ಚಡಚಣದಲ್ಲಿ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಉದ್ಘಾಟನೆ – ಪದಗ್ರಹಣ
ಉದಯರಶ್ಮಿ ದಿನಪತ್ರಿಕೆ
ಚಡಚಣ: ನಾವೆಲ್ಲ ವೀರಶೈವ ಲಿಂಗಾಯತರು. ನಾವೆಲ್ಲರೂ ಸಹಕಾರದಿಂದ ಒಗ್ಗಟ್ಟಾದರೆ ಧರ್ಮದ ಉಳಿವು ಸಾಧ್ಯ ಲಿಂಗಾಯತರು ಹಾಗೂ ವೀರಶೈವರು ಒಂದೇ ನಾಣ್ಯದ ಎರಡು ಮುಖಗಳು. ಮನೆಗೊಬ್ಬರಂತೆ ಸುಮಾರು ೧೦ ಸಾವಿರ ಸದಸ್ಯರಾಗಬೇಕು. ಅಂದಾಗ ಅಭಿವೃದ್ಧಿಯಾಗುವುದು ಖಚಿತ ಜಾತಿಗಣತಿಯಲ್ಲಿ ವೀರಶೈವ ಲಿಂಗಾಯತರೆಂದು ನಮೂದಿಸಿರಿ ಎಂದು ಲಿಂಗಾಯತ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಬಿದರಿ ಕರೆಕೊಟ್ಟರು.
ಸ್ಥಳೀಯ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ರವಿವಾರ ಜರುಗಿದ ತಾಲೂಕು ಘಟಕ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಸಿದ್ಧೇಶ್ವರ ಶ್ರೀಗಳಂತೆ ಪ್ರೀತಿಸುವ ಗುಣ ಹೊಂದಿರಿ. ನಾವೆಲ್ಲರೂ ಒಂದಾಗಬೇಕು.ಕೆಟ್ಟ ವಿಚಾರದಿಂದ ದೂರವಿರಬೇಕು. ಮುಂದಿನ ದಿನಗಳಲ್ಲಿ ಅಧ್ಯಕ್ಷ ಎಸ್.ಆರ್. ಅವಜಿ ಅವರ ಮಾರ್ಗದರ್ಶನದಲ್ಲಿ ಘಟಕವು ಅಭಿವೃದ್ಧಿ ಸಾಧ್ಯ ಎಂದು ಬಿದರಿ ಅವರು ಹೇಳಿದರು.
ಪದಗ್ರಹಣ ನೆರವೇರಿಸಿ ಮಾತನಾಡಿದ ರಾಷ್ಟ್ರೀಯ ಮಹಿಳಾ ಅಧ್ಯಕ್ಷೆ ವೀಣಾಕಾಶಪ್ಪನವರ ಅವರು, ವಿಭೂತಿಧಾರಣೆಯೊಂದಿಗೆ ಲಿಂಗಾರ್ಚನೆ ಮಾಡಬೇಕು. ಪುರುಷರಂತೆ ಮಹಿಳೆಯರಿಗೆ ಸಮಾನತೆಯನ್ನು ಸಾರಿದ ಬಸವಣ್ಣನವರು. ಅವರ ವಚನಗಳು ವಿದೇಶದಲ್ಲಿ ಮೆಚ್ಚುಗೆಯಾಗಿವೆ.ಬಸವ ನಾಡು ವಿಜಯಪುರ ಜಿಲ್ಲೆ ಧಾರ್ಮಿಕತೆಗೆ ಹೆಸರು.ಮಠ ಮಾನ್ಯರು ಧರ್ಮವನ್ನು ಕಾಪಾಡುತ್ತಾರೆ, ಮಹಿಳೆಯರು ಹೆಚ್ಚು ಸದಸ್ಯರಾಗಿರಿ ಎಂದರು.
ಸಾನಿಧ್ಯ ವಹಿಸಿದ್ದ ಚಡಚಣ ವಿರಕ್ತ ಮಠದ ಮನಿಪ್ರ ಷಡಕ್ಷರ ಸ್ವಾಮಿಗಳು ಮಾತನಾಡಿ, ವೀರಶೈವ ಲಿಂಗಾಯತ ಧರ್ಮದ ಭಕ್ತಿ, ಶ್ರದ್ಧೆ, ಚಾರಿತ್ರ್ಯ, ಕ್ಷಮಾಶೀಲತೆ, ಪರೋಪಕಾರ ಸದ್ಗುಣಗಳು ಶಾಂತಿಯ ಬದುಕಿಗೆ ಅಡಿಪಾಯ, ಎಲ್ಲ ಜಾತಿಗಳು ಸೇರಿ ವೀರಶೈವ ಲಿಂಗಾಯತ ಧರ್ಮವಾಗಿದೆ. ಧರ್ಮ ಬೆಳೆಯಬೇಕು. ಹೆಚ್ಚು ಸದಸ್ಯರಾಗಿರಿ. ಅವರ ಸಹಕಾರ ಮಾರ್ಗದರ್ಶನ ಘಟಕದ ಅಭಿವೃದ್ಧಿಯಾಗಲಿದೆ. ಪಟ್ಟಣವು ವ್ಯಾಪಾರಿ ಕೇಂದ್ರವಾಗಿದ್ದರೂ ಧಾರ್ಮಿಕತೆ ಇಲ್ಲಿ ತುಂಬಿ ತುಳುಕುತ್ತಿದೆ. ಸಿದ್ಧೇಶ್ವರ ಶ್ರೀಗಳು ಶಿಕ್ಷಣ ಪಡೆದ ಪುಣ್ಯ ಭೂಮಿ ಇದು. ಅವರ ತತ್ವಾದರ್ಶಗಳನ್ನು ಇಲ್ಲಿಯವರು ಪಾಲಿಸುತ್ತ ಸಾಗುತ್ತಿದ್ದಾರೆ ಎಂದರು.
ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಪಿ. ಬಗಲಿ ಮಾತನಾಡಿ ೧೧ ನೇ ಶತಮಾನದಲ್ಲಿ ವೀರಶೈವ ರೂಪಾಂತರವಾಯಿತು. ಮತಾಂತರ ತಪ್ಪಿದರೆ ಧರ್ಮ ಉಳಿಯುವುದು. ಒಂದೇ ಎಂಬ ಭಾವನೆ ಮೂಡಿಸುವ ವೀರಶೈವ ಲಿಂಗಾಯತ ಧರ್ಮವಾಗಿದೆ. ಎಲ್ಲರ ಪ್ರೀತಿ,ಸಹಕಾರದಿಂದ ಬೆಳೆಸೋಣ ಎಂದರು.
ನಿರ್ದೇಶಕರು ರಾಜ್ಯ ಘಟಕ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ರಾಜಶೇಖರ ಸೀರಿ, ಜಿಲ್ಲಾ ಘಟಕ ಅಧ್ಯಕ್ಷ ವ್ಹಿ.ಸಿ. ನಾಗಠಾಣ, ತಾಲೂಕಾ ಅಧ್ಯಕ್ಷ ಎಸ್.ಆರ್. ಅವಜಿ, ಉಪಾಧ್ಯಕ್ಷ ಬಿ.ಎಮ್. ಕೋರೆ, ಬಾಬುಗೌಡ ಪಾಟೀಲ,ನಗರ ಘಟಕ ಉಪಾಧ್ಯಕ್ಷೆ ವಿದ್ಯಾ ಕಲ್ಯಾಣಶೆಟ್ಟಿ, ಪ್ರಾಚಾರ್ಯ ಎಮ್.ವ್ಹಿ. ಕಟಗೇರಿ, ವ್ಹಿ.ಎಸ್. ಗಿಡವೀರ,ಜಿ.ಡಿ. ಪಾವಲೆ, ಬಸವರಾಜ ಯಂಕಂಚಿ ಸೇರಿದಂತೆ ತಾಲೂಕಿನ ಪದಾಧಿಕಾರಿಗಳು ಲಿಂಗಾಯತ ಸಮುದಾಯದವರು ಇದ್ದರು.

