ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಸ್ಪಷ್ಟನೆ B
(ಇಂದು (ಜುಲೈ ೨೨, ಮಂಗಳವಾರ ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷರಾಗಿ ಇತ್ತೀಚೆಗೆ ೧ವರ್ಷ ಪೂರೈಸಿದ ಸಂಗಮೇಶ ಬಬಲೇಶ್ವರ ಅವರ ೪೫ನೆಯ ಜನುಮದಿನ ಈ ನಿಮಿತ್ತ ಉದಯರಶ್ಮಿ ಪತ್ರಿಕೆ ಸಂಪಾದಕ ಅವರನ್ನು ಸಂದರ್ಶಿಸಿದ ವಿವರ ತಮ್ಮ ಅವಗಾಹನೆಗೆ..
ವಿಶೇಷ ಸಂದರ್ಶನ
– ಇಂದುಶೇಖರ ಮಣೂರ
ಸಂಪಾದಕ, ’ಉದಯರಶ್ಮಿ’
ಉದಯರಶ್ಮಿ ದಿನಪತ್ರಿಕೆ
ಕರ್ನಾಟಕ ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷರಾಗಿ ಒಂದೇ ವರ್ಷದ ಅವಧಿಯಲ್ಲಿ ಮಕ್ಕಳಿಗಾಗಿ ಇಂತಹದ್ದೊಂದು ಅಕಾಡೆಮಿ ಅಸ್ತಿತ್ವದಲ್ಲಿದೆ ಎಂದು ನಾಡಿನ ಬಹುತೇಕರಿಗೆ ಗೊತ್ತೇ ಇಲ್ಲದ ಸಂಗತಿಯನ್ನು ಇಂದು ತಮ್ಮ ಕಾರ್ಯದಕ್ಷತೆ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳಿಂದ ನಾಡಿನ ಮನೆ ಮಾತಾದವರು ಅಕಾಡೆಮಿಯ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರು. ಕಾಲಿಗೆ ಚಕ್ರಕಟ್ಟಿಕೊಂಡವರಂತೆ ನಾಡಿನಾದ್ಯಂತ ಸಂಚರಿಸಿ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತ ಹಲವಾರು ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಂಡು ಸಫಲತೆಯ ದೋಣಿಯಲ್ಲಿ ಪಯಣಿಸುತ್ತಿರುವ, ನಾಡಿನ ಮಕ್ಕಳ ಕಣ್ಮಣಿಯಾಗಿ ಹೊರಹೊಮ್ಮುತ್ತಿರುವ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರ ೪೫ನೇ ಜನ್ಮದಿನ (ಜು.೨೨) ನಾಳೆ ಇದೆ ಎಂದು ಗೊತ್ತಾದಾಗ ಅವರನ್ನು ಸಂದರ್ಶಿಸಲು ನಿಮ್ಮ ಉದಯರಶ್ಮಿ ಪತ್ರಿಕೆ ನಿರ್ಧರಿಸಿತು. ಜು. ೨೧ರ ಸಂಜೆ ಉದಯರಶ್ಮಿ ಸಂಪಾದಕ ಇಂದುಶೇಖರ ಮಣೂರ ಬಬಲೇಶ್ವರ ಅವರನ್ನು ಸಂದರ್ಶಿಸಲು ಅವರ ಸ್ವಗ್ರಹ ‘ಗೌರಮ್ಮ’ ನಿವಾಸಕ್ಕೆ ಧಾವಿಸಿದಾಗ ಬಸವಾದಿ ಶರಣರ ವಚನಗಳನ್ನು ಆಸ್ವಾದಿಸುತ್ತ ಸಂಗೀತದಲ್ಲಿ ಮೈಮರೆತ ಅವರಿಗೆ ಭಂಗ ತಂದದ್ದಕ್ಕೆ ಬೇಸರವಾದರೂ ಮನ್ನಿಸಲು ಹೇಳಿ ಅವರ ಸಂದರ್ಶನಕ್ಕೆ ಅಣಿಯಾದೆ.
ಈ ಕಿರು ಸಂದರ್ಶನದ ವಿವರಗಳನ್ನು ಯಥಾವತ್ತಾಗಿ ತಮ್ಮ ಮುಂದಿಡುತ್ತಿರುವೆ ಒಪ್ಪಸಿಕೊಳ್ಳಿ.
