ಪಠ್ಯೇತರ ಚಟುವಟಿಕೆಗಳ ಉದ್ಘಾಟಿಸಿದ ಪ್ರೊ.ಎಚ್.ಟಿ.ಪೋತೆ ಸಲಹೆ
ಉದಯರಶ್ಮಿ ದಿನಪತ್ರಿಕೆ
ಮೋರಟಗಿ: ವಿದ್ಯಾರ್ಥಿಯ ಜೀವನದಲ್ಲಿ ಸಾಧನೆ ಮಾಡುವ ಮಾಡುವ ನಿಟ್ಟಿನಲ್ಲಿ ಕನಸನ್ನು ಕಟ್ಟಿಕೊಳ್ಳಬೇಕು. ಜ್ಞಾನದಿಂದ ಗುರುವನ್ನು ಮೀರಿಸುವಂತಹ ವಿದ್ಯಾರ್ಥಿಗಳಾಗಿ ಹೊರಹೊಮ್ಮಬೇಕು ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕಲಬುರ್ಗಿಯ ಕನ್ನಡ ಅಧ್ಯಯನದ ಸಂಸ್ಥೆಯ ನಿರ್ದೆಶಕ ಪ್ರೊ.ಎಚ್.ಟಿ.ಪೋತೆ ಹೇಳಿದರು.
ಗುರುವಾರ ಗ್ರಾಮದ ಕಲ್ಪವೃಕ್ಷ ಪದವಿ ಮಹಾವಿದ್ಯಾಲಯ ಹಾಗೂ ಕಲ್ಪವೃಕ್ಷ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯುಕ್ತ ಆಶ್ರಯದಲ್ಲಿ ಪ್ರಥಮ ವರ್ಷದ ಪಿ.ಯು.ಸಿ ಮತ್ತು ಪ್ರಥಮ ಸೆಮಿಸ್ಟರಿನ ಪದವಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ಪದವಿ ಮತ್ತು ಪದವಿ ಪೂರ್ವ ಮಹಾವಿದ್ಯಾಲಯಗಳ ಪಠ್ಯೇತರ ಚಟುವಟಿಕೆಗಳ ಉದ್ಘಾಟನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸಮಯದ ಪ್ರಜ್ಞೆ ಇರಬೇಕು ಶಿಕ್ಷಕರನ್ನು ಗೌರವದಿಂದ ಕಾಣಬೇಕು ಪಠ್ಯಕ್ಕೆ ಎಷ್ಟು ಮಹತ್ವ ಕೊಡುತ್ತಿರೋ ಅದರಷ್ಟೇ ಪ್ರಾಮುಖ್ಯತೆಯನ್ನು ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ನೀಡಿ ನಿಮ್ಮ ಪಾಲಕರು ಕಂಡ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಅದ್ಯಯನ ಮಾಡಿ ಸುಂದರವಾದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಲ್ಪವೃಕ್ಷ ಸಂಸ್ಥೆಯ ಸಂಸ್ಥಾಪಕ ಶಿವಶರಣಗೌಡ ಬಿರಾದಾರ ಮಾತನಾಡಿ, ಸಮಾಜದಲ್ಲಿ ನಾವು ಸುಮ್ಮನೆ ಇದ್ದರೆ ಯಾರು ನಮ್ಮನ್ನು ಗುರುತಿಸುವುದಿಲ್ಲ ತಮ್ಮ ಕನಸಿನ ಗುರಿಯನ್ನು ಬೆನ್ನತ್ತಿ ಸಾಧನೆ ಮಾಡಿದಾಗ ಮಾತ್ರ ಸಮಾಜ ಗುರುತಿಸುತ್ತದೆ ಹೀಗಾಗಿ ಸತತ ಪ್ರಯತ್ನದಿಂದ ಯಶಸ್ಸು ಸಾದ್ಯವಾಗುತ್ತದೆ ತಮ್ಮ ಪರಿಶ್ರಮದ ಮೂಲಕ ಸಾಧನೆಯನ್ನು ಜಗತ್ತಿಗೆ ತೋರಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಎಸ್.ಎಚ್. ಧೂಳಬಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಎ.ಬಿ. ಸಿಂದಗಿ, ಕಲ್ಪವೃಕ್ಷ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಬಿ.ಬಿರಾದಾರ, ಪದವಿ ಮಹಾವಿದ್ಯಾಲಯದ ಸಂಯೋಜಕ ಎಸ್.ಎಸ್.ನಿಗಡಿ, ಮಂಜುನಾಥ ಹಿರೇಮಠ, ಶ್ರೀದೇವಿ ಬಡಿಗೇರ ಸಂಸ್ಕೃತಿಕ ವಿಭಾಗದ ಮುಖ್ಯಸ್ಥ ಭಾರತಿ ಚಿತ್ತಲಗಿ, ಮಹಿಳಾ ಪ್ರಧಾನ ಕಾರ್ಯದರ್ಶಿ ಕು. ಅಮ್ಮವ್ವ ಬಳಬಟ್ಟಿ, ವಿದ್ಯಾರ್ಥಿ ಪ್ರತಿನಿಧಿ ಕು.ಶರಣಬಸವ. ಬಡಿಗೇರ ಮತ್ತು ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿ ಪ್ರತಿನಿಧಿ ಕು. ಫರ್ಜನಾ ಸಾಲೋಟಗಿ, ಇದ್ದರು.