ಆಲಮೇಲ-ರುಕುಂಪೂರ ರಸ್ತೆ ತೆರವು & ವಿವಿಧ ಸಮುದಾಯಗಳ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿ
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಧರಣಿ ಸತ್ಯಾಗ್ರಹ ೨ನೇ ದಿನಕ್ಕೆ
ಆಲಮೇಲ ರುಕುಂಪೂರ ರಸ್ತೆ ತೆರವು ಹಾಗೂ ವಿವಿಧ ಸಮುದಾಯಗಳ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬುಧವಾರದಿಂದ ಆರಂಭಗೊಂಡ ಅನಿರ್ದಿಷ್ಟಾವಧಿ ಸತ್ಯಾಗ್ರಹ ಗುರುವಾರ ೨ನೇ ದಿನಕ್ಕೆ ಕಾಲಿಟ್ಟಿತು.
ಪಟ್ಟಣದ ಬಸವೇಶ್ವರ ಸರ್ಕಲ್ ಬಳಿ ಸತ್ಯಾಗ್ರಹ ಟೆಂಟ್ ನಲ್ಲಿ ಹೋರಾಟಗಾರರು ಧರಣಿ ಕುಳಿತರು.
ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಸದಸ್ಯ ಸಂಜೀವಕುಮಾರ ಯಂಟಮಾನ ಮಾತನಾಡಿ, ‘ಆಲಮೇಲ ಪಟ್ಟಣದ ಪ್ರಮುಖ ರಸ್ತೆ ಇದಾಗಿದ್ದು, ಪಟ್ಟಣದಿಂದ ಪಕ್ಕದ ಹಳ್ಳಿಗಳಾದ ಗುಂದಗಿ, ಅಲಹಳ್ಳಿ, ಕಡಣಿ, ಮೊದಲಾದ ರಸ್ತೆಯು ವಿಶಾಲ ಅಳತೆಯನ್ನು ಹೊಂದಿವೆ, ಈ ರಸ್ತೆ ಮಾತ್ರ ಆರಂಭದಲ್ಲಿ ಕಡಮಿಯಾಗಿ ಮುಂದೆ ಅಗಲವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಈ ರಸ್ತೆಯನ್ನು ಅಕ್ರಮಣ ಮಾಡುವಲ್ಲಿ ಕೆಲವರು ಯಶಸ್ವಿಯಾಗಿರಬಹುದು, ಆದರೆ ಈ ರಸ್ತೆ ಸಮಪರ್ಕವಾಗಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಆಡಳಿತವರ್ಗ ನೋಡಿಕೊಳ್ಳಬೇಕು ಎಂದರು.
ತಳವಾರ ಸಮುದಾಯದ ಮುಖಂಡ ಪ್ರಭು ವಾಲಿಕಾರ ಮಾತನಾಡಿ ದೇವರಬಾವಿಯ ಜಾಗದ ಅತಿಕ್ರಮಣವೂ ಆಗಿದೆ. ಅದರ ವಿರುದ್ಧವು ಹೋರಾಟ ಮುಂದುವರೆಸುತ್ತಿದ್ದೇವೆ, ಎಂತಹ ಅಧಿಕಾರಿ ಬಂದರೂ ಕ್ರಮವಾಗುವವರೆಗೆ ನಾವು ಇಲ್ಲಿಂದ ಕದಲುವದಿಲ್ಲ. ಹೋರಾಟ ನಿರಂತರವಾಗಿರುತ್ತದೆ ಎಂದರು.
ಜಿ.ಪಂ ಮಾಜಿ ಸದಸ್ಯ ಬಿ.ಆರ್.ಎಂಟಮಾನ, ಶ್ರೀಶೈಲ ಮಠಪತಿ ಬಸವರಾಜ ತೆಲ್ಲೂರ, ಪಿ.ಟಿ. ಪಾಟೀಲ, ಶಿವು ತಳವಾರ, ಹರಿಶ ಯಂಟಮಾನ, ಶಿವು ಮೇಲೆನಮನಿ, ಬಸು ಹೂಗಾರ ಮೊದಲಾದವರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಫಲಿಸದ ಮನವೊಲಿಕೆ
ಆಲಮೇಲದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಹೋರಾಟದ ಕಾವು ಹೆಚ್ಚಾಗುತ್ತಿದೆ. ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದ ಮೇಲಾಧಿಕಾರಿಗಳ ಮನವೊಲಿಕೆಗೆ ಒಪ್ಪದ ಹೋರಾಟಗಾರರು ಪ್ರತಿಭಟನೆ ಮುಂದುವರಿಸಿದ್ದಾರೆ.
ರಸ್ತೆ ಸರ್ವೆ ಪ್ರಾರಂಭ:
ರುಕುಂಪೂರ ರಸ್ತೆಯನ್ನು ಅಳತೆ ಮಾಡಲು ಸಿಂದಗಿ ತಾಲ್ಲೂಕು ಭೂಮಾಪನ ಇಲಾಖೆಯ ಸಹಾಯಕ ನಿರ್ಧೇಶಕ ಎಸ್.ಎಸ್.ಅಗಸಬಾಳ ಅವರ ನೇತ್ರತ್ವದ ಬಳುಂಡಗಿ ಸೂಪರ್ ವೈಸರ್, ಗಂಗರೆಡ್ಡಿ ಭೂಮಾಪಕರು ಒಳಗೊಂಡ ತಂಡ ಸರ್ವೆಕಾರ್ಯ ನಡೆಸಿತು, ರಸ್ತೆಯ ಅಳತೆಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿ ಅಗಸಬಾಳ, ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ದಾಖಲೆಗಳ ಸ್ವರೂಪ ಆಧರಿಸಿ ಭೂಮಾಪನ ನಡೆಸುತ್ತಿದ್ದೇವೆ, ಹೆಚ್ಚಿನ ವಿವರಗಳ ವರದಿ ನೀಡುತ್ತೇವೆ ಎಂದು ಮಾಹಿತಿ ನೀಡಿದರು.

