ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಾಲೆಯಲ್ಲಿ ಉತ್ತಮ ವಾತಾವರಣ ನಿರ್ಮಾಣ ಹಾಗೂ ಅತ್ಯುತ್ತಮ ಫಲಿತಾಂಶಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಮುಖ್ಯಶಿಕ್ಷಕ ಆಯ್.ಎಸ್.ನರೂಣಿ ಹೇಳಿದರು.
ತಾಲ್ಲೂಕಿನ ಮುಳಸಾವಳಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ಸಾಮಾಜಿಕ ಪರಿಶೋಧನೆಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಎಲ್ಲ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು
ಅಧ್ಯಕ್ಷತೆ ವಹಿಸಿದ ತಾಲ್ಲೂಕು ತೋಟಗಾರಿಕೆ ಇಲಾಖೆಯ ಲಕ್ಷ್ಮಣ ಸಂಗೋಗಿ ಮಾತನಾಡಿ, ಎಸ್.ಎಸ್. ಎಲ್.ಸಿ ಪರೀಕ್ಷೆಯಲ್ಲಿ ಶಾಲೆಯ ಫಲಿತಾಂಶ ತಾಲ್ಲೂಕು ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದು ಒಳ್ಳೆಯ ವಾತಾವರಣ ಇದೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯಿತಿಯ ಕಾರ್ಯಕ್ರಮ ವ್ಯವಸ್ಥಾಪಕ ಬಸವರಾಜ ಮದನಶೆಟ್ಟಿ ಮಾತನಾಡಿ, ಶಾಲೆಯಲ್ಲಿ ವಾಚನಾಲಯ, ಪ್ರೊಜೆಕ್ಟರ್ ಹಾಗೂ ಸ್ಮಾರ್ಟ್ ಕ್ಲಾಸ್ ಮೂಲಕ ಪಾಠ ಬೋಧನೆ, ಮಕ್ಕಳಿಗೆ ಸುರಕ್ಷತೆಯ ಭಾವನೆ, ದಾನಿಗಳ ಸಹಕಾರ, ವೃತ್ತಿಪರ ಮಾರ್ಗದರ್ಶನ, ವಿಶೇಷ ತರಗತಿ, ಸರಕಾರದ ಸೌಲಭ್ಯಗಳ ವಿತರಣೆ ಹೀಗೆ ಹತ್ತು ಹಲವಾರು ವಿಷಯಗಳ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದರು.
ಸಭೆಯಲ್ಲಿ ದಿ:೨೨ ರಿಂದ ೨೫ ಜುಲೈ ರವರೆಗೆ ಶಾಲಾ ಹಂತದ ಸಾಮಾಜಿಕ ಪರಿಶೋಧನೆ ನಡೆಸಲಾಯಿತು. ಇದರಲ್ಲಿ ಮುಖ್ಯವಾಗಿ ಕುಡಿಯುವ ನೀರು ಯೋಗ್ಯವಿಲ್ಲ, ಗಂಡು ಮಕ್ಕಳಿಗೆ ಶೌಚಾಲಯ, ಭೋಜನಾಲಯ ಕೊರತೆ. ಪ್ರಯೋಗಾಲಯ, ಕಂಪ್ಯೂಟರ್ ಕೊಠಡಿಗಳ ವ್ಯವಸ್ಥೆ, ಶಾಲಾ ಕಂಪೌಂಡ್ ದುರಸ್ತಿ, ಗೇಟ್ ಮತ್ತು ಸಿಸಿಟಿವಿ, ಹಾಗೂ ವಾಚನಾಲಯಕ್ಕೆ ಕೊಠಡಿ ವ್ಯವಸ್ಥೆ ಬಗೆಗೆ ಕೊರತೆಗಳ ವಿಚಾರದಲ್ಲಿ ಗಂಭೀರ ಚರ್ಚೆ ಜರುಗಿತು.
ಸಭೆಯಲ್ಲಿ ಇದ್ದ ಪಂಚಾಯಿತಿ ಲೆಕ್ಕ ಸಹಾಯಕರು ಮಾತನಾಡಿ, ಅಭಿವೃದ್ಧಿ ಅಧಿüಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಎಲ್ಲ ವ್ಯವಸ್ಥೆ ಮಾಡಿಕೊಡುವ ಭರವಸೆ ನೀಡಿದರು.
ಎಸ್ಡಿಎಮ್ಸಿ ಅಧ್ಯಕ್ಷ ಮನೋಹರ ಪೂಜಾರಿ, ಉಪಾಧ್ಯಕ್ಷ ಸಾಹೇಬಗೌಡ ನಾಗರಳ್ಳಿ, ಸದಸ್ಯರಾದ ಅರ್ಜುನ ಹಿಪ್ಪರಗಿ, ಶ್ರೀಶೈಲ ಹೊಸಮನಿ , ಕೆಜಿಎಚ್ಪಿಎಸ್ ಶಾಲೆಯ ಮುಖ್ಯಶಿಕ್ಷಕ ಶಿವಾನಂದ ಬಿರಾದಾರ ಸಿಆರ್ಪಿ ಶ್ರೀಶೈಲ ರೋಡಗಿ, ದಾನಿ ಬಸಗೊಂಡಪ್ಪ ರೋಡಗಿ, ಪಾಲಕರಾದ ಭೀಮಶಾ ಬಸರಕೋಡ್, ಅರವಿಂದ ನಾಯ್ಕೋಡಿ, ಅರ್ಜುನ್ ವಾಲಿಕಾರ, ಪ್ರೇಮಸಿಂಗ ಜಾಧವ, ಎ.ಎ. ಗಚ್ಚಿನಮಾಲ ಇದ್ದರು.