ಇಂದುಶೇಖರ: ತಮ್ಮ ದೃಷ್ಠಿಯಲ್ಲಿ ಬಾಲವಿಕಾಸ ಅಕಾಡೆಮಿಯ ಜವಾಬ್ದಾರಿಗಳೇನು?
ಬಬಲೇಶ್ವರ: ಕರ್ನಾಟಕ ಬಾವಿಕಾಸ ಅಕಾಡೆಮಿ ಒಂದು ಶಾಸನಬದ್ಧ ಸಂಸ್ಥೆ. ಮಕ್ಕಳ ಸೃಜನಶೀಲ ಅಭಿವ್ಯಕ್ತಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವುದು, ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು, ಮಕ್ಕಳಲ್ಲಿ ಸಂಸ್ಕಾರಯುತ ವ್ಯಕ್ತಿತ್ವ ನಿರ್ಮಾಣ ಮಾಡಲು ಪೂರಕವಾದ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವುದು, ಆ ಮೂಲಕ ಭವಿಷ್ಯದ ಆಶಾಕಿರಣವಾಗಿರುವ ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ರೂಪಿಸುವುದು ಈ ಅಕಾಡೆಮಿಯ ಗುರುತರ ಜವಾಬ್ದಾರಿಯಾಗಿದೆ. ಈ ದಿಸೆಯಲ್ಲಿ ನಾನು ಪ್ರಾಂಜಲ ಮನದಿಂದ ನನ್ನನ್ನು ತೂಡಗಿಸಿಕೊಂಡಿರುವೆ.
ಇಂದುಶೇಖರ: ಅಕಾಡೆಮಿಗೆ ಅನುದಾನದ ಕೊರತೆ ಇದೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಈ ಕೊರತೆಯನ್ನು ಹೇಗೆ ತುಂಬುತ್ತಿದ್ದೀರಿ?
ಬಬಲೇಶ್ವರ: ಅನುದಾನದ ಬಗ್ಗೆ ನಾನು ಯಾವತ್ತೂ ತಲೆಕೆಡಿಸಿಕೊಂಡವನಲ್ಲ ಮಕ್ಕಳೇ ದೊಡ್ಡ ಸಂಪನ್ಮೂಲ ಎಂದು ನಂಬಿರುವವನು ನಾನು ಮಕ್ಕಳ ಸೇವಾಸಕ್ತಿ ಹೊಂದಿರುವ ವ್ಯಕ್ತಿಗಳನ್ನು ಹಾಗೂ ಸಂಸ್ಥೆಗಳನ್ನು ಪ್ರೇರೇಪಿಸಿ ಅವರನ್ನು ಮಕ್ಕಳ ಸೇವೆಗೆ ಅಣಿಗೊಳಿಸಿ ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳುತ್ತಿರುವೆ.
ಇಂದುಶೇಖರ: ಅಧ್ಯಕ್ಷರಾಗಿ ತಾವು ಕೈಗೊಂಡ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದೆರಡನ್ನು ಹೆಸರಿಸುವಿರಾ?
ಬಬಲೇಶ್ವರ: ನಾಡಿನ ಸಾಹಿತ್ಯಸಕ್ತ ಮಕ್ಕಳನ್ನು ಧಾರವಾಡದ ರೆಸಾರ್ಟೊಂದರಲ್ಲಿ ಸೇರಿಸಿ ಕಥಾಕಮ್ಮಟವನ್ನು ಏರ್ಪಡಿಸಿದ್ದು, ನಾಡಿನ ಯೋಗ ಸಾಧಕ ಮಕ್ಕಳನ್ನು ಕರೆಸಿ ಮಕ್ಕಳಿಗೆ ಯೋಗದ ಮಹತ್ವ ಕುರಿತು ಅರಿವು ಮೂಡಿಸಲು ವಿಜಯಪುರದಲ್ಲಿ ರಾಜ್ಯಮಟ್ಟದ ಯೋಗೋತ್ಸವ ಕಾರ್ಯಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ಸ್ಪೂರ್ತಿ ಮಾರ್ಗದರ್ಶನ ಕೈಪಿಸಿ ರೂಪಿಸಿ ವಿತರಣೆ ಸೇರಿದಂತೆ ಇತ್ಯಾದಿ ಕಾರ್ಯಕ್ರಮಗಳು ನನಗೆ ತೃಪ್ತಿ ತಂದಿವೆ.
