ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಗ್ರಾಹಕಸ್ನೇಹಿ ಆಗುವ ಉದ್ದೇಶ ಹೊಂದಿದೆ. ಜೊತೆಗೆ ಭದ್ರತೆಯ ದೃಷ್ಟಿಯಿಂದಾಗಿ ಆಧುನಿಕ ಸೌಲಭ್ಯಗಳನ್ನು ನೀಡಲು ಶಾಖಾ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಾನ ಮಾಡುತ್ತಿದೆ ಎಂದು ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಉಪಾಧ್ಯಕ್ಷರಾದ ರಾಜಶೇಖರ ಬಿ. ಗುಡದಿನ್ನಿ ತಿಳಿಸಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಬ್ಯಾಂಕಿನ ಶಾಖೆಯ ನೂತನ ಸ್ವಂತ ಕಟ್ಟಡವನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ಬ್ಯಾಂಕ್ ತನ್ನ ಗ್ರಾಹಕರಿಗೆ ತನ್ನ ಸೇವೆಯನ್ನು ಇನ್ನೂ ಗುಣಮಟ್ಟ ಹಾಗೂ ತ್ವರಿತಗತಿಯಲ್ಲಿ ನೀಡಲು ಬದ್ಧವಾಗಿದೆ. ಇದಕ್ಕಾಗಿ ಸ್ವಂತ ಕಟ್ಟಡ ನಿರ್ಮಿಸಿ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ವಿವರಿಸಿದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ರೈತರು ಹಾಗೂ ರೈತೇತರ ಗ್ರಾಹಕರಿಗೆ ಹತ್ತು ಹಲವು ಯೋಜನೆಗಳನ್ನು ರೂಪಿಸಿದ್ದು, ಗ್ರಾಹಕರು ಈ ಸೌಲಭ್ಯಗಳ ಸದ್ಬಳಕೆ ಮಾಡಿಕೊಂಡು ಆರ್ಥಿಕ ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.
ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಎಸ್.ಎ.ಢವಳಗಿ ಮಾತನಾಡಿ, ನಮ್ಮ ಬ್ಯಾಂಕ್ ಸದಾ ಗ್ರಾಹಕರ ಹಿತವನ್ನೇ ಬಯಸುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸದಾ ಮುಂದಿರುವ ನಮ್ಮ ಬ್ಯಾಂಕ್ ಇದೀಗ, ಸ್ವಂತ ಕಟ್ಟಡ ನಿರ್ಮಾಣದೊಂದಿಗೆ ಇನ್ನೂ ಪರಿಣಾಮಕಾರಿ ಸೇವೆ ನೀಡಲು ಮುಂದಾಗಿದೆ ಎಂದರು.
ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಜಿ.ಬಿ.ನಿಡೋಣಿ, ಚಂದ್ರಶೇಖರ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಸುರೇಶಗೌಡ ಪಾಟೀಲ, ಕಲ್ಲನಗೌಡ ಬ. ಪಾಟೀಲ, ಅರವಿಂದ ಪೂಜಾರಿ, ಬ್ಯಾಂಕಿನ್ ಅಭಿವೃದ್ಧಿ ಅಧಿಕಾರಿಗಳಾದ ಎಂ.ಜಿ.ಪಾಟೀಲ, ಸಹಕಾರಿ ಸಂಘಗಳ ವಿಶ್ರಾಂತ ಅಪರ ನಿಬಂಧಕರಾದ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರಾದ ಎಸ್.ಡಿ.ಪಾಟೀಲ, ಜೆ.ಬಿ.ಪಾಟೀಲ, ಎಸ್.ಬಿ.ಪಾಟೀಲ, ಎಂ.ಜಿ.ಬಿರಾದಾರ, ನೋಡಲ್ ಅಧಿಕಾರಿಗಳಾದ ಎಸ್.ಎನ್.ಪಾಟೀಲ ಸೇರಿದಂತೆ ಬ್ಯಾಂಕ್ ಸಂಯೋಜಿತ ಸಹಕಾರಿ ಸಂಘಗಳ ಅಧ್ಯಕ್ಷರು, ಸಿಇಓಗಳು, ಸಿಬ್ಬಂದಿ ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು.
ಶಾಖಾ ವ್ಯವಸ್ಥಾಪಕರಾದ ಶ್ರೀಮತಿ ಸಿ.ಎಂ.ಶೆಟಗಾರ ಸ್ವಾಗತಿಸಿದರು.