ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಸಾಂಪ್ರದಾಯಿಕ ಸಾವಯವ ಕೃಷಿ ಪದ್ಧತಿಯನ್ನು ವೈಜ್ಞಾನಿಕ ಸಲಕರಣೆಗಳೊಂದಿಗೆ ಅಳವಡಿಸಿಕೊಳ್ಳುವುದು ಇಂದು ಅನಿವಾರ್ಯವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.
ಪಟ್ಟಣದ ಪಂಚಾಚಾರ್ಯ ಕಲ್ಯಾಣ ಮಂಟಪದಲ್ಲಿ ಸೋಮವಾರ ಜರುಗಿದ ರೈತ ಹುತಾತ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಇಂದು ಕೃಷಿ ಸಮುದಾಯದಲ್ಲಿ ಎತ್ತುಗಳ ಸಂತತಿ ನಶಿಸುತ್ತಿದೆ. ಹಿಂದೆ ಕುಟುಂಬದ ಬೇಡಿಕೆ ಅನುಗುಣವಾಗಿ ನಮ್ಮ ಕೃಷಿ ನೀತಿ ಇತ್ತು. ಆದರೆ ಇಂದು ಬದಲಾಗುತ್ತಿರುವ ಜನತೆಯ ಮನೋಧೋರಣೆಯ ಫಲವಾಗಿ ಕೃಷಿಯಲ್ಲಿ ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಾಗುತ್ತಿದೆ. ಮೀತಿಮಿರಿದ ಆಹಾರದ ಬೇಡಿಕೆಯಿಂದ ನಮ್ಮ ಮೂಲ ಕೃಷಿ ಪದ್ಧತಿಯನ್ನು ಕೈಬಿಟ್ಟ ಕಾರಣ ಕ್ಯಾನ್ಸರ್ನಂತ ರೋಗಗಳಿಗೆ ನಾವು ಬಲಿಯಾಗುತ್ತಿದ್ದೇವೆ. ಆದ್ದರಿಂದ ನಮ್ಮ ರೈತರು ಮೊದಲಿನಂತೆ ಸಾವಯವ ಕೃಷಿ ಚಟುವಟಿಕೆಗಳ ಕುರಿತು ಒಲವು ಬೆಳೆಸಿಕೊಳ್ಳಬೇಕು ಎಂದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ನಂದಿ ಕೃಷಿ ಚಿಂತಕ ಬಸವರಾಜ ಬಿರಾದಾರ ಮಾತನಾಡಿ, ಗೋವು ಹಾಗೂ ನಂದಿ ಸಂತತಿಯ ಮೇಲೆ ಕೃಷಿಯ ಭವಿಷ್ಯ ನಿಂತಿದೆ. ನಂದಿ ಸಂಪತ್ತು ಕಸಾಯಿಖಾನೆಗೆ ಹೋಗುವುದು ನಿಲ್ಲಬೇಕು. ಅದಕ್ಕಾಗಿ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಹೋರಾಟ ಅಗತ್ಯವಾಗಿದೆ ಎಂದರು.
ಸಿಂದಗಿ ಕ್ಷೇತ್ರದ ಮಾಜಿಶಾಸಕ ಶರಣಪ್ಪ ಸುಣಗಾರ ಹಾಗೂ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಮಾತನಾಡಿದರು.
ಸದಯ್ಯನಮಠದ ವೀರಗಂಗಾಧರಶ್ರೀ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ರೈತಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರಗೌಡ ಹಿರೇಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಿಂದ ಜೋಡೆತ್ತಿನ ಮೆರವಣಿಗೆ ಕೈಗೊಂಡು ನಂತರ ರೈತಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ನಂತರ ಅಗಲಿದ ಹುತಾತ್ಮ ರೈತರಿಗೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಇದೇ ಸಂದರ್ಭದಲ್ಲಿ ಜೋಡೆತ್ತಿನ ರೈತರು, ಮಾಜಿಸೈನಿಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ರಿಯಾಜ್ ಯಲಗಾರ, ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಬಿರಾದಾರ(ಜಲಕತ್ತಿ), ಸಿದ್ದಣ್ಣ ಹಿರೇಕುರುಬರ, ಎಮ್.ಎಸ್.ಅರ್ಜುಣಗಿ, ನಿವೃತ್ತ ಸೈನಿಕ ಸಂತೋಷಕುಮಾರ, ಸಂಗನಗೌಡ ಬಿರಾದಾರ, ಗುರುರಾಜ ಆಕಳವಾಡಿ, ಗುರುನಿಂಗಪ್ಪ ಸಣ್ಣಕ್ಕಿ ಹಾಗೂ ರೈತರು ಇದ್ದರು.