ಇಂದುಶೇಖರ: ಸ್ಪೂರ್ತಿ ಮಾರ್ಗದರ್ಶನ ಕೈಪಿಡಿಯಂತಹ ಬಹುವೆಚ್ಚದ ತಮ್ಮ ಯೋಜನೆಯ ಕನಸಿಗೆ ರೆಕ್ಕೆ ಮೂಡಿದ್ದು ಹೇಗೆ?
ಬಬಲೇಶ್ವರ: ಎಸ್ಸೆಸ್ಸೆಲ್ಸಿ ಮಕ್ಕಳ ಫಲಿತಾಂಶ ಸುಧಾರಣೆಗೆ ಬಾಲವಿಕಾಸ ಅಕಾಡೆಮಿಯಿಂದ ಏನು ಮಾಡಲು ಸಾಧ್ಯ? ಎಂದು ಯೋಚಿಸಿ, ಶಿಕ್ಷಣಾಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ಎಸ್ಸೆಸ್ಸೆಲ್ಸಿಯ ಆರು ವಿಷಯಗಳ ತಜ್ಞರೊಂದಿಗೆ ಚರ್ಚಿಸಿ ಈ ಸ್ಪೂರ್ತಿ ಕೈಪಿಡಿ ರಚನೆಗೆ ಮುಂದಾದೆ. ಇದು ಪಾಸಿಂಗ್ ಪ್ಯಾಕೇಜ್ ಅಲ್ಲ, ಇದೊಂದು ಮಾರ್ಗದರ್ಶನ ಕೈಪಿಡಿ. ಇದು ಶಿಕ್ಷಕರಿಗೆ ಸ್ಪೂರ್ತಿಯಾಗಿ, ಮಕ್ಕಳಿಗೆ ಪ್ರೇರಣೆಯಾಗಿ ಮಾರ್ಗದರ್ಶನ ಮಾಡುತ್ತದೆ.
ಇಂದುಶೇಖರ: ಇದಕ್ಕೆ ಸಂಪನ್ಮೂಲ ಕ್ರೋಡಿಕರಿಸಿದ್ದು ಹೇಗೆ?
ಬಬಲೇಶ್ವರ: ಇದಕ್ಕೆ ಅನುದಾನ ಹೇಗೆ ಹೊಂದಿಸುವುದು ಎಂದು ಯೋಚಿಸಿ ಇಂತಹ ಸಾರ್ಥಕ ಕಾರ್ಯಗಳಿಗೆ ಹಿಂದೆ ಮುಂದೆ ಯೋಚಿಸದೆ ಕೈಜೋಡಿಸುವ ವಿಜಯಪುರದ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು, ಆತ್ಮೀಯರಾದ ಬಸವರಾಜ ಕೌಲಗಿ ಅವರೊಂದಿಗೆ ವಿಚಾರ ವಿನಿಮಯ ಮಾಡಿದಾಗ, ಈ ಆರು ವಿಷಯಗಳ ಕೈಪಿಡಿಗಳ ಮುದ್ರಣ ವೆಚ್ಚ ಭರಿಸಲು ಮುಂದೆ ಬಂದರು. ಇನ್ನೋರ್ವ ಆತ್ಮೀಯರು, ಚಾಣಕ್ಯ ಕರಿಯರ್ ಅಕಾಡೆಮಿ ಸಂಸ್ಥಾಪಕ ಎನ್.ಎಂ ಬಿರಾದಾರ ಅವರು, ಅಕ್ಷರ ಜೋಡನೆ(ಡಿಟಿಪಿ) ಪುಟ ವಿನ್ಯಾಸಗಳ ಜವಾಬ್ದಾರಿ ವಹಿಸಿಕೊಂಡರು. ವಿಜಯಪುರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಜಿಲ್ಲೆಯ ಶಿಕ್ಷಕರು, ವಿಷಯ ಪರಿಣಿತರು ಸಂಪನ್ಮೂಲ ವ್ಯಕ್ತಿಗಳಾಗಿ ನಿಸ್ವಾರ್ಥದಿಂದ ಕಾರ್ಯ ನಿರ್ವಹಿಸಿದ್ದರಿಂದಾಗಿ ಈ ಕೈಪಿಡಿಗಳು ಹೊರಬರಲು ಸಾಧ್ಯವಾಯಿತು.
