ಉದಯರಶ್ಮಿ ದಿನಪತ್ರಿಕೆ
ಅಫಜಲಪುರ: ನೂರು ಕೋಟಿ ಭಾರತೀಯರು ನೆಮ್ಮದಿಯಾಗಿ ಊಟ ಮಾಡಿ ಮಲಗೋದಕ್ಕೆ ಮುಖ್ಯಕಾರಣ ಅನ್ನದಾತರು. ಹೀಗಾಗಿ ರೈತರ ಬದುಕು ಹಸನಾಗಿಸುವ ಕೆಲಸ ಎಲ್ಲರೂ ಸೇರಿ ಮಾಡೋಣ ಎಂದು ಶಾಸಕ ಎಂ.ವೈ ಪಾಟೀಲ್ ಹೇಳಿದರು.
ಅಫಜಲಪುರ ತಾಲೂಕಿನ ಉಡಚಣ ಗ್ರಾಮದಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ಉಚಿತವಾಗಿ ನೀಡಿ ಮಾತನಾಡಿದ ಅವರು, ನಮ್ಮ ತಾಲೂಕಿನ ರೈತರು ಶ್ರಮಜೀವಿಗಳು, ಶ್ರಮಪಟ್ಟು ಕೃಷಿ ಮಾಡಿ ಬೆಳೆ ಬೆಳೆಯುತ್ತಾರೆ. ಹೀಗಾಗಿ ರೈತರ ಕಲ್ಯಾಣಕ್ಕಾಗಿ ನಾವು ಕೂಡ ಸಾಕಷ್ಟು ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದ್ದೇವೆ. ಇನ್ನೂ ಕೆಲವೇ ವರ್ಷಗಳಲ್ಲಿ ಇಡೀ ತಾಲೂಕು ನೀರಾವರಿ ಕ್ಷೇತ್ರವಾಗಿ ರೂಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ನಾವು ಮಾಡುತ್ತೇವೆ ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಎಚ್ ಗಡಗಿಮನಿ ಮಾತನಾಡಿ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ರೈತರಿಗೆ ತೊಗರಿ, ಹೆಸರು, ಉದ್ದು ಬೀಜಗಳನ್ನು ವಿತರಿಸಲಾಯಿತು. ಸೂರ್ಯಕಾಂತಿ ಬೀಜಗಳು ಮಾತ್ರ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗಿದೆ ಎಂದ ಅವರು ಮುಂಗಾರು ಬಿತ್ತನೆ ಕಾರ್ಯ ತಾಲೂಕಿನಲ್ಲಿ ಭರದಿಂದ ನಡೆದಿದೆ. ಉತ್ತಮ ಮಳೆಯಾದರೆ ಉತ್ತಮ ಫಸಲು ಬರಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಜೈಭೀಮ ಸಿಂಗೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಪೂಜಾರಿ, ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಪ್ರಕಾಶ ಜಮಾದಾರ, ರೈತರಾದ ಬಸವರಾಜ ಭೂಶೆಟ್ಟಿ, ಶಿವಲಿಂಗಪ್ಪ ಮೇತ್ರಿ, ಪುಂಡಲೀಕ ನಲಬೆ, ಶಾವರಾವ್ ಅಡವೆನರ್, ವಿಠಲ್ ಕಡ್ಲಾಜಿ, ಜಾಫರಸಾಬ್ ಗಳೂರ್ಗಿ, ಸಿದ್ದು ಹೋರ್ತಿ, ಅನೀಲ ಕಮರಡ್ಡಿ ಸೇರಿದಂತೆ ಅನೇಕರು ಇದ್ದರು.

