ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್, ಲೈಟಿಂಗ್, ಧ್ವನಿವರ್ಧಕ & ಡೆಕೋರೇಶನ್ ಮಾಲೀಕರ ಸಂಘದ ಕಾರ್ಯಕ್ರಮದಲ್ಲಿ ಸಚಿವ ಶಿವಾನಂದ ಪಾಟೀಲ ಶ್ಲಾಘನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಶಾಮೀಯಾನಾ, ಪೆಂಡಾಲ್, ಲೈಟಿಂಗ್, ಡೆಕೋರೇಶನ್ ಮಾಲೀಕರು ಸಮಾಜದಲ್ಲಿ ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ಸರ್ಕಾರದ ಮೇಲೆ ಭಾರ ಕಡಿಮೆ ಆಗಿದೆ ಎಂದು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ನಗರದ ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಹಿಂಭಾಗದ ಆಲಕುಂಟೆ ಪ್ರದೇಶದಲ್ಲಿ ಹಮ್ಮಿಕೊಂಡಿರುವ ಉತ್ತರ ಕರ್ನಾಟಕ ಶಾಮಿಯಾನಾ ಸಪ್ಲಾಯರ್, ಲೈಟಿಂಗ್, ಧ್ವನಿವರ್ಧಕ ಹಾಗೂ ಡೆಕೋರೇಶನ್ ಮಾಲೀಕರ ಸಂಘ ಹಮ್ಮಿಕೊಂಡಿದ್ದ ವಿಜಯಪುರ ಉತ್ಸವದ ವಸ್ತು ಪ್ರದರ್ಶನದಲ್ಲಿ ಅದೃಷ್ಟದ ಬಹುಮಾನ ವಿತರಿಸಿ ಮಾತನಾಡಿದರು.
ದೇಶದಲ್ಲಿರುವ ಜನಸಂಖ್ಯೆಯಲ್ಲಿ ಸರ್ಕಾರವೇ ಎಲ್ಲರಿಗೂ ಉದ್ಯೋಗ ನೀಡಲು ಸಾಧ್ಯವಿಲ್ಲ. ದೇಶದಲ್ಲಿ ಶೇ.93 ಕ್ಕಿಂತ ಅಧಿಕ ಜನರಿಗೆ ಉದ್ಯೋಗವಿಲ್ಲ. ಆದರೆ ಪೆಂಡಾಲ್, ಶಾಮೀಯಾನಾ ಮಾಲೀಕರು ವಿಶೇಷವಾಗಿ ಕರ್ನಾಟಕ ರಾಜ್ಯದಲ್ಲಿ 2 ಲಕ್ಷ ಜನರಿಗೆ ಉದ್ಯೋಗ ನೀಡಿದ್ದಾರೆ. ಇದು ಸರ್ಕಾರದ ಮೇಲೆ ಉದ್ಯೋಗ ನೀಡುವ ಒತ್ತಡ ಕಡಿಮೆ ಮಾಡಿದೆ ಎಂದರು.
ನೀವು ನಿಮ್ಮ ಸಾಮಗ್ರಿಗಳನ್ನು ದಾಸ್ತಾನು ಮಾಡಿಕೊಳ್ಳಲು ವಿಸ್ತಾರವಾದ ಗೋದಾಮು ಬೇಕಿದೆ. ಇದಕ್ಕಾಗಿ ನಿಮ್ಮ ಸಂಘಟನೆಯಿಂದ ಪತ್ರ ಬರೆದರೆ ಕಡಿಮೆ ದರದಲ್ಲಿ ಬಿಡಿಎ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಒಂದೊಮ್ಮೆ ನೀವೇ ಜಮೀನು ಖರೀದಿಸಿ, ಕೃಷಿಯೇತರ ಭೂಮಿ ಪರಿವರ್ತನೆಗೆ ಮುಂದಾದರೂ ಅದಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘಟನೆಯ ಪ್ರಮುಖರಾದ ಅಪ್ಪಣ್ಣ, ಅಮರೇಶ ಹಿರೇಮಠ, ಶಿವಾನಂದ ಮಾನಕರ, ಪ್ರಕಾಶ, ಚನ್ನಬಸಪ್ಪ ಗಸ್ತಿ, ಲಕ್ಷ್ಮಣ ದಿಗ್ಗಾವಿ, ಪ್ರಕಾಶ, ಬಷೀರ ಅಹ್ಮದ್ ಬಾಂಗಿ, ದ್ಯಾವಣ್ಣ ಬಜಂತ್ರಿ, ಅಮರಸಿಂಗ್ ರಜಪೂತ ಸೇರಿದಂತೆ ಇತರರು ಉಪಸ್ಥಿತರಿದ್ದರು.

