ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವ
ಉದಯರಶ್ಮಿ ದಿನಪತ್ರಿಕೆ
ವರದಿ: ಎಸ್ˌಎಮ್ˌಇಟ್ಟಿ
ಜಮಖಂಡಿ: ಕಳೆದ ರವಿವಾರದ ಸ್ವಚ್ಚತಾ ಅಭಿಯಾನದಲ್ಲಿ ಜಮಖಂಡಿ ನಗರದ ಕಿರಾಣಿ ವ್ಯಾಪಾರಸ್ಥರ ಸಂಘದ 50 ಸದಸ್ಯರ ಸಹಿತ 140 ಜನರು ಸ್ವಚ್ಚತಾ ಅಭಿಯಾನ ಶ್ರಮದಾನದಲ್ಲಿ ಪಾಲ್ಗೊಂಡು ಹಿಂದು ರುದ್ರಭೂಮಿ ಸ್ವಚ್ಚತೆಯಲ್ಲಿ ತೊಡಗಿಕೊಂಡಿದ್ದರು.
ಜಮಖಂಡಿ ನಗರದ ರಾಜ್ಯ ಹೆದ್ದಾರಿಯಲ್ಲಿ ಬರತಕ್ಕ ಅಂದಾಜು 24 ಎಕರೆ ಪ್ರದೇಶದ ಹಿಂದು ರುದ್ರಭೂಮಿಯಲ್ಲಿ 4ನೇ ರವಿವಾರದ ಸ್ವಚ್ಚತಾ ಅಭಿಯಾನದ ಶ್ರಮದಾನದಲ್ಲಿ ನೂರೆಂಟು ಜನರು ಮತ್ತು ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಕಳೆದ 4 ವಾರಗಳಿಂದ ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಆರಂಭ ಆಗಿರುವ ಸ್ವಚ್ಚತಾ ಅಭಿಯಾನ ಶ್ರಮದಾನ ಜಮಖಂಡಿ ಜನತೆ ಸಹಕಾರದಿಂದ ಹಿಂದು ರುದ್ರಭೂಮಿಯಲ್ಲಿ ಸ್ವಚ್ಚತಾ ಅಭಿಯಾನ ಯಶಸ್ವಿಯಾಗಿ ಮುನ್ನಡೆಯುತ್ತಿದೆ. 1ನೇ ರವಿವಾರ ನಡೆದ ಸ್ವಚ್ಚತಾ ಶ್ರಮದಾನದಲ್ಲಿ 25 ಜನರು, 2ನೇ ರವಿವಾರ 60 ಜನರು, 3ನೇ ರವಿವಾರ 85 ಜನರು ಪಾಲ್ಗೊಂಡಿದ್ದರು.
ಶ್ರೀಗಳಿಂದ ಮನವಿ ಮುತ್ತಿನಕಂತಿ ಹಿರೇಮಠದ ಶಿವಲಿಂಗಪಂಡಿತಾರಾಧ್ಯ ಶಿವಾಚಾರ್ಯರು ಮತ್ತು ಓಲೇಮಠದ ಪ.ಪೂ.ಆನಂದದೇವರು ನೇತೃತ್ವದಲ್ಲಿ ಅನೈತಿಕ ಚಟುವಟಿಕೆ ನಿಯಂತ್ರಣಕ್ಕಾಗಿ ಬರತಕ್ಕ ಇಂದಿನ 5ನೇ ರವಿವಾರ ಸ್ವಚ್ಚತಾ ಅಭಿಯಾನ ಶ್ರಮದಾನದಲ್ಲಿ ಹೊಸ ಯೋಜನೆ ಚಾಲನೆಗೊಳ್ಳಲಿದೆ. ಜಮಖಂಡಿ ತಾಲೂಕಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು. ಜಿಲ್ಲೆಯಲ್ಲಿ ವಿಶಾಲವಾದ ನಮ್ಮೆಲ್ಲರ ಹಿಂದು ರುದ್ರಭೂಮಿಯನ್ನು ನಾವು ಸಂರಕ್ಷಣೆ ಮಾಡಬೇಕಾಗಿದೆ. ಯಾವುದೇ ಜಾತಿ, ಧರ್ಮ ಎನ್ನದೇ ಎಲ್ಲರೂ ಸಾಮೂಹಿಕವಾಗಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಏನಿದು ನಿಯಂತ್ರಣ ಯೋಜನೆ ಹಿಂದು ರುದ್ರಭೂಮಿ ಆವರಣದಲ್ಲಿ ಗಾಂಜಾ ಸೇವನೆ, ಮಧ್ಯ ಸೇವನೆ, ಮಟಕಾ ದಂಧಾ, ಇಸ್ಪೀಟ್, ಜೂಜಾಟ, ಮಾಟ-ಮಂತ್ರದಂತಹ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಬೇಕಾಗಿದೆ. ರುದ್ರಭೂಮಿಯ ದಕ್ಷಿಣ ಭಾಗದಲ್ಲಿ ವಿಶಾಲವಾದ ಜಾಗವಿದ್ದು, ಗಿಡಗಂಟಿಗಳು ಬೆಳೆದಿರುವ ಹಿನ್ನಲೆಯಲ್ಲಿ ಅನೈತಿಕ ಚಟುವಟಿಕೆಗಳಿಗೆ ಅಂಟಿಕೊಂಡ ಜನರು ರುದ್ರಭೂಮಿ ಸುರಕ್ಷಾಗೋಡೆ ಒಡೆದು ಅದರೊಳಗೆ ಆಗಮಿಸಿ ಸಮಾಜದ ಸ್ವಾಸ್ಥ ಹಾಳು ಮಾಡುತ್ತಿದ್ದಾರೆ.
