ಉದಯರಶ್ಮಿ ದಿನಪತ್ರಿಕೆ
ಚಡಚಣ: ಯಾವುದೇ ದೇಶ ಯುದ್ಧ ಬಯಸುವುದಿಲ್ಲ ಮತ್ತು ಯುದ್ಧ ಅನಿವಾರ್ಯ ಅಲ್ಲ. ಆಕಸ್ಮಿಕವಾಗಿ ಯುದ್ಧ ನಡೆಯುತ್ತವೆ.ಯುದ್ಧಗಳು ದೇಶಗಳ ಪ್ರಗತಿಗೆ ಮಾರಕ ಎಂದು ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕರಾದ ಡಾ| ಮುರುಗೇಶ ಕೆ.ಎಂ. ಅಭಿಪ್ರಾಯಪಟ್ಟರು.
ಶ್ರೀ ಸಂಗಮೇಶ್ವರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.ಸಿ.ಸಿ. ಘಟಕ ಭಾರತವು ೨೬ನೇ ಕಾರ್ಗಿಲ್ ವಿಜಯ ದಿವಸವನ್ನು ೧೯೯೯ರ ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಶೌರ್ಯ, ಬಲಿದಾನ ಮತ್ತು ರಾಷ್ಟ್ರೀಯ ಏಕತೆಯ ಸ್ಮರಣಾರ್ಥವಾಗಿ ನೆನಪಿಸಿಕೊಳ್ಳಲಾಗುತ್ತದೆ ಕಾರ್ಗಿಲ್ ವಿಜಯ ದಿವಸದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿ ಭಾರತೀಯ ಯೋಧರ ಪರಾಕ್ರಮ ಜಗತ್ತಿಗೆ ಗೊತ್ತಿದೆ. ಎಂಥ ಭಯಾನಕ ಪರಿಸ್ಥಿತಿ ಎದುರಾದರೂ ಭಾರತೀಯ ಯೋಧರು ದೇಶದ ಗಡಿಯಲ್ಲಿ ತಮ್ಮ ಜೀವದ ಹಂಗು ತೊರೆದು ಹೋರಾಡಿ ಭಾರತ ದೇಶದ ನಾಗರಿಕರು ನೆಮ್ಮದಿಯಾಗಿ ಜೀವಿಸುವಂತೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಚಾರ್ಯ ಡಾ| ಎಸ್. ಬಿ. ರಾಠೋಡ ಅವರು ಮಾತನಾಡಿ, ವೀರಯೋಧರ ದೇಶಭಕ್ತಿಯ ಬದ್ಧತೆ ಸದಾ ಸ್ಮರಣೀಯ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್ ಸರ್ಕಾರ ಭಾರತೀಯರನ್ನು ಎರಡು ಜಾಗತಿಕ ಯುದ್ಧದಲ್ಲಿ ತೊಡಗಿಸಿತ್ತು. ಆಗಲೇ ಭಾರತೀಯ ಯೋಧರ ಪರಾಕ್ರಮ ವಿಶ್ವಕ್ಕೆ ಮನವರಿಕೆ ಆಗಿದೆ ಎಂದು ಹೇಳಿದ ಅವರು, ಸ್ವಾತಂತ್ರ್ಯ ನಂತರವೂ ಭಾರತದ ಯೋಧರು ಚೀನಾ, ಪಾಕಿಸ್ತಾನ ವಿರುದ್ಧ ನಡೆದ ಯುದ್ಧಗಳಲ್ಲಿ ಪರಾಕ್ರಮ ಮೆರೆದಿದ್ದಾರೆ. ನೆರೆಯ ದೇಶಗಳು ಅನಗತ್ಯವಾಗಿ ಯುದ್ಧದ ಪರಿಸ್ಥಿತಿ ನಿರ್ಮಿಸುತ್ತಿದೆ. ಇದಕ್ಕೆ ನಮ್ಮ ವೀರ ಯೋಧರೂ ತಕ್ಕ ಉತ್ತರ ನೀಡುತ್ತಲೇ ಬಂದಿದ್ದಾರೆ ಎಂದು ಅವರು ಹೇಳಿದರು.
ಎನ್.ಸಿ.ಸಿ. ಘಟಕದ ಅಧಿಕಾರಿಗ ಡಾ.ಎಂ. ಎಸ್. ಮಾಗಣಗೇರಿ ಅವರು ಮಾತನಾಡಿ, ದೇಶದ ೧೪೦ ಕೋಟಿ ಎಲ್ಲ ನಾಗರಿಕರ ರಕ್ಷಣೆಗಾಗಿ ಭಾರತೀಯ ಸುಮಾರು ೧೫-೨೦ ಲಕ್ಷ ಸೇನಾ ಯೋಧರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ೧೪ ಲಕ್ಷ ಸೈನಿಕರು ಭೂದಳದಲ್ಲೂ, ೧.೫ ಲಕ್ಷದಷ್ಟು ಯೋಧರು ವಾಯುದಳದಲ್ಲೂ ಹಾಗೂ ೧.೫ ಲಕ್ಷ ಸೈನಿಕರು ನೌಕಾದಳದಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದರು.
ಐಕ್ಯೂ.ಏ.ಸಿ. ಸಂಯೋಜಕರಾದ ಡಾ| ಎಸ್. ಎಸ್. ದೇಸಾಯಿ ಅವರು ಮಾತನಾಡಿ, ಭಾರತಾಂಬೆಯ ರಕ್ಷಣಾ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸುವ ಭಾರತೀಯ ವೀರಯೋಧರನ್ನು ಪಡೆದಿರುವ ನಾವೇ ಧನ್ಯರು, ಪುಣ್ಯವಂತರು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಎಂ.ಕೆ. ಬಿರಾದಾರ, ಪ್ರೋ. ಆರ್.ಎಸ್. ಮಾವಿನಮರ, ಪ್ರೋ. ಎಸ್.ಎಸ್. ಪಾಟೀಲ, ಪ್ರೋ. ಬಸವರಾಜ ನೀಲವಾಣಿ, ಮಹಾವಿದ್ಯಾಲಯದ ಪ್ರಾಧ್ಯಾಪಕರು, ಎನ್.ಸಿ.ಸಿ. ಕೆಡೆಟ್ಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಪ್ರೊ. ಮಹಾಂತೇಶ ಜನವಾಡ ಕಾರ್ಯಕ್ರಮ ನಿರೂಪಿಸಿದರು.