ಇಂದುಶೇಖರ: ಸದ್ದುಗದ್ದಲವಿಲ್ಲದೇ ಕಾರ್ಯರೂಪಕ್ಕೆ ತಂದ ತಮ್ಮ ಈ ಯೋಜನೆ ಕೇವಲ ವಿಜಯಪುರ ಜಿಲ್ಲೆಗೆ ಮಾತ್ರ ಸೀಮಿತವೇ?
ಬಬಲೇಶ್ವರ: ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂದರ್ಭ ಈ ‘ಸ್ಪೂರ್ತಿ’ ಕೈಪಿಡಿಗಳನ್ನು ಹೊರತಂದು ಮಿಜಯಪುರ ಜಿಲ್ಲೆಯ ಎಲ್ಲ ಅನುದಾನ ಮತ್ತು ಅನುದಾನರಹಿತ ಪ್ರೌಢಶಾಲೆಗಳಿಗೆ ವಿತರಿಸಿದ್ದು ಅಕಾಡೆಮಿಯ ಹೆಗ್ಗಳಿಕೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಇದನ್ನು “ಪೈಲೆಟ್ ಪ್ರೊಜೆಕ್ಟ್” ಆಗಿ ಬಾಗಲಕೋಟೆ, ಬೆಳಗಾವಿ ಹಾಗೂ ಚಿಕ್ಕೋಡಿ ಈ ಮೂರು ಶೈಕ್ಷಣಿಕ ಜಿಲ್ಲೆಗಳಿಗೆ ವಿಸ್ತರಿಸುವ ಗುರಿ ಹೊಂದಿರುವೆ. ದಾನಿಗಳು ಕೈಜೋಡಿಸಲು ಮುಂದೆ ಬಂದರೆ ಈ ಯೋಜನೆಯನ್ನು ರಾಜ್ಯದ್ಯಂತ ವಿಸ್ತರಿಸಲು ನಿರ್ಧರಿಸಿರುವೆ.
ಇಂದುಶೇಖರ: ಅಕಾಡೆಮಿಯ ಅಧ್ಯಕ್ಷರಾಗಿ ತಮ್ಮ ಕಾರ್ಯವೈಕರಿ ತಮಗೆ ತೃಪ್ತಿ ತಂದಿದೆಯೇ?
ಬಬಲೇಶ್ವರ: ನನ್ನ ಕಾರ್ಯಗಳಿಗೆ ಎಲ್ಲೆಡೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದು ಬರುವುದು ಕಂಡಾಗ ನನ್ನ ಸೇವೆ ಸಾರ್ಥಕ ಎನಿಸಿದೆ. ಪ್ರತಿಪಲಾಕ್ಷೆ ಇಲ್ಲದೇ ಸಮರ್ಪಣಾ ಮನೋಭಾವದಿಂದ ಕೆಲಸ ಮಡುತ್ತಿರುವ ನನಗೆ ನನ್ನ ಸೇವೆ ಆತ್ಮತೃಪ್ತಿ ತಂದಿದೆ.

ಕೇಳುವ ನಾಲಿಗೆಗೆ ನಿಯತ್ತಿದ್ದರೆ ಕೊಡುವ ಕೈಗಳಿಗೆ ಬಡತನವಿಲ್ಲ
ಬಾಲವಿಕಾಸ ಅಕಾಡೆಮಿಯ ಅಧ್ಯಕ್ಷನಾಗಿ ಜವಾಬ್ದಾರಿ ಹೊತ್ತ ಮೇಲೆ ಸಾರ್ಥಕ ಸೇವೆ ಮಾಡುವುದು ನನ್ನ ಅಪೇಕ್ಷೆಯಾಗಿತ್ತು. ಜವಾಬ್ದಾರಿ ಅನ್ನೋದು ಸರಕಾರ ಅನುದಾನ ಕೊಟ್ಟರೇನೇ ಮಾಡಬೇಕೆಂದೇನಿಲ್ಲ. ಅನುದಾನದ ನೆರಳಲ್ಲಿಯೇ ನಾವು ಅಭಿವೃದ್ಧಿ ಮಾಡಲು ಸಾಧ್ಯ ಎಂಬ ಭ್ರಮೆ ಅನೇಕರಲ್ಲಿದೆ. ಇದು ತಪ್ಪು. ಮಕ್ಕಳ ಸೇವೆ ಮಾಡಲು, ಅವರಿಗಾಗಿ ರಚನಾತ್ಮಕ ಕಾರ್ಯಗಳನ್ನು ಹಮ್ಮಿಕೊಳ್ಳಲು ಅನೇಕ ಮಕ್ಕಳ ಸೇವಾಕಾಂಕ್ಷಿಗಳು ಮತ್ತು ಸಂಘಸಂಸ್ಥೆಗಳು ಮುಂದೆ ಬರುತ್ತವೆ. “ಕೇಳುವ ನಾಲಿಗೆ ನಿಯತ್ತಾಗಿದ್ದರೆ “ಕೊಡುವ ಕೈಗಳಿಗೆ ಬಡತನವಿಲ್ಲ” ಎಂಬಂತೆ ನನ್ನ ಕಾರ್ಯಗಳಿಗೆ ಅನೇಕ ದಾನಿಗಳು ಕೈ ಜೋಡಿಸಿದ್ದಾರೆ. ಇದಕ್ಕೆ ನಾನೇ ನಿದರ್ಶನ

ಮಕ್ಕಳ ಹೆಸರಿನ ಭೋಗಸ್ ಸಂಸ್ಥೆಗಳಿಗೆ ಬಬಲೇಶ್ವರ ಚಾಟಿಯೇಟು!
ಮಕ್ಕಳೊಂದಿಗಿರುವ ಫೋಟೊ ತೋರಿಸಿ ಕಾರ್ಯಕ್ರಮದ ಹೆಸರೇಳಿ ಅಕಾಡೆಮಿ ಅನುದಾನ ದುರುಪಯೋಗಪಡಿಸಿಕೊಳ್ಳುವ ಸಂಘ ಸಂಸ್ಥೆಗಳನ್ನು ಅಕಾಡೆಮಿಯಿಂದ ದೂರ ಇಟ್ಟಿರುವೆ. ಅಂತಹ ವ್ಯಕ್ತಿಗಳಿಗೆ ಅಕಾಡೆಮಿ ಹಾಗೂ ನನ್ನ ಕುರಿತು ಅಸಮಾಧಾನವಿರುವುದು ಸಹಜ. ಇದಕ್ಕೆಲ್ಲ ನಾನು ತಲೆಕೆಡಿಸಿಕೊಳ್ಳದೇ ಮುನ್ನುಗ್ಗುತ್ತಿರುವೆ. ನನ್ನ ನಡೆ ಅನೇಕರಿಗೆ ಇರಿಸು-ಮುನಿಸು ಉಂಟುಮಾಡಿದೆ. ಆದರೆ ಅವರ ಟೀಕೆಗಳಿಗೆ, ಗೊಡ್ಡು ಬೆದರಿಕೆಗಳಿಗೆ ಸೊಪ್ಪು ಹಾಕದೇ ಮುಂದುವರೆದಿದ್ದರಿಂದ ಅಕಾಡೆಮಿಯಲ್ಲಿ ಪಾರದರ್ಶಕ ಆಡಳಿತ ಸಾಧ್ಯವಾಗಿದೆ ಎನ್ನುತ್ತಾರೆ ಅಧ್ಯಕ್ಷ ಸಂಗಮೇಶ ಬಬಲೇಶ್ವರ.

ಸಲಹೆ ಸೂಚನೆಗಳಿಗೆ ಮುಕ್ತ ಸ್ವಾಗತ
ಬಾಲವಿಕಾಸ ಅಕಾಡೆಮಿಗಾಗಿ ನಿಸ್ವಾರ್ಥದಿಂದ ಕೆಲಸ ಮಾಡುವವರಿಗೆ, ಅಕಾಡೆಮಿ ಕಾರ್ಯಗಳಿಗೆ ಕೈ ಜೋಡಿಸುವ ಮನಸುಗಳಿಗೆ ಅಕಾಡೆಮಿ ೨೪*೭ ಬಾಗಿಲು ತೆರೆದಿರುತ್ತದೆ. ಅಕಾಡೆಮಿಯ ರಚನಾತ್ಮಕ ಕಾರ್ಯಗಳಿಗೆ ಸಲಹೆ-ಸೂಚನೆಗಳನ್ನು ನೀಡಲು ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಕೋರಿದ್ದಾರೆ ಸಂಗಮೇಶ ಬಬಲೇಶ್ವರ.

