ಹಿರಿಯ ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ವಿಷಾದ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕರ್ನಾಟಕ ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರುಗಳು ಕೇವಲ ತಮ್ಮ ಮತಕ್ಷೇತ್ರವನ್ನಷ್ಟೇ ಉಸ್ತುವಾರಿ ಮಾಡುವುದರ ಮೂಲಕ ನಾಮಕೇವಾಸ್ತೆ ಜಿಲ್ಲಾ ಉಸ್ತುವಾರಿ ಸಚಿವರ ಹುದ್ದೆ ಹೊಂದುತ್ತಿರುವುದು ವಿಷಾದನೀಯ ಎಂದು ಹಿರಿಯ ಸಹಕಾರಿ ಧುರೀಣ ಶಿವಪ್ಪಗೌಡ ಬಿರಾದಾರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ ಅವರು, ಜಿಲ್ಲಾ ಉಸ್ತುವಾರಿಗಳಾದವರು ತಮ್ಮ ಜಿಲ್ಲೆಯ ಎಲ್ಲ ಮತಕ್ಷೇತ್ರಗಳ ಬಗ್ಗೆ ಗಮನಹರಿಸಿ ಆ ಕ್ಷೇತ್ರಗಳನ್ನು ಅಭಿವೃದ್ದಿ ಪಡಿಸಬೇಕು. ಆದರೆ ವಿಪರ್ಯಾಸವೆಂದರೆ ತಮ್ಮ ಮತ ಕ್ಷೇತ್ರಗಳನ್ನು ಅಷ್ಟೇ ಅಭಿವೃದ್ದಿ ಪಡಿಸುತ್ತಿದ್ದಾರೆ. ಹೀಗಾದರೆ ಜಿಲ್ಲಾ ಉಸ್ತುವಾರಿ ಹುದ್ದೆ ಯಾಕೆಬೇಕು ಎಂದು ಪ್ರಶ್ನಿಸಿದ ಅವರು ವರ್ಷದಲ್ಲಿ ಕನಿಷ್ಠ ತ್ರೈಮಾಸಿಕ ಸಭೆಯನ್ನು ತಾಲೂಕಾ ಮಟ್ಟದಲ್ಲಿ ಕರೆದು ಜನರ ಅಹವಾಲುಗಳನ್ನು ಸ್ವೀಕರಿಸುವಂತಾಗಬೇಕು. ಇದರಿಂದ ಶಾಸಕರಿಗೂ ಕಾರ್ಯದ ಭಾರದ ಒತ್ತಡ ಕಡಿಮೆಯಾಗುತ್ತದೆ ಮತ್ತು ತಾಲೂಕಿನ ಪ್ರಗತಿ ಸಾಧ್ಯವಾಗುತ್ತದೆ. ಜಿಲ್ಲಾ ಉಸ್ತುವಾರಿ ಮಂತ್ರಿಗಳು ತಮ್ಮ ಹುದ್ದೆಯ ಘನತೆಯನ್ನು ಹೆಚ್ಚಿಸಿದಂತಾಗುತ್ತದೆ. ಜನರ ತೆರಿಗೆ ಹಣ ಸದುಪಯೋಗವಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.