ಉದಯರಶ್ಮಿ ದಿನಪತ್ರಿಕೆ
ದೇವರ ಹಿಪ್ಪರಗಿ: ಮಕ್ಕಳು ತಮ್ಮ ತರಗತಿಗೆ ಅನುಗುಣವಾಗಿ ಗುಣಮಟ್ಟದ ಶಿಕ್ಷಣ ಪಡೆಯುವುದು ಅವರ ಪ್ರಮುಖ ಹಕ್ಕುಗಳಲ್ಲಿ ಒಂದಾಗಿದೆ. ಎಂದು ಸ್ನೇಹ, ಐಎಲ್ಪಿ ಸಂಯೋಜಕ ಸಾಗರ ಘಾಟಗೆ ಹೇಳಿದರು.
ತಾಲ್ಲೂಕಿನ ಕುದರಗೊಂಡ ಗ್ರಾಮದಲ್ಲಿ ಗುರುವಾರ ವಿದ್ಯಾಸಾಥಿ ಕಲಿಕಾ ಕೇಂದ್ರ ಉದ್ಘಾಟಿಸಿ ಮಾತನಾಡಿದರು.
ತಾಲ್ಲೂಕಿನ ಒಟ್ಟು ೧೫ ಗ್ರಾಮಗಳಲ್ಲಿ ವಿದ್ಯಾಸಾಥಿ ಕಲಿಕಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಶಾಲಾ ಅವಧಿ ಹೊರತುಪಡಿಸಿ ಹೆಚ್ಚಿನ ಕಲಿಕೆ ಒದಗಿಸಲು ಸೇವಾ ಮನೋಭಾವನೆಯ ವಿದ್ಯಾಸಾಥಿ ಸ್ವಯಂ ಸೇವಕರನ್ನು ಆಯ್ಕೆ ಮಾಡಲಾಗಿದೆ. ಇವರ ಕಾರ್ಯ ತಳಪಾಯ ಕಲಿಕಾ ಮೌಲ್ಯಮಾಪನ ಮಾಡಿ ಪ್ರತಿ ಕೇಂದ್ರಕ್ಕೆ ೩೦ ಮಕ್ಕಳನ್ನು ಗುರುತಿಸುವುದಾಗಿದೆ. ಇಂದಿನ ದಿನಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವುದು ಪ್ರತಿಯೊಬ್ಬ ಪಾಲಕರ ಜವಾಬ್ದಾರಿಯಾಗಿದೆ. ಶಾಲಾ ಅವಧಿಯನ್ನು ಹೊರತುಪಡಿಸಿ, ಕೇಂದ್ರ ನಿಗದಿಪಡಿಸಿದ ಸಮಯಕ್ಕೆ ಮಕ್ಕಳನ್ನು ಕಳುಹಿಸುವಂತೆ ಪಾಲಕರಿಗೆ ತಿಳಿಸಿದರು.
ಶಾಲೆಯ ಸಹಶಿಕ್ಷಕ ಎಸ್.ಎಸ್.ಬಿರಾದಾರ ಮಾತನಾಡಿ ನಾವು ಎಲ್ಲಾ ಮಕ್ಕಳಿಗೆ ಕಲಿಕೆಯಲ್ಲಿ ಆಸಕ್ತಿ ಮೂಡಿಸಿ ಚಟುವಟಿಕೆ ಮೂಲಕ ಶಿಕ್ಷಣ ಕೊಡುತ್ತೇವೆ ಮತ್ತು ನಾವು ಪ್ರತಿ ಗುರುವಾರ ಮಕ್ಕಳಿಗೆ ಕ್ವಿಜ್ ಕಾರ್ಯಕ್ರಮ ಆಯೋಜಿಸುತ್ತೇವೆ. ಇದರಲ್ಲಿ ಆಯ್ಕೆಯಾದ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನಗಳನ್ನು ನೀಡುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಶಾಲೆಯನ್ನು ಒಂದು ಮಾದರಿ ಶಾಲೆಯನ್ನಾಗಿ ಮಾಡುವ ಗುರಿ ಹೊಂದಲಾಗಿದೆ ಎಂದರು. ಇದಕ್ಕೆ ಪಾಲಕರ ಸಹಿತ ಎಲ್ಲರ ಸಹಕಾರ ಬಹಳ ಪ್ರಮುಖವಾಗಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಬಾಬುಗೌಡ ಬಿರಾದಾರ, ಎಸ್ಡಿಎಮ್ಸಿ ಅಧ್ಯಕ್ಷ ಲಕ್ಕಪ್ಪ ಪೂಜಾರಿ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾಂತು ರಾಠೋಡ, ಮುಖ್ಯಶಿಕ್ಷಕ ಎಸ್.ಆರ್.ಮಾದರ, ವಿದ್ಯಾಸಾಥಿ ಸ್ವಯಂ ಸೇವಕ ತುಳಜಾರಾಮ ಹರಿಜನ, ಸ್ನೇಹ-ಐಎಲ್ಪಿ ಸಂಪನ್ಮೂಲ ವ್ಯಕ್ತಿ ಗೌಡಪ್ಪ ಬಿರಾದಾರ, ಇದ್ದರು.

