ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ಕಳೆದರೆಡು ದಿನಗಳಿಂದ ಮಳೆ ಜೋರಾಗಿ ಆಗಾಗ ಬರುತ್ತಿದೆ. ಮಳೆ ನೀರು ಮತ್ತು ಚರಂಡಿ ನೀರು ಹರಿದು ಬರುತ್ತಿರುವ ಸ್ಥಳಗಳಲ್ಲಿ ವಾಸಿಸುವವರ ಮನೆಗಳಿಗೆ ನೀರು ನುಗ್ಗಿ ಹಾನಿಯಾಗುವ ಸಂಭವವಿರುತ್ತದೆ. ಕಳೆದ ಜೂನ್ ತಿಂಗಳಲ್ಲಿ ಇದೇ ರೀತಿಯಲ್ಲಿ ಪಟ್ಟಣದಲ್ಲಿ ಜೋರಾಗಿ ಸುರಿದ ಮಳೆಯಿಂದಾಗಿ ಪಟ್ಟಣದ ಲಕ್ಷ್ಮೀ ನಗರದ ಹೊಲ-ಗದ್ದೆಗಳಿಗೆ ಹೊಂದಿಕೊಂಡಿರುವ ಜಾಗೆಯಲ್ಲಿ ಅನಧಿಕೃತ ಮನೆ, ಚಪ್ಪರ ಹಾಕಿಕೊಂಡು ವಾಸಿಸುತ್ತಿರುವ ಜನರ ಮನೆಗಳಿಗೆ ಮಳೆ ನೀರು ನುಗ್ಗಿ ಹಾನಿ ಉಂಟು ಮಾಡಿತ್ತು. ಮತ್ತೆ ಇದೀಗ ಮಳೆ ಜೋರಾಗಿ ಸುರಿಯುವ ಮುನ್ಸೂಚನೆ ಇರುವದರಿಂದಾಗಿ ನೀರು ಜೋರಾಗಿ ಹರಿದು ಬರುವ ಸ್ಥಳಗಳಲ್ಲಿ ಅನಧಿಕೃತವಾಗಿ ಮನೆ ಇಲ್ಲವೇ ಚಪ್ಪರ ಹಾಕಿಕೊಂಡು ವಾಸಿಸುವವರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಒಂದು ವೇಳೆ ಅವರು ಸ್ಥಳಾಂತರಗೊಳ್ಳದೇ ಹೋದರೆ ಮುಂದೆ ಆಗುವ ಅನಾಹುತಗಳಿಗೆ ಪುರಸಭೆ ಜವಾಬ್ದಾರವಾಗುವುದಿಲ್ಲ. ಇಂತಹ ಸ್ಥಳಗಳಲ್ಲಿ ಅನಧಿಕೃತವಾಗಿ ವಾಸಿಸುವ ಕುಟುಂಬಗಳು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗಬೇಕೆಂದು ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

