ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯದಲ್ಲಿ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ಹಾಗೂ ವಿವಿಧ ಬಸವಪರ ಸಂಘಟನೆಗಳು ಸೆ.೧ ರಂದು ಬಸವ ಸಂಸ್ಕ್ರತಿ ಅಭಿಯಾನದಂಗವಾಗಿ ಬಸವೇಶ್ವರ ಜನಿಸಿದ ಬಸವನಬಾಗೇವಾಡಿಯಿಂದ ಬಸವ ರಥ ಯಾತ್ರೆಗೆ ಚಾಲನೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿವೆ. ಈ ಕಾರ್ಯಕ್ರಮ ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರ ಸಂಘಟನೆಗಳು ಸಹ ಭಾಗಿಯಾಗುವ ಮೂಲಕ ಅಭಿಯಾನದ ಯಾತ್ರೆ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಈಚೆಗೆ ಬಸವ ಸಂಸ್ಕ್ರತಿ ಅಭಿಯಾನದಂಗವಾಗಿ ಬಸವನಬಾಗೇವಾಡಿಯಲ್ಲಿ ಸೆ. ೧ ರಂದು ಹಮ್ಮಿಕೊಂಡಿರುವ ಬಸವ ರಥಯಾತ್ರೆ ಚಾಲನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಈಚೆಗೆ ಕರೆಯಲಾಗಿದ್ದ ಮಹಿಳಾ ಸಂಘಟನೆಗಳ ಪದಾಧಿಕಾರಿಗಳ ಹಾಗೂ ಸದಸ್ಯರ ಸಭೆಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಸೆ.೧ ರಂದು ನಡೆಯುವ ಕಾರ್ಯಕ್ರಮಕ್ಕೆ ನಾಡಿನ ವಿವಿಧ ಭಾಗಗಳಿಂದ ಅನೇಕ ಮಠಾಧೀಶರರು, ವಿದ್ವಾಂಸರು ಆಗಮಿಸುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ಸೇರಿದಂತೆ ಶರಣರಿಗೆ ಸಂಬಂಧಪಟ್ಟಂತೆ ವಿಚಾರಗೋಷ್ಠಿ, ವಚನ ಸಂಗೀತ ಕಾರ್ಯಕ್ರಮ ಹಾಗೂ ಸಾಣೇಹಳ್ಳಿ ಮಠದ ಶಿವ ಸಂಚಾರದಿಂದ ನಾಟಕ ಪ್ರದರ್ಶನವಾಗಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ ಮಾತನಾಡಿ, ಇಡೀ ಜಗತ್ತಿಗೆ ಸಮಾನತೆ, ದಾಸೋಹ ಸಂದೇಶ ನೀಡುವ ಮೂಲಕ ಇಡೀ ಜಗತ್ತನ್ನು ಪ್ರೀತಿಯಿಂದ ಕಂಡ ಬಸವೇಶ್ವರರು ಜನಿಸಿದ ಈ ಪುಣ್ಯಭೂಮಿಯಿಂದ ಸೆ.೧ ರಿಂದ ಬಸವ ಸಂಸ್ಕ್ರತಿ ಅಭಿಯಾನ ಆರಂಭವಾಗುತ್ತಿರುವ ವಿಷಯ ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಬಸವ ಸಂಸ್ಕ್ರತಿ ಅಭಿಯಾನ ನಮ್ಮ ಹಬ್ಬವೆಂಬಂತೆ ಎಲ್ಲರೂ ಭಾಗವಹಿಸುವ ಮೂಲಕ ಯಶಸ್ವಿಗೊಳಿಸಬೇಕು. ಈ ನಿಟ್ಟಿನಲ್ಲಿ ಎಲ್ಲ ಮಹಿಳೆಯರು ಒಂದಾಗಿ ಕೆಲಸ ಮಾಡೋಣವೆಂದ ಅವರು, ಅಭಿಯಾನದ ಯಶಸ್ವಿಗೆ ಪ್ರತಿಯೊಬ್ಬರೂ ಸಂಪೂರ್ಣವಾಗಿ ಭಾಗವಹಿಸುವ ಅಗತ್ಯವಿದೆ ಎಂದರು.
ಲಿಂಗಾಯತ ಮಹಾಸಭಾದ ಕಾರ್ಯಾಧ್ಯಕ್ಷ ವಿವೇಕಾನಂದ ಕಲ್ಯಾಣಶೆಟ್ಟಿ ಮಾತನಾಡಿ, ಪ್ರಥಮವಾಗಿ ಜಗತ್ತಿನಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವನ್ನು ಕೊಟ್ಟ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ನಾವೆಲ್ಲರೂ ಬಸವಣ್ಣನವರ ಋಣ ತೀರಿಸಬೇಕಾಗಿದೆ. ಬಸವ ಸಂಸ್ಕ್ರತಿ ಯಾತ್ರೆ ಯಶಸ್ವಿಗೆ ನಾವೆಲ್ಲರೂ ಒಂದಾಗಿ ಕೆಲಸ ಮಾಡುವ ಮೂಲಕ ರಾಜ್ಯವೇ ನಮ್ಮ ಕಡೆ ನೋಡುವಂತೆ ಆಗಬೇಕು. ಎಲ್ಲ ಮಹಿಳಾ ಸಂಘಟನೆಗಳು ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಬೇಕೆಂದರು.
ಸಭೆಯಲ್ಲಿ ಕದಳೆ ವೇದಿಕೆ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ, ಅಕ್ಕಬಳಗದ ಸದಸ್ಯರಾದ ಮಹಾದೇವಿ ಬಿರಾದಾರ, ಬಾಲಕ್ಕ ಬೆಣ್ಣೂರ, ನೀಲಮ್ಮ ಝಳಕಿ, ರಾಜಶ್ರೀ ಯಳಮೇಲಿ, ಪುಷ್ಪಾ ಹೂಗಾರ, ಶಾರದಾ ತೋಟದ, ಕಮಲಕ್ಕ ಸಜ್ಜನ, ಲಲಿತಾ ಮಿಣಜಗಿ ಇತರರು ಭಾಗವಹಿಸಿದ್ದರು.

