ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ರಾಷ್ಟ್ರೀಕೃತ ಬ್ಯಾಂಕಿನ ದರೋಡೆ ಪ್ರಕರಣ, ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿ, ಅಪರಾಧಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದ ವಿಜಯಪುರ ಪೊಲೀಸ್ ಇಲಾಖೆಗೆ ಸಾವಿರ, ಸಾವಿರ ಸೆಲೂಟ್! ಎಂದು ಅಮ್ಮ ಫೌಂಢೇಶನ್ ಸಂಚಾಲಕರಾದ ಕಬೂಲ್ ಕೊಕಟನೂರ ಶ್ಲಾಘಿಸಿದ್ದಾರೆ.
ಕರ್ನಾಟಕ ಪೊಲೀಸ್ ಇಲಾಖೆಗೆ ಸವಾಲಾಗಿದ್ದ ದರೋಡೆ ಪ್ರಕರಣ ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸರ್ ಅವರ ಬುದ್ದಿಮತ್ತೆ, ಅವಿರತ ಶ್ರಮ, ಚಾಣಾಕ್ಷತೆ, ಸಿಬ್ಬಂಧಿಗಳ ಜೊತೆ ಸೇವಾ ಕಾರ್ಯ, ಇಡೀ ಪ್ರಕರಣ ಸುಖಾಂತ್ಯಗೊಳಿಸುವಲ್ಲಿ ಸಹಕಾರಿಯಾಯಿತು. ಪೊಲೀಸ್ ಇಲಾಖೆಯ ನಿದ್ದೆಗೆಡಿಸಿದ್ದ ಇಡೀ ಪ್ರಕರಣವನ್ನು ಎಂಟು ತನಿಖಾ ತಂಡಗಳನ್ನು ರಚಿಸುವುದರೊಂದಿಗೆ ಅತ್ಯಂತ ಕರಾರುವಕ್ಕಾಗಿ ನಿಭಾಯಿಸಿ ಸರ್ವರಿಂದಲೂ ಸೈ ಎನಿಸಿಕೊಂಡಿರುವುದು ಶ್ಲಾಘನೀಯವಾಗಿದೆ. ಜಗ ಮೆಚ್ಚುವ ಕಾರ್ಯಗೈದ ಎಸ್ಪಿ ಅವರ ಸರಳ ಸ್ವಭಾವ, ಮೃದು ಮಾತು, ನಗು ಮೊಗ, ದಕ್ಷ ಕ್ರೀಯಾಶೀಲತೆ, ವೃತ್ತಿ ಗಾಂಭೀರ್ಯ ಅವರ ಕಾರ್ಯಕ್ಷಮತೆಗೆ ಹಿಡಿದ ಕೈಗನ್ನಡಿಯಾಗಿದೆ. ಪೊಲೀಸ್ ಇಲಾಖೆಯ ರೋಲ್ ಮಾಡೆಲ್ ಆಗಿರುವ ಎಸ್ಪಿ ಲಕ್ಷ್ಮಣ ನಿಂಬರಗಿ ನಮ್ಮ ಜಿಲ್ಲೆಯವರು ಎಂಬುದು ನಮ್ಮೆಲ್ಲರಿಗೂ ಹೆಮ್ಮೆ ಎಂದು ಕೊಕಟನೂರ ಶ್ಲಾಘಿಸಿದ್ದಾರೆ.