸಂದೇಶ ಸಾಗಿಸಲು ಬಾಟ್ ಅಥವಾ ಡಾಟಾ ಆಪರೇಟರ ಸಿಬ್ಬಂದಿಯನ್ನು ನಿಯೋಜನೆ ಮಾಡಬೇಕು. ತಂಡದ ನಿಯೋಜಿತ ಡಾಟಾ ಆಪರೇಟರ್ ಪ್ರತಿಯೊಂದು ಫೋಟೋ ದೂರುಗೆ ಟಿಕೆಟ್ ಐಡಿ ನೀಡಬೇಕು. ಒಂದು ಪ್ರತ್ಯೇಕ ರಜಿಸ್ಟರ್ದಲ್ಲಿ ನಿರ್ವಹಣೆ ಮಾಡಬೇಕು. ದೂರು ವಿಲೇಯಾದ ನಂತರ ಮೊದಲು ಹಾಗೂ ನಂತರದ ಫೊಟೋಗಳನ್ನು ಪ್ರತ್ಯೇಕವಾಗಿ ದಾಖಲು ಮಾಡಬೇಕು.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ನಗರಾಭಿವೃದ್ದಿ ಕೋಶದಲ್ಲಿ ಡಿಯುಡಿಸಿ ಎಸ್ಡಬ್ಲೂಎಂ ಎಕ್ಸಪರ್ಟ್ & ಮಹಾನಗರ ಪಾಲಿಕೆಯ ಎಸ್ಡಬ್ಲೂಎಂ ಎಕ್ಸ್ಪರ್ಟ್ಗಳು ಈ ಅಭಿಯಾನದ ನಿಗಾ ವಹಿಸುವ ಅಧಿಕಾರಿಗಳಾಗಿದ್ದು, ಪ್ರತಿ ನಗರ ಸ್ಥಳೀಯ ಸಂಸ್ಥೆಯ ಪರಿಶೀಲಿಸುವ ಮತ್ತು ವರದಿಯನ್ನು ಪಡೆಯುವ ಜವಾಬ್ದಾರಿ ಹೊಂದಿರುತ್ತಾರೆ.
ಉತ್ತಮ ಕಾರ್ಯ ಕೈಗೊಂಡ ತಂಡ ಹಾಗೂ ನಗರ ಸ್ಥಳೀಯ ಸಂಸ್ಥೆಗೆ ಪುರಸ್ಕಾರ : ಈ ಅಭಿಯಾನದಲ್ಲಿ ಮೊದಲ ಮೂರು ತಿಂಗಳಲ್ಲಿ ಉತ್ತಮ ಸಾಧನೆ ಮಾಡಿದ ತಂಡ ಹಾಗೂ ನಗರ ಸ್ಥಳೀಯ ಸಂಸ್ಥೆಯ ಮುಖ್ಯಸ್ಥರಿಗೆ ಜಿಲ್ಲಾಡಳಿತದಿಮದ ಪುರಸ್ಕಾರ ಮಾಡಲಾಗುವುದು. ಸರಿಯಾದ ಮತ್ತು ಹೆಚ್ಚು ದೂರು ಕಳುಹಿಸಿದ ನಾಗರಿಕರಿಗೆ ಕ್ಲೀನ್ ಸಿಟಿ ಚಾಂಪಿಯನ್ ಪ್ರಶಸ್ತಿ ಪತ್ರವನ್ನು ನಗರ ಸ್ಥಳೀಯ ಸಂಸ್ಥೆಯಿಂದ ನೀಡಿ ವೆಬ್ಸೈಟ್ದಲ್ಲಿ ಪ್ರಕಟಿಸಲಾಗುತ್ತದೆ.
ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ತಮ್ಮ ವ್ಯಾಪ್ತಿಯಲ್ಲಿ ಈ ಅಭಿಯಾನ ಯಶಸ್ವಿಗೊಳಿಸಲು ನುರಿತ ಹಾಗೂ ಜವಾಬ್ದಾರಿಯುತ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಸ್ಪಂದನಾ ತಂಡೆ ರಚಿಸಿ, ತಂಡದ ಸಿಬ್ಬಂದಿಯಿಂದ ದೈನಂದಿನ ಕಚೇರಿ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಮಾರ್ಗಸೂಚಿ ಉಲ್ಲಂಘಿಸಿದ್ದಲ್ಲಿ ಕರ್ನಾಟಕ ಸೇವಾ ನಿಯಮಗಳು ೨೦೨೧ರ ರಿತ್ಯ ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ಬಗ್ಗೆ ಶಿಸ್ತು ಕ್ರಮ ವಹಿಸಲಾಗುವುದು. ಇಂತಹ ಕಠಿಣ ಕ್ರಮಕ್ಕೆ ಅವಕಾಶ ನೀಡದೆ ಮಾರ್ಗಸೂಚಿಯಂತೆ ಕಾರ್ಯನಿರ್ವಹಿಸಿ ಅಭಿಯಾನ ಯಶಸ್ವಿಗೊಳಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.