ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ಬಸವ ಭವನದಲ್ಲಿ ಜು. ೧೬ ರಂದು ಮಧ್ಯಾನ್ಹ ೩ ಗಂಟೆಗೆ ಹಮ್ಮಿಕೊಂಡಿರುವ ಜನರಿಂದ ಜನರಿಗಾಗಿ ಜನರಿಗೋಸ್ಕರ ಜೆಡಿಎಸ್ ಪಕ್ಷ ಕಾರ್ಯಕ್ರಮಕ್ಕೆ ಜೆಡಿಎಸ್ ಪಕ್ಷದ ಯುವ ಮೋರ್ಚಾದ ರಾಜ್ಯಾಧ್ಯಕ್ಷ ನಿಖಿಲ್ಕುಮಾರಸ್ವಾಮಿ ಆಗಮಿಸುತ್ತಾರೆ ಎಂದು ಜೆಡಿಎಸ್ ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಸೋಮನಗೌಡ(ಅಪ್ಪುಗೌಡ) ಪಾಟೀಲ, ಜೆಡಿಎಸ್ ಪಕ್ಷದ ತಾಲೂಕಾಧ್ಯಕ್ಷ ಜಗದೀಶ ಕೊಟ್ರಶೆಟ್ಟಿ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ಸಂಘಟನೆ ಮಾಡುವ ದೃಷ್ಟಿಕೋನವಿಟ್ಟುಕೊಂಡು ರಾಜ್ಯಾದ್ಯಂತ ಜನರಿಂದ ಜನರಿಗಾಗಿ ಜನರಿಗೋಸ್ಕರ ಜೆಡಿಎಸ್ ಪಕ್ಷವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ಪ್ರಥಮ ಬಾರಿಗೆ ಬಸವೇಶ್ವರ ಜನ್ಮಸ್ಥಳ ಬಸವನಬಾಗೇವಾಡಿಗೆ ನಿಖಿಲ್ಕುಮಾರಸ್ವಾಮಿ ಆಗಮಿಸುತ್ತಿದ್ದಾರೆ. ತಾಲೂಕಿನ ಮನಗೂಳಿ ಪಟ್ಟಣದಿಂದ ಬೃಹತ್ ಸೈಕಲ್ ಮೋಟಾರ್ ರ್ಯಾಲಿಯೊಂದಿಗೆ ನಿಖಿಲ್ಕುಮಾರಸ್ವಾಮಿ ಬಸವನಬಾಗೇವಾಡಿ ಪಟ್ಟಣಕ್ಕೆ ಸ್ವಾಗತಿಸಿಕೊಳ್ಳಲಾಗುವದು. ಸೈಕಲ್ ಮೋಟಾರ್ ರ್ಯಾಲಿ ಡಾ.ಬಿ.ಆರ್.ಅಂಬೇಡ್ಕರ ವೃತ್ತದವರೆಗೂ ತೆರಳಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ನಿಖಿಲ್ಕುಮಾರಸ್ವಾಮಿ ಮಾಲಾರ್ಪಣೆ ಮಾಡುವರು. ನಂತರ ಬಾಬುಸುಹಾನಿ ದರ್ಗಾಕ್ಕೆ ಭೇಟಿ ನೀಡಿ ಮಾಲಾರ್ಪಣೆ, ಬಸವೇಶ್ವರ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರ(ಬಸವೇಶ್ವರ) ದೇವರ ದರ್ಶನ ಪಡೆದುಕೊಳ್ಳುವರು. ಇಂಗಳೇಶ್ವರ ರಸ್ತೆಯಲ್ಲಿರುವ ರಾಣಿಚನ್ನಮ್ಮ ವೃತ್ತದಲ್ಲಿ ಮಾಲಾರ್ಪಣೆ ಮಾಡಿದ ನಂತರ ಕಾರ್ಯಕ್ರಮ ಹಮ್ಮಿಕೊಂಡಿರುವ ಬಸವ ಭವನಕ್ಕೆ ತೆರಳುವರು. ಈ ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯ ಮುಖಂಡರು, ಹಿರಿಯ ಮುಖಂಡರು ಸೇರಿದಂತೆ ಆಗಮಿಸುವರು. ಬಸವನಬಾಗೇವಾಡಿ ಮತಕ್ಷೇತ್ರದ ಮುಖಂಡರು, ಕಾರ್ಯಕರ್ತರು,ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಮನವಿ ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಬಿ.ಕೆ.ಕಲ್ಲೂರ, ಎನ್.ಎಸ್.ಪಾಟೀಲ, ಎಸ್.ಎ.ಯರನಾಳ,ಉಮೇಶ ಹಾರಿವಾಳ, ಸುರೇಶ ಚಿಂಚೋಳ್ಳಿ,ಅಂಬೋಜಿ ಪವಾರ, ಬಾಳುಸಾಹುಕಾರ ಕುಮಶಿ, ಶಂಕರ ರೇವಡಿ, ಬಸವರಾಜ ಸಾಲಿಮಠ, ಮಲ್ಲಿಕಾರ್ಜುನ ಅವಟಿ, ಬಾಬು ಬೆಲ್ಲದ, ಮನ್ನಾನ ಶಾಬಾದಿ, ರಫೀಕ ಸಾಠಿ, ಸಂಜೀವ ಬಿರಾದಾರ, ಜೆಡಿಎಸ್ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಶಾಂತಕ್ಕ ರಾಠೋಡ ಇತರರು ಇದ್ದರು.

