ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ಸಂಚಾರಕ್ಕೆ ಸಂಚಕಾರ ತಂದಿರುವ ರಸ್ತೆಗಳು
ಉದಯರಶ್ಮಿ ದಿನಪತ್ರಿಕೆ
ವರದಿ: ಸಿದ್ರಾಮ ಮಾಳಿ
ಚಡಚಣ: ಶಿರಾಡೋಣದಿಂದ ರೇವತಗಾಂವ ಮಾರ್ಗವಾಗಿ ಉಮರಜ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹದೆಗೆಟ್ಟು ೧೦ ವರ್ಷಗಳೇ ಕಳೆದಿದ್ದರೂ ಅಧಿಕಾರಿಗಳ ಹಾಗೂ ರಾಜಕಾರಣಿಗಳು ದುರಸ್ಥಿಗೆ ಮುಂದಾಗದ ಕಾರಣ ರಸ್ತೆ ಮಧ್ಯ ಹೊಂಡ ಹಾಗೂ ಗುಂಡಿಗಳು ಸೃಷ್ಟಿಯಾಗಿವೆ. ಇದರಿಂದಾಗಿ ಮಳೆಯಾದಾಗಲೆಲ್ಲ ರಸ್ತೆ ಗದ್ದೆಯಂತಾಗಿ ಸಾರ್ವಜನಿಕರಿಗೆ, ವಾಹನ ಸವಾರರಿಗೆ ಅನಾನುಕೂಲವನ್ನುಂಟು ಮಾಡುತ್ತಿದೆ.
ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿರುವ ಕಾರಣ ವಾಹನ ಸವಾರರು, ನಾಗರಿಕರು, ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಆಸ್ಪತ್ರೆಗೆಂದು ತೆರಳುವ ರೋಗಿಗಳು ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆಯ ಮಧ್ಯ ಭಾಗದಲ್ಲಿ ಸುಮಾರು ಮೊಣಕಾಲುದ್ದ ಗುಂಡಿಗಳು ನಿರ್ಮಾಣವಾಗಿವೆ. ಮಳೆ ನೀರು ಗುಂಡಿಗಳಲ್ಲಿ ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪಕ್ಕದ ಮಹಾರಾಷ್ಟ್ರ ಹಾಗೂ ಚಡಚಣ ಪಟ್ಟಣ ಸೇರಿದಂತೆ ಕಾರ್ಮಿಕರು, ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಇದೇ ಮಾರ್ಗದ ಮೂಲಕ ಪ್ರಯಾಣಿಸುತ್ತಾರೆ.
ಆದರೆ ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ಅನೇಕ ದ್ವಿಚಕ್ರ ವಾಹನ ಸವಾರರು ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿರುವ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ರಾಜ್ಯ ಸಾರಿಗೆ ಸಂಸ್ಥೆ ಬಸ ಕೂಡಾ ಹಲವು ಬಾರಿ ಕೇಟ್ಟು ನಿಂತು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಾರ್ಗ ಮಧ್ಯದಲ್ಲಿಯೇ ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಚಡಚಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಾರ್ಕಾರಿ ಮತ್ತು ಖಾಸಗಿ ಶಾಲೆಗಳು ಹೆಚ್ಚಿದ್ದು, ವಿದ್ಯಾರ್ಥಿಗಳು ಸಹ ಇದೇ ಮಾರ್ಗದಲ್ಲಿಯೇ ಸಂಚರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
” ಮಳೆ ಬಂತೆಂದರೆ ಈ ರಸ್ತೆ ಮಾರ್ಗದಲ್ಲಿ ಸಂಚರಿಸಲು ಹರಸಾಹಸಪಡಬೇಕು. ರಸ್ತೆ ಸರಿಪಡಿಸುವಂತೆ ಈಗಾಗಲೇ ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನಾದರೂ ರಸ್ತೆ ದುರಸ್ಥಿ ಮಾಡಿ, ಸಮಸ್ಯೆ ಬಗೆಹರಿಸಿ.”
– ಎಲ್.ಕೆ.ಮೇತ್ರೆ
ಗ್ರಾಮಸ್ಥರು
” ನಮ್ಮ ಗ್ರಾಮದಲ್ಲಿ ಸರ್ಕಾರಿ ಕಾಲೇಜು ಇಲ್ಲ. ೧೮ ಕಿ.ಮಿ ದೂರದಲ್ಲಿರುವ ಚಡಚಣ ಪಟ್ಟಣದ ಖಾಸಗಿ ಕಾಲೇಜುಗಳಿಗೆ ತೆರಳಬೇಕಾದರೆ ರಸ್ತೆ ಕೆಟ್ಟ ಸ್ಥಿತಿಯಲ್ಲಿದ್ದು, ದಾರಿಯುದ್ಧಕ್ಕೂ ಕೆಸರು ಮತ್ತು ಹೊಂಡದ ರಸ್ತೆಯಾಗಿದೆ. ಮಳೆಗಾಲದಲ್ಲಿ ರಸ್ತೆ ಸರಿ ಇಲ್ಲದ ಕಾರಣ ಬಸ್ ಸಂಚಾರಕ್ಕೆ ಹಿಂದೇಟು ಹಾಕುತ್ತಾರೆ. ಇಲ್ಲವಾದರೆ ಕೆಟ್ಟು ನಿಂತು ಬಿಡುತ್ತವೆ. ಇದರಿಂದ ಕಾಲೇಜುಗಳಿಗೆ ತೆರಳಲು ಹರಸಾಹಸವಾಗಿದೆ.”
– ಜ್ಯೋತಿ ಮಾಳಿ
ಕಾಲೇಜು ವಿದ್ಯಾರ್ಥಿನಿ
” ಈ ರಸ್ತೆ ಕಾಮಗಾರಿಯ ಕುರಿತು ಕೆಲವರು ಸಾರ್ವಜನಿಕರು ನನ್ನ ಗಮನಕ್ಕೂ ತಂದಿದ್ದು. ಶಾಸಕರಿಗೆ ಈ ಕುರಿತು ಮನವಿ ಸಲ್ಲಿಸಿದ್ದೇನೆ. ಗ್ರಾಮೀಣ ಪ್ರದೇಶದ ರಸ್ತೆಗಳು ಬಹಳಷ್ಟು ಹದೆಗೆಟ್ಟಿದ್ದು, ಮುಂದಿನ ಯೋಜನೆಗಳಲ್ಲಿ ರಸ್ತೆಗಳ ಅಭಿವೃದ್ಧಿಗೆ ಗಮನ ಹರಿಸೋಣ.”
– ಎಸ್.ಎಂ.ಪಾಟೀಲ
ಪಿಡಬ್ಲೂಡಿ ಅಧಿಕಾರಿ

