ಎಕ್ಸಲಂಟ್ ವಿಜ್ಞಾನ ಪ.ಪೂ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ ಆಚರಣೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನೀನು ಏನಾದರು ಆಗಿರು, ಆದರೆ ದೇಶ ಸೇವೆ ಎನ್ನುವ ಮಾತು ಬಂದಾಗ ನೀನೊಬ್ಬ ಭಾರತೀಯ ಎನ್ನುವುದನ್ನು ಮಾತ್ರ ಮರೆಯದಿರು ಎಂದು ರಾಜಭವನದ ನಿವೃತ್ತ ಜಂಟೀ ಕಮಿಷನರ್ ಅಣ್ಣಾಸಾಹೇಬ ಬಡಿಗೇರ ಹೇಳಿದರು.
ನಗರದ ಎಕ್ಸಲಂಟ್ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ೭೯ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರೋತ್ಸವ ಸಂದೇಶ ನೀಡಿದ ಅವರು; ಇಂದು ಭಾರತ ಅಭಿವೃದ್ಧಿಯ ಪಥದಲ್ಲಿ ಹೆಜ್ಜೆ ಹಾಕುತ್ತಿದ್ದರೂ ಸಹ ಸುತ್ತಮುತ್ತಲೂ ಶತ್ರುಗಳು ನಮ್ಮನ್ನು ಹಿಂದೆ ಎಳೆಯುವುದಕ್ಕೆ ಹೊಂಚು ಹಾಕುತ್ತಿದ್ದಾರೆ. ಅವರನ್ನು ಹತ್ತಿಕ್ಕುವ ಕಾರ್ಯವನ್ನು ಭಾರತೀಯ ಸೈನ್ಯ ಮಾಡುತ್ತಿದ್ದು ಯುವಕರು ಈ ದೇಶದ ವಿಚಾರಕ್ಕೆ ಬಂದಾಗ ದೇಶವೇ ಮೊದಲು ಮಿಕ್ಕಿದ್ದೆಲ್ಲ ನಂತರ ಎನ್ನುವ ಮಟ್ಟದಲ್ಲಿ ದೇಶಭಕ್ತಿಯನ್ನು ಮೈಗೂಡಿಸಿಕೊಂಡು ನಡೆದಾಗ ಮಾತ್ರ ಜಗತ್ತಿನಲ್ಲಿಯೇ ಭಾರತ ಮತ್ತಷ್ಟು ಬಲಶಾಲಿ ರಾಷ್ಟ್ರವಾಗಿ ಹೊರ ಹೊಮ್ಮುತ್ತದೆ ಎಂದು ಹೇಳಿದರು.
ಮಹಾನಗರ ಪಾಲಿಕೆಯ ೩೫ನೇ ವಾರ್ಡಿನ ಸದಸ್ಯ ರಾಜಶೇಖರ ಕುರಿಯವರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು; ಭಾರತದ ಇತಿಹಾಸವನ್ನು ಅರ್ಥ ಮಾಡಿಕೊಂಡರೆ ಮಾತ್ರ ಭಾರತದ ಭವಿಷ್ಯ ನಮ್ಮ ಕಣ್ಣೇದುರಿಗೆ ಬರುವುದಕ್ಕೆ ಸಾಧ್ಯ. ಇಂದಿನ ಯುವಕರು ದೇಶಭಕ್ತಿಯನ್ನು ಮನದಲ್ಲಿ ತುಂಬಿಕೊಂಡು ಯುವ ಭಾರತದಿಂದ ನವ ಭಾರತ ನಿರ್ಮಾಣ ಮಾಡುವುದರ ಜೊತೆಗೆ ವಿಶ್ವಗುರು ಭಾರತವನ್ನು ಸ್ಥಾಪಿಸುವ ಗುರಿ ಹೊಂದಬೇಕು ಎಂದು ಕರೆ ನೀಡಿದರು.
ವರಸಿದ್ಧಿ ವಿನಾಯಕ ಕೋ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಸಂಜಯ ಪಾಟೀಲ್ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಕೌಲಗಿ; ಇಂದು ಭಾರತ ಗಣನೀಯವಾಗಿ ಬದಲಾವಣೆ ಹೊಂದುತ್ತ ಸಾಗಿದೆ. ಜಾಗತಿಕ ಆರ್ಥಿಕ ಕ್ಷೇತ್ರದಲ್ಲಿ ತನ್ನ ಸಿಂಹಪಾಲನ್ನು ಹೊಂದಿದ್ದರೆ; ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ದೊಡ್ಡ ರಾಷ್ಟ್ರಗಳಿಗೂ ಸಹ ಉತ್ತರ ನೀಡುವ ಮಟ್ಟದಲ್ಲಿ ಸಜ್ಜಾಗಿ ನಿಂತಿದೆ. ಅದರ ಜೊತೆಯಲ್ಲಿ ವಿಜ್ಞಾನ ಕ್ಷೇತ್ರವೂ ಸಹ ಮಹತ್ತರವಾದ ಪ್ರಗತಿ ಸಾಧಿಸಿದೆ. ವಿದ್ಯಾರ್ಥಿಗಳು ಕೂಡ ಭವಿಷ್ಯದಲ್ಲಿ ತಮ್ಮ ಕೊಡುಗೆಯನ್ನು ಕೊಡುವುದಕ್ಕೆ ತಯಾರಾಗಬೇಕು ಎಂದು ಸಲಹೆ ನೀಡಿದರು.
ಪ್ರಾಚಾರ್ಯ ಶ್ರೀಕಾಂತ ಕೆ. ಎಸ್, ಉಪ ಪ್ರಾಚಾರ್ಯ ಮಂಜುನಾಥ ಜುನಗೊಂಡ, ಉಪನ್ಯಾಸಕ ಮುಸ್ತಾಕ ಮಲಘಾಣ, ವಿದ್ಯಾರ್ಥಿಳಾದ ಗಂಗಾ ಮುಕರ್ತಿಹಾಳ, ಮಧುಗೌಡ ಪಾಟೀಲ, ಕೃತಿಕಾ ಕಣಬುರ ಮಾತನಾಡಿದರು.
ಚಿನ್ಮಯಿ ಸಂಪಗಾಂವಕರ್ ಪ್ರಾರ್ಥಿಸಿದರು. ಉಪನ್ಯಾಸಕ ಶರಣಗೌಡ ಪಾಟೀಲ ನಿರೂಪಿಸಿದರು.

