ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಇಂದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಬದುಕನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುವಂತಹ ಕೌಶಲ್ಯಾಧಾರಿತ ಉದ್ಯೋಗಗಳು ಸೃಷ್ಟಿಯಾಗಿವೆ. ಇದನ್ನು ಪ್ರತಿಯೊಬ್ಬರೂ ಅರಿತುಕೊಂಡು ತಮ್ಮ ಬದುಕಿನಲ್ಲಿ ಉದ್ಯೋಗ ಮಾಡುವ ಮೂಲಕ ತಮ್ಮ ಬದುಕನ್ನು ಉತ್ತಮವಾಗಿ ಕಳೆಯಬೇಕು ಎಂದು ಬಿಎಲ್ಇಡಿ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಮಾಜಶಾಸ್ತ್ರ ಪ್ರಾಧ್ಯಾಪಕ ಡಾ.ವೈ.ಬಿ.ನಾಯಕ ಹೇಳಿದರು.
ಪಟ್ಟಣದ ಬಿಎಲ್ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೌಶಲ್ಯಾಭಿವೃದ್ಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪದವಿ ಎಂಬುವದು ನಿರುದ್ಯೋಗ ಸೃಷ್ಟಿ ಮಾಡುವ ಹಂತ ಎಂದು ಬಹುತೇಕರು ನಂಬಿದ್ದಾರೆ. ಪದವಿ ಒಂದೇ ನಮ್ಮ ಬದುಕಿಗೆ ಆಸರೆಯಾಗಿ ನಿಲ್ಲುವಂತದ್ದು ಅಲ್ಲ. ಕಲಿಕೆಯ ಜೊತೆ ಜೊತೆಗೆ ಗಳಿಕೆಯನ್ನು ಮಾಡಿಕೊಳ್ಳುವುದು ಜಾಣರ ಲಕ್ಷಣವಾಗಿದೆ ಎಂದರು.
ಇಂದು ಮಹಿಳೆಯರು ಮನೆಯಲ್ಲಿಯೇ ಕುಳಿತುಕೊಂಡು ಹೊಲಿಗೆ, ವಸ್ತ್ರ ವಿನ್ಯಾಸ ಮೆಹಂದಿ, ಕಂಪ್ಯೂಟರ್, ಪ್ಯಾಶನ್ ಡಿಸೈನ್ ಮುಂತಾದ ಉತ್ತಮ ಹಣ ಗಳಿಕೆಯ ಚಿಕ್ಕ ಚಿಕ್ಕ ಉದ್ಯೋಗಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸಾಧ್ಯವಿದೆ. ವ್ಯವಹಾರಿಕ ಜ್ಞಾನವಿದ್ದ ಪ್ರತಿಯೊಬ್ಬ ವ್ಯಕ್ತಿಯೂ ಸ್ಪರ್ಧೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಯಶಸ್ವಿ ಜೀವನ ಸಾಗಿಸಲು ಸಾಧ್ಯವಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯು ಒಂದಿಲ್ಲೊಂದು ಹೊಸ ಹವ್ಯಾಸವನ್ನು, ಕಲೆಯನ್ನು ಹೊಂದಿರುತ್ತಾನೆ. ತನ್ನ ವಿಶೇಷವಾದ ಕಲೆ ಮತ್ತು ಹವ್ಯಾಸಗಳನ್ನೇ ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ತನ್ನ ಬದುಕಿನಲ್ಲಿ ಮುನ್ನಡೆದದ್ದೇ ಆದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಒಟ್ಟಿನಲ್ಲಿ ಸಾರ್ವತ್ರಿಕವಾಗಿ ಅವನು ಮೇಲ್ಮಟ್ಟಕ್ಕೆ ಬಂದು ಗೌರವದ ಸ್ಥಾನ ಪಡೆದುಕೊಳ್ಳಲು ಸಾಧ್ಯವಿದೆ. ಕೌಶಲ್ಯಾಧಾರಿತ ದುಡಿಮೆ ಇಲ್ಲದೇ ಇರುವುದರಿಂದ ನಾವು ಬಡವರಾಗುತ್ತಿದ್ದೇವೆ. ಆದ್ದರಿಂದ ಪ್ರತಿಯೊಬ್ಬರೂ ಒಂದಿಲ್ಲೊಂದು ವಿಶೇಷವಾದ ಕೌಶಲ್ಯವನ್ನು ರೂಢಿಸಿಕೊಂಡು ಬದುಕಿನಲ್ಲಿ ಮುನ್ನಡೆದರೆ ಬದುಕು ಉತ್ತಮವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಸಾಂಸ್ಕ್ರತಿಕ ವಿಭಾಗ ಮತ್ತು ಕನ್ನಡ ವಿಷಯದ ಮುಖ್ಯಸ್ಥ ಡಾ.ಬಿ.ಎಂ.ಸಾಲವಾಡಗಿ, ಸಂಖ್ಯಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎ.ಟಿ.ಶ್ರೀನಿವಾಸ, ದೈಹಿಕ ನಿರ್ದೇಶಕ ಪ್ರೊ.ಶಿವಮೂರ್ತಿ ಚಿಕ್ಕನರ್ತಿ, ಡಾ.ಶ್ರೀರಾಮ ಬಿಜಾಪುರ, ಎಂ.ಕೆ.ಯಾದವ, ಪಿ.ಎಸ್.ನಾಟೀಕಾರ, ಎಸ್.ಜೆ.ಸೂರ್ಯವಂಶಿ, ವ್ಹಿ.ಎನ್.ರಜಪೂತ, ಆರ್.ಎನ್.ರಾಠೋಡ, ಆರ್.ಎಂ.ಮುಜಾವರ ಇದ್ದರು. ಡಾ.ಬಿ.ಎಂ.ಸಾಲವಾಡಗಿ ನಿರೂಪಿಸಿದರು. ಡಾ.ಎಸ್.ಬಿ.ಜನಗೊಂಡ ವಂದಿಸಿದರು.

