ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಪರಮಗೊಂಡ ಗವರೋಜಿ ರಾಜೀನಾಮೆಯಿಂದ ತೆರವಾದ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.
ಸಾಮಾನ್ಯ ವರ್ಗದಿಂದ ಆಯ್ಕೆಯಾಗಿದ್ದ ಪರಮಗೊಂಡ ಗವರೋಜಿ ಅವಧಿ ಪೂರ್ಣವಾಗುವ ಮುಂಚೆ ರಾಜೀನಾಮೆ ನೀಡಿದ್ದರಿಂದ ಉಳಿದ ಅವಧಿಗೆ ಅಧ್ಯಕ್ಷರಾಗಲು ಕಾಂಗ್ರೆಸ್ ಸದಸ್ಯರಲ್ಲಿ ಕಸರತ್ತು ನಡೆದಿತ್ತು. ಮಾಜಿ ಶಾಸಕ ಆನಂದ ನ್ಯಾಮಗೌಡರ ನಿರ್ಧಾರವೇ ಅಂತಿಮವಾಗಿದ್ದು, ಈಗಾಗಲೇ ಅವರು ಒಬ್ಬ ಹಿರಿಯ ಸದಸ್ಯನ ಮೇಲೆ ಒಲವು ತೋರಿದ್ದರಿಂದ ಪೈಪೋಟಿಗೆ ತೆರೆ ಬಿದ್ದಿದೆ.
ಒಟ್ಟು 31 ಸದಸ್ಯರಲ್ಲಿ ಕಾಂಗ್ರೆಸ್ 20, ಬಿಜೆಪಿಯ 7, ಪಕ್ಷೇತರ 4 ಸದಸ್ಯರು ಇದ್ದಾರೆ. ಮಾಜಿ ಶಾಸಕ ಆನಂದ ನ್ಯಾಮಗೌಡರು ಈ ಬಾರಿ ಹಾಲುಮತ ಕುರುಬ ಸಮುದಾಯದ ಹಿರಿಯ ಸದಸ್ಯ ಈಶ್ವರ ವಾಳೆನ್ನವರ ಅವರಿಗೆ ಅವಕಾಶ ಕಲ್ಪಿಸಿ ಕೊಡಲು ಮುತುವರ್ಜಿ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಅ.1ರಂದು ಅಧ್ಯಕ್ಷರ ಆಯ್ಕೆ: ನಗರಸಭೆ ಸಭಾಭವನದಲ್ಲಿ ಅ.1ರಂದು ಬೆಳಗ್ಗೆ 10 ರಿಂದ
11 ಗಂಟೆ ವರೆಗೆ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರಗಳನ್ನು ಮಧ್ಯಾಹ್ನ 1 ಗಂಟೆಗೆ ಸಭೆ ಆರಂಭವಾಗುತ್ತಿದ್ದಂತೆಯೇ ಪರಿಶೀಲನೆ ನಡೆಸಲಾಗುವುದು. ನಾಮನಿರ್ದೇಶನ ಹಿಂತೆಗೆದುಕೊಳ್ಳಲು ನಿಗದಿಪಡಿಸಿದ ಅವಧಿ ಮುಕ್ತಾಯವಾದ ನಂತರ ಚುನಾವಣೆ ನಡೆಸಬೇಕಾದಲ್ಲಿ ಕೋರಂ ಗಣನೆಗೆ ತೆಗೆದುಕೊಂಡು ಜಮಖಂಡಿ ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮತದಾನ ನಡೆಸಲಾಗುವುದು ಎಂದು ಚುನಾವಣಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
“ಹಿರಿಯ ಸದಸ್ಯ ಈಶ್ವರ ವಾಳೆನ್ನವರ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಎಲ್ಲ ಸದಸ್ಯರು ಒಪ್ಪಿಗೆ ನೀಡಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪೈಪೋಟಿ ಇಲ್ಲ.”
– ಆನಂದ ನ್ಯಾಮಗೌಡ ಜಮಖಂಡಿ ಮಾಜಿ ಶಾಸಕ.