ನಿಯಂತ್ರಣಕ್ಕಾಗಿ ಅಂದಾಜು ಒಂದು ಕಿ.ಮೀ.ವರೆಗೆ ರುದ್ರಭೂಮಿ ಗೋಡೆಯ ಒಳಗಡೆ ಭಾಗದಲ್ಲಿ ಕಾಲುವೆ ಮಾದರಿಯಲ್ಲಿ ಆಳವಾದ ತಗ್ಗು ಮಾಡಿ ಮುಳ್ಳುಗಳಿಂದ ತುಂಬವ ಯೋಜನೆಯಾಗಿದೆ. ಇದಕ್ಕೆ ಜನರ, ಪೊಲೀಸ್ ಇಲಾಖೆ ಮತ್ತು ನಗರಸಭೆ ಸಹಿತ ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ.
ಯಶಸ್ವಿ ಮಾಡೋಣ.
“ನಗರದ ಹಿಂದು ರುದ್ರಭೂಮಿಯನ್ನು ಸಂಪೂರ್ಣ ಸ್ವಚ್ಚತೆ ಮಾಡುವ ಶ್ರಮದಾನದಲ್ಲಿ ಪ್ರತಿಯೊಬ್ಬರು ಜೊತೆಗೂಡಿ ಯಶಸ್ವಿ ಮಾಡಬೇಕಾಗಿದೆ. ಶ್ರಮದಾನ ಪ್ರತಿ ರವಿವಾರ ನಿರಂತರವಾಗಿ ನಡೆಯಲಿದ್ದು, ಯಾರಿಗೂ ಆಹ್ವಾನಿಸುವ ಅವಶ್ಯಕತೆಯಿಲ್ಲ. ಸ್ವಯಂ ಪ್ರೇರಿತರಾಗಿ ಪ್ರತಿ ರವಿವಾರ ಬೆಳಿಗ್ಗೆ 7 ಗಂಟೆಗೆ ಹಿಂದು ರುದ್ರಭೂಮಿಗೆ ಆಗಮಿಸಿ 10ಗಂಟೆವರೆಗೆ ನಡೆಯಲಿಉರವ ಶ್ರಮದಾನದಲ್ಲಿ ಭಾಗವಹಿಸಿ ಹಿಂದು ರುದ್ರಭೂಮಿಯನ್ನು ರಕ್ಷಣೆ ಮಾಡೋಣ.”
– ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು
ಮುತ್ತಿನಕಂತಿ ಹಿರೇಮಠ, ಜಮಖಂಡಿ

“ಶ್ರಾವಣಮಾಸದಲ್ಲಿ ನಗರದ ಓಲೇಮಠ ಹಮ್ಮಿಕೊಂಡಿರುವ ವಚನ ಶ್ರಾವಣ-25 ಕಾರ್ಯಕ್ರಮವನ್ನು ಹಿಂದು ರುದ್ರಭೂಮಿಯಲ್ಲಿ ಇಟ್ಟುಕೊಳ್ಳುವ ಮೂಲಕ ಜನರ ಮನದಲ್ಲಿರುವ ಸ್ಮಶಾನದ ಭಯ ಹೋಗಲಾಡಿಸಿ ಅನೈತಿಕ ಚಟುವಟಿಕೆ ನಿಯಂತ್ರಣ ಸಾಧ್ಯವಾಗಲಿದೆ. ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣಮಾಸ ಅತ್ಯಂತ ಪವಿತ್ರವಾಗಿದ್ದು, ಶ್ರಾವಣಮಾಸದ ಮೂಲಕ ಯುವಪೀಳಿಗೆಗೆ ಒಳ್ಳೆಯ ಸಂಸ್ಕಾರಗಳನ್ನು ನೀಡೋಣ.”
– ಪ.ಪೂ.ಆನಂದೇವರು ಓಲೇಮಠ, ಜಮಖಂಡಿ.

